ಹೊಸದಿಲ್ಲಿ: ಸರಕಾರ ರಚಿಸುವ ಶಿವಸೇನೆ ಕನಸಿಗೆ ತಣ್ಣೀರು ಎರಚುವ ಪ್ರಯತ್ನವನ್ನು ಬಿಜೆಪಿ ಸದ್ದಿಲ್ಲದೇ ತೀವ್ರಗೊಳಿಸಿದ್ದು, ಶಿವಸೇನೆಗೆ ಬೆಂಬಲ ನೀಡದೇ ಇದ್ದರೆ ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರನ್ನು ರಾಷ್ಟ್ರಪತಿ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿದೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಜ್ಯಸಭೆಯಲ್ಲಿ ಎನ್ಸಿಪಿ ಮತ್ತು ಬಿಜೆಡಿಯನ್ನು ಹೊಗಳಿದ್ದರು. ಅದಾದ ಬಳಿಕ, ''ಮಹಾರಾಷ್ಟ್ರದಲ್ಲಿ ಶಿವಸೇನೆ ತನ್ನ ಹಾದಿಯನ್ನು ತಾನೇ ನೋಡಿಕೊಳ್ಳಬೇಕು, ನಮ್ಮ ರಾಜಕಾರಣ ನಾವು ಮಾಡುತ್ತೇವೆ,'' ಎಂದು ಶರದ್ ಪವಾರ್ ಹೇಳಿದ್ದರು. ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರನ್ನು ಭೇಟಿ ಮಾಡಿದ ಬಳಿಕವೂ ಪವಾರ್ ದ್ವಂದ್ವ ಹೇಳಿಕೆಗಳನ್ನೇ ನೀಡಿದ್ದಾರೆ. ''ಸರಕಾರ ರಚನೆ ಸಂಬಂಧ ಚರ್ಚೆ ನಡೆದೇ ಇಲ್ಲ,'' ಎಂದು ಕೆಲವು ಮಾಧ್ಯಮಗಳಿಗೆ ತಿಳಿಸಿದರೆ, '' ಯುಪಿಎಯಲ್ಲಿನ ಎಲ್ಲಪಕ್ಷಗಳ ಜತೆಗೂ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುತ್ತೇವೆ,'' ಎಂದು ಇನ್ನು ಕೆಲವು ಮಾಧ್ಯಮಗಳಿಗೆ ತಿಳಿಸಿದ್ದರು. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಶರದ್ ಪವಾರ್ ರಾಷ್ಟ್ರಪತಿ ಸ್ಥಾನದ ಆಸೆಯಿಂದ ಶಿವಸೇನೆಗೆ ಬೆಂಬಲ ನೀಡುವ ತೀರ್ಮಾನದಿಂದ ಹಿಂದೆ ಸರಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಆದರೆ ಬಿಜೆಪಿ ಅಥವಾ ಎನ್ಸಿಪಿ ಮೂಲಗಳು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2022ರ ಜುಲೈ 14ರಂದು ನಿವೃತ್ತರಾಗಲಿದ್ದಾರೆ. ಶರದ್ ಪವಾರ್ ಅವರ ರಾಜ್ಯಸಭಾ ಸದಸ್ಯತ್ವ 2020ರ ಏ.2ರಂದು ಕೊನೆಯಾಗಲಿದೆ. 22ರಂದು ಸಭೆ: ಸಾಮಾನ್ಯ ಕನಿಷ್ಠ ಕಾರ್ಯಕ್ರಮ, ಅಧಿಕಾರ ಹಂಚಿಕೆ ಸೂತ್ರ ಅಂತಿಮವಾದ ಬಳಿಕವೂ ಅಧಿಕೃತ ಬೆಂಬಲ ಘೋಷಣೆಗೆ ಎನ್ಸಿಪಿ, ಕಾಂಗ್ರೆಸ್ ಮೀನಮೇಷ ಎಣಿಸುತ್ತಿರುವುದರಿಂದ ದಿಕ್ಕೆಟ್ಟಿರುವ ಶಿವಸೇನೆಯು ನ.22ರಂದು ಪಕ್ಷದ ಶಾಸಕರ ಸಭೆ ಕರೆದಿದೆ. ಪಕ್ಷದ ವರಿಷ್ಠ ಉದ್ಧವ್ ಠಾಕ್ರೆ ಅವರು ಹಾಲಿ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪಕ್ಷದ ಮುಂದಿನ ನಡೆಯನ್ನು ಅಂದು ತೀರ್ಮಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ವಿರುದ್ಧ ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಶಿವಸೇನೆ ಟೀಕಾಪ್ರಹಾರ ಮುಂದುವರಿಸಿದೆ. ''ಮೊಹಮದ್ ಘಜನಿ ಯುದ್ಧದಲ್ಲಿ ಗೆದ್ದು ಹಿಂದೂ ರಾಜ ಪೃಥ್ವಿರಾಜ್ ಚೌಹಾಣ್ನನ್ನು ಹತ್ಯೆಗೈದ. ಮಹಾರಾಷ್ಟ್ರದಲ್ಲಿ ಬಹಳ ಹಿಂದೆಯೇ ಹಿಂದುತ್ವದ ಬಗ್ಗೆ ಜಾಗೃತಿ ಮೂಡಿಸಿದ ನಮಗೆ ಕೆಲವರು ಬೆನ್ನಿಗೆ ಚೂರಿ ಇರಿದಿದ್ದಾರೆ,'' ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಬಿಜೆಪಿ ಹೆಸರು ಪ್ರಸ್ತಾಪಿಸದೇ ಟೀಕಿಸಲಾಗಿದೆ. ಇಂದು ಎನ್ಸಿಪಿ -ಕಾಂಗ್ರೆಸ್ ಸಭೆ ಕಾಂಗ್ರೆಸ್-ಎನ್ಸಿಪಿ ನೂತನ ಮೈತ್ರಿ ಸರಕಾರ ರಚನೆ ಕಸರತ್ತು ಅಂತಿಮ ಘಟ್ಟ ತಲುಪಿದ್ದು, ದಿಲ್ಲಿಯಲ್ಲಿ ಬುಧವಾರ ಉಭಯ ಪಕ್ಷಗಳ ನಿರ್ಣಾಯಕ ಸಭೆ ನಡೆಯಲಿದೆ. ಶರದ್ ಪವಾರ್-ಸೋನಿಯಾ ಗಾಂಧಿ ಮುಂದಿನ ಕ್ರಮ ಕುರಿತು ಚರ್ಚಿಸಲಿದ್ದಾರೆ.
from India & World News in Kannada | VK Polls https://ift.tt/2pxGvWj