ಹೊಸದಿಲ್ಲಿ: ಭಾರತದ ಪ್ರಸಿದ್ಧ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ಗೂಢಚರ್ಯೆ ನಡೆಸಲಾಗಿದೆ ಎಂಬ ವಿಚಾರ ಈಗ ವಿವಾದಕ್ಕೆ ಕಾರಣವಾಗಿದ್ದು, ಇದು ಕೇಂದ್ರ ಸರಕಾರ ಹಾಗೂ ಸಾಮಾಜಿಕ ಜಾಲತಾಣ ಸಂಸ್ಥೆಯ ನಡುವೆ ಜಟಾಪಟಿಗೆ ಕಾರಣವಾಗಿದೆ. ಭಾರತದ ಕೆಲವು ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ ಜಗತ್ತಿನ 20 ದೇಶಗಳ ಪ್ರಸಿದ್ಧ ವ್ಯಕ್ತಿಗಳ ವಾಟ್ಸ್ ಆ್ಯಪ್ ಚಟುವಟಿಕೆಗಳ ಮೇಲೆ ಗೂಢಚರ್ಯೆ ನಡೆಸಲಾಗಿದೆ ಎಂದು ಸ್ವತಃ ವಾಟ್ಸ್ಆ್ಯಪ್ ಜಾಲತಾಣವೇ ಬಹಿರಂಗಪಡಿಸಿತ್ತು. ಇಸ್ರೇಲಿ ಮೂಲದ 'ಎನ್ಎಸ್ಒ' ಸಂಸ್ಥೆ ಅಭಿವೃದ್ಧಿಪಡಿಸಿದ 'ಪೆಗಾಸಸ್' ವೈರಸ್ ಮೂಲಕ ಭಾರತದ 121 ವಾಟ್ಸ್ಆ್ಯಪ್ ಬಳಕೆದಾರರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಕಳೆದ ಸೆಪ್ಟೆಂಬರ್ನಲ್ಲೇ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಎರಡನೇ ಬಾರಿ ಎಚ್ಚರಿಸಿದ್ದೆವು. ಇದಕ್ಕೂ ಮೊದಲು ಕಳೆದ ಮೇನಲ್ಲೇ ಸರಕಾರಕ್ಕೆ ಇಂತಹದೊಂದು ಗೂಢಚರ್ಯೆ ಬಗ್ಗೆ ಮಾಹಿತಿ ನೀಡಿದ್ದೆವು ಎಂದು ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಸಂಸ್ಥೆ ತಿಳಿಸಿದೆ. ಆದರೆ, ಸಂಸ್ಥೆಯು ನೀಡಿದ ಮಾಹಿತಿಯು ಅಪೂರ್ಣ ಮತ್ತು ಅಸಮರ್ಪಕವಾಗಿತ್ತು ಎಂದು ಸರಕಾರ ತಿರುಗೇಟು ನೀಡಿದೆ. ಗೂಢಚರ್ಯೆ ವಿವಾದ ತೀವ್ರವಾಗುತ್ತಿದ್ದಂತೆ ಈ ಬಗ್ಗೆ ಸರಕಾರ ಕೇಳಿದ ಸ್ಪಷ್ಟನೆಗೆ ವಾಟ್ಸ್ಆ್ಯಪ್ ಸಂಸ್ಥೆ ಉತ್ತರ ನೀಡಿದೆ. ''ವಾಟ್ಸ್ಆ್ಯಪ್ ನೀಡಿರುವ ಮಾಹಿತಿಯನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಆ ಬಳಿಕ ಈ ಸಂಬಂಧ ಚರ್ಚೆ ನಡೆಸಲಾಗುವುದು,'' ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ. ಏನಿದು ವಿವಾದ?: ವಿಶ್ವಾದ್ಯಂತ ಹಲವು ದೇಶಗಳಲ್ಲಿಸುಮಾರು 1,400 ಬಳಕೆದಾರರ ಮೇಲೆ ಗೂಢಚರ್ಯೆ ನಡೆಸಲಾಗುತ್ತಿದೆ. ರಾಯಭಾರಿಗಳು, ರಾಜಕೀಯ ವಿರೋಧಿಗಳು, ಪತ್ರಕರ್ತರು ಹಾಗೂ ಹಿರಿಯ ಸರಕಾರಿ ಅಧಿಕಾರಿಗಳೂ ಈ ಪಟ್ಟಿಯಲ್ಲಿದ್ದಾರೆ. ಇಸ್ರೇಲಿ ಮೂಲದ 'ಎನ್ಎಸ್ಒ' ಹೆಸರಿನ ಗೂಢಚರ್ಯೆ ಸಂಸ್ಥೆ ಇದಕ್ಕೆ ನೆರವು ನೀಡಿದೆ ಎಂದು ವಾಟ್ಸ್ಆ್ಯಪ್ ಕಳೆದ ಗುರುವಾರ ಬಹಿರಂಗಪಡಿಸಿತ್ತು. ಇದಕ್ಕಾಗಿ ಇಸ್ರೇಲಿ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಆರಂಭಿಸಿರುವುದಾಗಿ ತಿಳಿಸಿತ್ತು. ಆದರೆ, ಯಾವ ಕಾರಣಕ್ಕಾಗಿ, ಯಾರು ಹೀಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಖಾತೆಗಳನ್ನು ಟಾರ್ಗೆಟ್ ಮಾಡಲು ಹೇಳಿದರು ಎಂಬ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಈ ಮಧ್ಯೆ ಅಧಿಕೃತ ಸರಕಾರಿ ಗುಪ್ತಚರ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳಿಗೆ 'ತಂತ್ರಜ್ಞಾನ'ವನ್ನು ಮಾರಾಟ ಮಾಡಿದ್ದೇವೆ ಅಷ್ಟೇ. ಇದರಲ್ಲಿಸಂಸ್ಥೆಯ ತಪ್ಪಿಲ್ಲಎಂದು ಇಸ್ರೇಲಿ ಸಂಸ್ಥೆಯು ಸ್ಪಷ್ಟಪಡಿಸಿದೆ. ಆದರೆ ಇಸ್ರೇಲಿ ಸಂಸ್ಥೆಯೊಂದಿಗೆ ಯಾವುದೇ ವ್ಯವಹಾರ ಮಾಡಿಲ್ಲಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.
from India & World News in Kannada | VK Polls https://ift.tt/33gg06r