ರಾಂಚಿ: ಪಾರ್ಥಿವ್ ಪಟೇಲ್ ಸಾರಥ್ಯದ ಭಾರತ 'ಬಿ' ತಂಡವು 2019-20ನೇ ಸಾಲಿನ ದೇಶೀಯ ಏಕದಿನ ಟೂರ್ನಿಯನ್ನು ಬಗಲಿಗೇರಿಸಿದೆ. ಸೋಮವಾರ ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಕಾಂಪ್ಲೆಕ್ಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾರ್ಥಿವ್ ಸಾರಥ್ಯದ ಭಾರತ 'ಬಿ' ತಂಡವು ಶುಭಮನ್ ಗಿಲ್ ನೇತೃತ್ವದ ಭಾರತ 'ಸಿ' ತಂಡದ ವಿರುದ್ಧ 51 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 'ಬಿ' ತಂಡವು (86) ಹಾಗೂ ಯಶಸ್ವಿ ಜೈಸ್ವಾಲ್ (54) ಆಕರ್ಷಕ ಅರ್ಧಶತಕ ಮತ್ತು ಕೊನೆಯ ಹಂತದಲ್ಲಿ ವಿಜಯ್ ಶಂಕರ್ (45) ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ (35*) ಮಿಂಚಿನ ಆಟದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 283 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಭಾರತ ಬಿ ಆರಂಭ ಉತ್ತಮವಾಗಿರಲಿಲ್ಲ. ಋತುರಾಜ್ ಗಾಯಕ್ವಾಡ್ (0) ಹಾಗೂ ನಾಯಕ ಪಾರ್ಥಿವ್ ಪಟೇಲ್ (14) ವಿಕೆಟ್ಗಳು ಬೇಗನೇ ನಷ್ಟವಾದವು. ಬಾಬಾ ಅಪರಾಜಿತ್ಗೂ (13) ಹೆಚ್ಚೇನು ಮಾಡಲಾಗಲಿಲ್ಲ. ಜೈಸ್ವಾಲ್ ವಿಕೆಟ್ ಪತನಗೊಳ್ಳುವುದರೊಂದಿಗೆ 92 ರನ್ನಿಗೆ ನಾಲ್ಕು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೇದರ್ ಜಾಧವ್ ಅಮೋಘ ಇನ್ನಿಂಗ್ಸ್ ನೆರವಿನಿಂದ ಸ್ಪರ್ದಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. 94 ಎಸೆತಗಳನ್ನು ಎದುರಿಸಿದ ಜಾಧವ್ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 86 ರನ್ ಗಳಿಸಿದರು. ಕೊನೆಯ ಹತಂದಲ್ಲಿ ಕೇವಲ 10 ಎಸೆತಗಳಲ್ಲಿ ತಲಾ ಮೂರು ಬೌಂಡಿರ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 35 ರನ್ ಬಾರಿಸಿದ ಕೆ. ಗೌತಮ್ ಪಂದ್ಯದ ಚಿತ್ರಣವನ್ನು ಬದಲಾಯಿಸಿದರು. ಭಾರತ ಸಿ ತಂಡದ ಪರ ಇಶಾನ್ ಪೊರೆಲ್ 43 ರನ್ ತೆತ್ತು ಐದು ವಿಕೆಟ್ ಕಿತ್ತು ಮಿಂಚಿದರು. ಬಳಿಕ ಗುರಿ ಬೆನ್ನಟ್ಟಿದ ಭಾರತ ಸಿ ತಂಡಕ್ಕೆ ಪ್ರಿಯಮ್ ಗಾರ್ಗ್ (74) ಏಕಾಂಗಿ ಹೋರಾಟವು ವ್ಯರ್ಥವೆನಿಸಿತು. ನಾಯಕ ಶುಭಮನ್ ಗಿಲ್ (1), ಮಯಾಂಕ್ ಅಗರ್ವಾಲ್ (28), ವಿರಾಟ್ ಸಿಂಗ್ (6), ಸೂರ್ಯಕುಮಾರ್ ಯಾದವ್ (3) ಹಾಗೂ ಅನುಭವಿ ದಿನೇಶ್ ಕಾರ್ತಿಕ್ (3) ವೈಫಲ್ಯವನ್ನು ಅನುಭವಿಸುದರೊಂದಿಗೆ 77 ರನ್ ಗಳಿಸುವುದಷ್ಟರಲ್ಲಿ ಅರ್ಧ ತಂಡವು ಪೆವಿಲಿಯನ್ ಪರೇಡ್ ನಡೆಸಿತು. ಕೊನೆಯ ಹಂತದಲ್ಲಿ ಅಕ್ಷರ್ ಪಟೇಲ್(38), ಜಲಜ್ ಸಕ್ಸೇನಾ (37*) ಹಾಗೂ ಮಯಾಂಕ್ ಮಾರ್ಕಂಡೆ (27) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರೂ ಗೆಲವು ದಾಖಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 232 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಬಿ ಪರ 32 ರನ್ ತೆತ್ತು ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರು. ಶುಭಮನ್ ಗಿಲ್ ದಾಖಲೆ: ಈ ನಡುವೆ 20ರ ಹರೆಯದ ಶುಭಮನ್ ಗಿಲ್, ದೇವಧರ್ ಟ್ರೋಫಿ ಫೈನಲ್ನಲ್ಲಿ ನಾಯಕತ್ವ ವಹಿಸಿದ ಅತಿ ಕಿರಿಯ ಆಟಗಾರನೆಂಬ ಹಿರಿಮೆಗೆ ಭಾಜನವಾಗಿದ್ದಾರೆ. ಈ ಮೂಲಕ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ 10 ವರ್ಷ ಹಳೆಯ ದಾಖಲೆಯನ್ನೇ ಮುರಿದಿದ್ದಾರೆ. ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್: ತಮ್ಮಲ್ಲಿ ಇನ್ನು ಕ್ರಿಕೆಟ್ ಬಾಕಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿರುವ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅದ್ಭುತ ಡೈವಿಂಗ್ ಕ್ಯಾಚ್ ಮೂಲಕ ಗಮನ ಸೆಳೆದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2qnCXpy