ಆಗಾಗ ಜೆಎನ್‌ಯು ವಿವಾದಗಳಿಂದಲೇ ಸುದ್ದಿಯಾಗುತ್ತಿರುವುದೇಕೆ?

ದಿಲ್ಲಿಯ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ, ವಿದ್ಯಾರ್ಥಿ ಪ್ರತಿಭಟನೆಗಳು, ಆಡಳಿತದ ವಿರುದ್ಧ ನಿರಂತರ ಭಿನ್ನ ಧ್ವನಿ, ಬಂಡಾಯದ ಸ್ವಭಾವಗಳನ್ನು ಪೋಷಿಸುತ್ತ ಬಂದಿದೆ. ಜೆಎನ್‌ಯು ಹುಟ್ಟಿದಾಗಿನಿಂದಲೂ ಇಲ್ಲಿ ಎಡಪಂಥೀಯ ಚಿಂತಕರು, ಪ್ರೊಫೆಸರ್‌ಗಳು, ಇತಿಹಾಸಕಾರರು, ಉಪನ್ಯಾಸಕರದೇ ಕಾರುಬಾರು. ಇಲ್ಲಿಪಾಠ ಮಾಡುವವರೂ, ಸೆಮಿನಾರ್‌ಗಳಿಗೆ ಆಗಮಿಸುವವರೂ ಹೆಚ್ಚಾಗಿ ಎಡಪಂಥೀಯರೇ. ವಿದ್ಯಾರ್ಥಿಗಳಲ್ಲೂ ಹೆಚ್ಚಾಗಿ ಎಡಪಂಥೀಯ ಚಿಂತನೆಯುಳ್ಳವರೇ ಕಾಣಿಸುತ್ತಾರೆ. 1969ರಲ್ಲಿ ಜೆಎನ್‌ಯು ಸ್ಥಾಪನೆಯಾಯಿತು. 1972ರಿಂದ ಇಲ್ಲಿ ವಿದ್ಯಾರ್ಥಿ ಚುನಾವಣೆಗಳು ಆರಂಭವಾದವು. ಅಂದಿನಿಂದ ಇಂದಿನವರೆಗೆ, ಮಾಕ್ರ್ಸಿಸ್ಟ್‌ ಕಮ್ಯುನಿಸ್ಟ್‌ ಪಾರ್ಟಿ (ಸಿಪಿಐಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ(ಎಸ್‌ಎಫ್‌ಐ) ಹಾಗೂ ಮಾಕ್ರ್ಸಿಸ್ಟ್‌ ಲೆನಿನಿಸ್ಟ್‌ ಪಾರ್ಟಿ(ಸಿಪಿಐಎಂಎಲ್‌)ನ ವಿದ್ಯಾರ್ಥಿ ಘಟಕವಾದ ಆಲ್‌ ಇಂಡಿಯಾ ಸ್ಟೂಡೆಂಟ್ಸ್‌ ಅಸೋಸಿಯೇಶನ್‌ನ ಅಭ್ಯರ್ಥಿಗಳು ವಿದ್ಯಾರ್ಥಿ ಒಕ್ಕೂಟಕ್ಕೆ 33 ಬಾರಿ ಇಲ್ಲಿ ಆಯ್ಕೆಯಾಗಿದ್ದಾರೆ. ಎಬಿವಿಪಿಯ ಅಭ್ಯರ್ಥಿಗಳು ಎರಡು ಬಾರಿ ಮಾತ್ರ (1991, 2000) ಚುನಾಯಿತರಾಗಿದ್ದಾರೆ. ಹಾಗೆಂದು ಭಿನ್ನ ಚಿಂತನಧಾರೆಯುಳ್ಳವರು ಇಲ್ಲಿ ಇಲ್ಲವೆಂದಲ್ಲ. ಆದರೆ ಇವರ ಧ್ವನಿ ಕ್ಷೀಣ. ಜೆಎನ್‌ಯುವಿನ ಘನತೆ ಸಣ್ಣದೇನಲ್ಲ. ಹೊರದೇಶಗಳಲ್ಲೂ ನಮ್ಮ ದೇಶದ ಪ್ರತಿಷ್ಠೆಯ ಬಾವುಟ ಹಾರಿಸಿದವರು ಇಲ್ಲಿ ಅಧ್ಯಯನ ಮಾಡಿದ್ದಾರೆ. ಉದಾಹರಣೆಗೆ, ಈಗಿನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದವರು. ಪ್ರಸ್ತುತ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಇವರೆಲ್ಲ ಇಲ್ಲಿ ಓದಿದವರು. ಇಲ್ಲಿನ ಕುಲಪತಿಯಾಗಿದ್ದ ಕೆ.ಆರ್‌. ನಾರಾಯಣನ್‌ ಮುಂದೆ ರಾಷ್ಟ್ರಪತಿಗಳಾದರು. ಕಮ್ಯುನಿಸ್ಟ್‌ ನಾಯಕ ಪ್ರಕಾಶ್‌ ಕಾರಟ್‌ ಕೂಡ ಇಲ್ಲಿನ ಉತ್ಪನ್ನ. ಅಲ್ಪಸಂಖ್ಯಾತ, ಸ್ತ್ರೀ, ದಲಿತ ಹೋರಾಟಗಳನ್ನು ಪ್ರಜ್ಞಾಪೂರ್ವಕವಾಗಿ ಪೋಷಿಸುತ್ತ ಬಂದಿದ್ದ ಇಲ್ಲಿನ ಹೋರಾಟಗಳು ವಿವಾದದ ಸ್ವರೂಪ ಪಡೆದದ್ದು ಕಳೆದೊಂದು ದಶಕದಿಂದ. ಈಗಿನ ವಿವಾದವೇನು?ಜೆಎನ್‌ಯು ಆಡಳಿತ ಕಳೆದೊಂದು ದಶಕದಿಂದ ಹೆಚ್ಚು ಮಾಡದೆ ಇದ್ದ ಹಾಸ್ಟೆಲ್‌ ಶುಲ್ಕವನ್ನು ಈ ವರ್ಷ ಹೆಚ್ಚಿಸಿತು. ಹಾಸ್ಟೆಲ್‌ ಪ್ರವೇಶ ಸಮಯ, ಊಟದ ಮನೆಯ ಡ್ರೆಸ್‌ ಕೋಡ್‌ ಇತ್ಯಾದಿಗಳನ್ನೂ ಬದಲಾಯಿಸಿತು. ಇದರಿಂದ ರೊಚ್ಚಿಗೆದ್ದ ಕೆಲವು ವಿದ್ಯಾರ್ಥಿಗಳು ಮುಷ್ಕರ ಹೂಡಿದರು. ಸಹ ಪ್ರಾಧ್ಯಾಪಕಿಯೊಬ್ಬರನ್ನು ಕ್ಲಾಸಿನಲ್ಲೇ 20 ಗಂಟೆಗಳ ಕಾಲ ಕೂಡಿಹಾಕಿದರು. ನಂತರ ಇವರನ್ನು ಬಲುಕಷ್ಟದಿಂದ ಬಿಡಿಸಿಕೊಳ್ಳಲಾಯಿತು. ಎಐಸಿಟಿಇ ಕೇಂದ್ರ ಕಚೇರಿಯಲ್ಲಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಕ್ರಿಯಾಲ್‌ ಅವರನ್ನು ಐದು ಗಂಟೆಗಳ ಕಾಲ ದಿಗ್ಬಂಧನಕ್ಕೊಳಪಡಿಸಿದರು. ಮಹಿಳಾ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆನಡೆಸಿ, ಆವರಣ ಗೋಡೆಗಳ ಮೇಲೆ ಅಸಹ್ಯವಾಗಿ ಗೀಚಿದರು. ಸ್ವಾಮಿ ವಿವೇಕಾನಂದರ ಮೂರ್ತಿಯನ್ನೂ ವಿರೂಪಗೊಳಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಅಂಜಿ ವಿವಿ ಆಡಳಿತ ಸ್ವಲ್ಪಮಟ್ಟಿಗೆ ಶುಲ್ಕವನ್ನು ಇಳಿಸಿದೆ; ಆದರೆ ಇದು ವಿದ್ಯಾರ್ಥಿಗಳಿಗೆ ತೃಪ್ತಿ ಕೊಟ್ಟಿಲ್ಲ. ತುಕಡೇ- ತುಕಡೇ2016ರಲ್ಲಿ ಜೆಎನ್‌ಯು ಕಂಡದ್ದು ಬಹುಶಃ ಅದರ ಜೀವಮಾನದ ಅತಿ ದೊಡ್ಡ ವಿವಾದ. ಸಂಸತ್ತಿನ ಮೇಲೆ ಉಗ್ರರ ದಾಳಿಯ ರೂವಾರಿಯಾಗಿದ್ದ ಅಫ್ಜಲ್‌ ಗುರುವಿಗೆ ವಿಧಿಸಲಾದ ಗಲ್ಲುಶಿಕ್ಷೆಯನ್ನು ವಿರೋಧಿಸಿ, ಅನುಮತಿ ದೊರೆಯದಿದ್ದರೂ ವಿದ್ಯಾರ್ಥಿಗಳು ಫೆ.9ರಂದು ಪ್ರತಿಭಟನೆ ಹಮ್ಮಿಕೊಂಡರು. ಈ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್‌, ಭಾರತ್‌ ತೆರೆ ತುಕಡೇ ಹೋಂಗೆ ಮುಂತಾದ ದೇಶವಿರೋಧಿ ಸ್ಲೋಗನ್‌ಗಳು ಕೇಳಿಬಂದವು. ಇದನ್ನು ಎಬಿವಿಪಿ ವಿರೋಧಿಸಿತು. ಜೆಎನ್‌ಯು ಆಡಳಿತದಿಂದ ಆಂತರಿಕ ತನಿಖೆ ನಡೆಯಿತು. ಪೊಲೀಸರು ದೇಶದ್ರೋಹದ ಕೇಸು ದಾಖಲಿಸಿಕೊಂಡು, ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌, ಉಮರ್‌ ಖಾಲಿದ್‌ರನ್ನು ಬಂಧಿಸಿದರು. ಇದನ್ನು ವಿರೋಧಿಸಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯಿತು. ಕನ್ಹಯ್ಯ ವಿರುದ್ಧ ಮಂಡಿಸಲಾದ ಆಡಿಯೋ ಸಾಕ್ಷ್ಯದಲ್ಲಿ, ದೇಶವಿರೋಧಿ ಘೋಷಣೆಯನ್ನು ಮೊಳಗಿಸಿದವನು ಕನ್ಹಯ್ಯನೇ ಎಂದು ಸಾಬೀತುಪಡಿಸಲಾಗಲಿಲ್ಲ. ಪಾಕ್‌ ಕವಿಗಳ ಮುಷಾಯಿರಾ2000ನೇ ಇಸವಿಯ ಏಪ್ರಿಲ್‌ನಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಾರತ- ಪಾಕಿಸ್ತಾನದ ಕವಿಗಳ ಮುಷಾಯಿರಾವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಪಾಕಿಸ್ತಾನಿ ಕವಿಗಳ ಕವನವನ್ನು ಕೆಲವು ಪ್ರೇಕ್ಷಕರು ವಿರೋಧಿಸಿದರು; ಕವಿಗೋಷ್ಠಿ ಗೊಂದಲದಲ್ಲಿ ಮುಗಿಯಿತು. ವಿದ್ಯಾರ್ಥಿ ಚುನಾವಣೆಗೆ ತಡೆ2008ರಲ್ಲಿ ಇಲ್ಲಿನ ವಿದ್ಯಾರ್ಥಿ ಚುನಾವಣೆಯನ್ನು, ವಿವಿಯು ಲಿಂಗ್ಡೋ ಸಮಿತಿಯ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎಂಬ ಕಾರಣದಿಂದ ಸುಪ್ರೀಂ ಕೋರ್ಟ್‌ ತಡೆಹಿಡಿಯಿತು. ಹಲವಾರು ಸುತ್ತಿನ ನಾಯಕರ ಮಾತುಕತೆಗಳ ಬಳಿಕ 2011ರಲ್ಲಿ ಈ ತಡೆಯಾಜ್ಞೆಯನ್ನು ಹಿಂತೆಗೆಯಲಾಯಿತು. ದಾಂತೆವಾಡ ಹತ್ಯಾಕಾಂಡ2010ರಲ್ಲಿ, ದಾಂತೆವಾಡದಲ್ಲಿ ನಡೆದ ನಕ್ಸಲ್‌ ಭಯೋತ್ಪಾದನೆಯಲ್ಲಿ 76 ಸಿಆರ್‌ಪಿಎಫ್‌ ಯೋಧರು ಹತರಾದರು. ಇದೇ ಸಂದರ್ಭದಲ್ಲಿ ಜೆಎನ್‌ಯು ಫೋರಂ, 'ಜನತೆಯ ಮೇಲೆ ಯುದ್ಧ' ವಿರೋಧಿಸಿ ಕಾರ್ಯಕ್ರಮ ಹಮ್ಮಿಕೊಂಡಿತು. ಇದು ಸೈನಿಕರ ಹತ್ಯೆಯನ್ನು ಸಂಭ್ರಮಿಸಿದಂತಾಗುತ್ತದೆ ಎಂದು ಇದನ್ನು ಎಬಿವಿಪಿ ವಿರೋಧಿಸಿತು. ಬೀಫ್‌ ಉತ್ಸವಆಹಾರ ಹಕ್ಕನ್ನು ಸಮರ್ಥಿಸಿಕೊಳ್ಳಲು 2012ರಲ್ಲಿ ಬೀಫ್‌ ಮತ್ತು ಫೋರ್ಕ್ ಉತ್ಸವವನ್ನು ಜೆಎನ್‌ಯು ಫಾರ್ಮೆಂಟೇಶನ್‌ ಸಮಿತಿ ಆಯೋಜಿಸಿತು. ಆದರೆ ಇದರಿಂದ ಆಕ್ರೋಶಗೊಂಡ ಎಬಿವಿಪಿ ಹಾಗೂ ಹಿಂದೂ ಸಂಘಟನೆಗಳು, ಆವರಣದಲ್ಲಿ ಬೀಫ್‌ ಸೇವನೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂದು ಪ್ರತಿಭಟಿಸಿದರು. ಕಡೆಗೆ ಈ ವಿವಾದ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿ, ಉತ್ಸವಕ್ಕೆ ಅನುಮತಿ ನಿರಾಕರಿಸಲಾಯಿತು. ಕಿಸ್‌ ಆಫ್‌ ಲವ್‌ಹಿಂದೂ ಸಂಘಟನೆಗಳು ನೈತಿಕ ಪೊಲೀಸ್‌ಗಿರಿ ನಡೆಸುತ್ತಿವೆ ಎಂದು ಆರೋಪಿಸಿ ಸುಮಾರು 200ರಷ್ಟು ಜೆಎನ್‌ಯು ವಿದ್ಯಾರ್ಥಿಗಳು 'ಕಿಸ್‌ ಆಫ್‌ ಲವ್‌' ಅಭಿಯಾನ ಹಮ್ಮಿಕೊಂಡರು. ಸಾರ್ವಜನಿಕವಾಗಿ ಮುತ್ತಿಕ್ಕಿಕೊಳ್ಳುವ ಈ ಅಭಿಯಾನ ಆರೆಸ್ಸೆಸ್‌ ಕಚೇರಿಯ ಮುಂದುಗಡೆಯೂ ನಡೆಯಿತು. ಮಹಿಷಾಸುರ ದಿವಸ2014ರಲ್ಲಿ ವಿದ್ಯಾರ್ಥಿಗಳ ಒಂದು ಗುಂಪು, ದಸರಾ ಸಂದರ್ಭದಲ್ಲಿ ದೇವಿಯ ಪೂಜೆ ಮಾಡಬೇಡಿರೆಂದೂ, ಅದರ ಬದಲು ಮಹಿಷಾಸುರ ಹುತಾತ್ಮ ದಿವಸವನ್ನು ಆಚರಿಸಬೇಕೆಂದೂ ಕರಪತ್ರಗಳನ್ನು ಹಂಚಿ ಪ್ರಚಾರ ನಡೆಸಿತು. ಇದನ್ನು ಎಬಿವಿಪಿ ಪ್ರತಿಭಟಿಸಿತು.


from India & World News in Kannada | VK Polls https://ift.tt/2OmzMH2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...