ಬೆಂಗಳೂರು: ಬೆಂಗಳೂರು, ಪ್ಲಾಸ್ಟಿಕ್ ಮುಕ್ತ , ಬೆಂಗಳೂರಿಗಾಗಿ ಭಾನುವಾರ ನಡೆದ ಕ್ಲೀನಥಾನ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಷ್ಟ್ರೀಯ ಉಪಹಾರಗೃಹ ಸಂಘ (NRAI) ವತಿಯಿಂದ ಭಾನುವಾರ ಬೆಂಗಳೂರಿನಲ್ಲಿ 'ಕ್ಲೀನಥಾನ್' ನಡೆಯಿತು. ಇಂದಿರಾ ನಗರ, ಕೋರಮಂಗಲ ಭಾಗದಲ್ಲಿ ಪ್ಲಾಸ್ಟಿಕ್ ಮುಕ್ತ ಹೊಟೇಲ್ ನಡೆಸುವ ಗುರಿಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಶಾಂತಿನಗರ ಶಾಸಕ ಎನ್. ಎ. ಹ್ಯಾರಿಸ್ ಚಾಲನೆ ನೀಡಿದರು. ಇಂದಿರಾ ನಗರ, ಕೋರಮಂಗಲ ಹಾಗೂ ಶಾಂತಿನಗರ ಭಾಗದ ಎಲ್ಲಾ ಹೊಟೇಲ್ಗಳೂ ಈ ಕ್ಲೀನಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂದಿರಾನಗರ ವ್ಯಾಪಾರಿಗಳ ಒಕ್ಕೂಟ ಕೂಡಾ ಈ ಕಾರ್ಯಕ್ರಮಕ್ಕೆ ಸಾಥ್ ನೀಡಿತ್ತು. ಪ್ಲಾಸ್ಟಿಕ್ ಮುಕ್ತವಾದ, ಕಸಮುಕ್ತವಾದ ಹಸಿರು ಬೆಂಗಳೂರಿಗಾಗಿ ನಡೆದ ಈ ಕ್ಲೀನಥಾನ್ ಕಾರ್ಯಕ್ರಮಕ್ಕೆ ಕೂಡಾ ಶ್ಲಾಘಿಸಿದೆ. ಕ್ಲೀನಥಾನ್ ಕಾರ್ಯಕ್ರಮಕ್ಕೆ ಬಿಬಿಎಂಪಿ ಕೂಡಾ ಬೆಂಬಲ ನೀಡುತ್ತದೆ ಎಂದು ಟ್ವೀಟ್ ಮಾಡಿರುವ ಬಿಬಿಎಂಪಿ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್, ಅತಿ ಹೆಚ್ಚು ಕಸವನ್ನು ಉತ್ಪಾದಿಸುವ ಹೊಟೇಲ್, ರೆಸ್ಟೋರೆಂಟ್ ಸಂಘಗಳೇ ಕಸಮುಕ್ತ ಬೆಂಗಳೂರಿಗಾಗಿ, ಪ್ಲಾಸ್ಟಿಕ್ ಮುಕ್ತ ಬೆಂಗಳೂರಿಗಾಗಿ ದನಿ ಎತ್ತಿರುವುದು ಒಳ್ಳೆಯ ವಿಚಾರ ಎಂದಿದ್ದಾರೆ. ಹೊಟೇಲ್ಗಳು ಸೂಕ್ತ ರೀತಿಯಲ್ಲಿ ಕಸ ವಿಂಗಡಣೆ ಮಾಡಬೇಕು, ಹೊಟೇಲ್ನ ಅಡುಗೆ ಮನೆಯ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಹೊಟೇಲ್, ರೆಸ್ಟೋರೆಂಟ್ಗಳು ತಮ್ಮಲ್ಲಿ ಉತ್ಪಾದನೆಯಾಗುವ ಕಸವನ್ನು ಬಳಸಿಕೊಂಡು ಅದನ್ನು ಗೊಬ್ಬರವಾಗಿ ಪರಿವರ್ತಿಸಬಹುದು, ಮಿಥೇನ್ ಉತ್ಪಾದಿಸಿ ಅದರಿಂದಲೇ ತಮ್ಮ ಹೊಟೇಲ್ನ ಅಡುಗೆ ಮನೆಗೆ ವಿದ್ಯುತ್ ತಯಾರಿಸಬಹುದು ಎಂದು ಬಿಬಿಎಂಪಿ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್ ಸಲಹೆ ನೀಡಿದ್ಧಾರೆ. ಬಿಬಿಎಂಪಿ ಆಯುಕ್ತರ ಈ ಸಲಹೆಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಮಹಾನಗರದಲ್ಲಿರುವ ಹೊಟೇಲ್ಗಳು, ತ್ಯಾಜ್ಯ ವಿಲೇವಾರಿ ಬಗ್ಗೆ ಇನ್ನಷ್ಟು ಜಾಗೃತರಾದರೆ, ಬೆಂಗಳೂರು ನಗರದ ಕಸ ಸಮಸ್ಯೆಗೆ ಅಂತ್ಯ ಕಾಣಿಸಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಅದೇನೇ ಇರಲಿ, ಅತಿ ಹೆಚ್ಚು ಕಸ ಉತ್ಪಾದನೆ ಮಾಡುವ ಹೊಟೇಲ್, ರೆಸ್ಟೋರೆಂಟ್ಗಳ ಸಂಘವೇ ಸ್ವಚ್ಛ ಬೆಂಗಳೂರಿಗಾಗಿ, ಪ್ಲಾಸ್ಟಿಕ್ ಮುಕ್ತ ಬೆಂಗಳೂರಿಗಾಗಿ ಪಣ ತೊಟ್ಟಿರುವುದು ನಿಜಕ್ಕೂ ಸಂಸತದ ವಿಚಾರ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಕಸ ಸಮಸ್ಯೆಗೆ ಪರಿಹಾರ ದೊರಕುವ ಭರವಸೆಯ ಆಶಾಕಿರಣವೂ ಹೊಟೇಲ್ ಸಂಘಗಳಿಂದಲೇ ಸಿಕ್ಕಂತಾಗಿದೆ.
from India & World News in Kannada | VK Polls https://ift.tt/2NdaR9u