ಹೊಸ ದಿಲ್ಲಿ: ಅನರ್ಹ ಶಾಸಕರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಪೀಠಕ್ಕೆ ಹೊಸ ಸಾಕ್ಷ್ಯ ಒದಗಿಸಿದೆ. ಅನರ್ಹ ಶಾಸಕರನ್ನು ಕುರಿತು ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಧ್ವನಿ ಮುದ್ರಿಕೆಯನ್ನು ಸುಪ್ರೀಂ ಕೋರ್ಟ್ಗೆ ಹೊಸ ಸಾಕ್ಷ್ಯವಾಗಿ ಕಾಂಗ್ರೆಸ್ ಪಕ್ಷ ನೀಡಿದೆ. ಶಾಸಕರ ರಾಜೀನಾಮೆ, ಇದರಲ್ಲಿ ಬಿಜೆಪಿ ಪಾತ್ರ ಕುರಿತಂತೆ ಯಡಿಯೂರಪ್ಪ ಆಡಿದ್ದಾರೆ ಎನ್ನಲಾದ ಮಾತುಗಳು, ಈ ಆಡಿಯೋ ಕ್ಲಿಪ್ನಲ್ಲಿ ಇವೆ ಎಂದು ಕಾಂಗ್ರೆಸ್ ವಾದಿಸಿದೆ. ಕಾಂಗ್ರೆಸ್ನ ಹೊಸ ಸಾಕ್ಷ್ಯವನ್ನು ಸ್ವೀಕರಿಸಿರುವ ಜಸ್ಟೀಸ್ ಎನ್. ವಿ. ರಮಣ ಅವರ ಪೀಠ, ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ಸಂಪರ್ಕಿಸುವುದಾಗಿ ತಿಳಿಸಿದೆ. ಮಂಗಳವಾರ ಮುಖ್ಯ ನ್ಯಾಯಮೂರ್ತಿಗಳ ಸಲಹೆಯ ಮೇರೆಗೆ ಹೊಸ ನ್ಯಾಯಪೀಠ ರಚಿಸುವ ಸಂಬಂಧ ತೀರ್ಮಾನ ಕೈಗೊಳ್ಳೋದಾಗಿ ಜಸ್ಟೀಸ್ ಎನ್. ವಿ. ರಮಣ ಹೇಳಿದ್ದಾರೆ. ಡಿಸೆಂಬರ್ 5 ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆ ವೇಳೆ 15 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮಾತನಾಡಿದ್ದರು. ಕಾಂಗ್ರೆಸ್-ಜೆಡಿಎಸ್ನ ಅನರ್ಹ ಶಾಸಕರಿಗೆ ಟಿಕೆಟ್ ನೀಡಲು ಪಕ್ಷದ ನಾಯಕರಲ್ಲೇ ವಿರೋಧವಿದೆ ಎಂದು ಯಡಿಯೂರಪ್ಪ ಅಸಮಾಧಾನ ತೋಡಿಕೊಂಡಿದ್ದರು ಎನ್ನಲಾದ ಆಡಿಯೋ ಕ್ಲಿಪ್ ಇದೀಗ ಸುಪ್ರೀಂ ಅಂಗಳ ತಲುಪಿದೆ. ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಧ್ವನಿಮುದ್ರಣ ಮಾಡಲಾಗಿದೆ ಎಂದು ಹೇಳಲಾಗಿದೆ. ಇದೇ ವೇಳೆ ಯಡಿಯೂರಪ್ಪ ಅಮಿತ್ ಶಾ ಅವರ ಹೆಸರನ್ನೂ ಎಳೆದುತಂದರು ಎನ್ನಲಾಗಿದೆ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ವೇಳೆ ಗೈರು ಹಾಜರಾಗಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟು ಮುಂಬೈನಲ್ಲಿದ್ದರು. ಈ ಎಲ್ಲಾ ವಿದ್ಯಮಾನಗಳೂ ಅಮಿತ್ ಶಾ ಅವರಿಗೆ ಗೊತ್ತಿತ್ತು ಎಂದು ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ. ಬಿಜೆಪಿ ಸರ್ಕಾರ ಉಳಿಸಲು ಪಕ್ಷದ ನಾಯಕರೇ ಸಹಕಾರ ನೀಡುತ್ತಿಲ್ಲ ಎಂದು ಸಭೆಯಲ್ಲಿ ಸಿಟ್ಟಾಗಿದ್ದ ಯಡಿಯೂರಪ್ಪ, ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಅನರ್ಹರ ತ್ಯಾಗವನ್ನು ಗುರುತಿಸುವಂತೆ ಕರೆ ನೀಡಿದ್ದರು ಎನ್ನಲಾದ ಆಡಿಯೋ ಇದಾಗಿದೆ. ರಾಜ್ಯದ ಒಟ್ಟು 17 ಅನರ್ಹ ಶಾಸಕರ ಭವಿಷ್ಯ ಇದೀಗ ಸುಪ್ರೀಂ ಅಂಗಳದಲ್ಲಿದೆ. ಅಕ್ಟೋಬರ್ 25ಕ್ಕೆ ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್ ಪೀಠ, ತೀರ್ಪು ಕಾಯ್ದಿರಿಸಿತ್ತು. ಆದ್ರೆ, ಇದೀಗ ನೀಡಿರುವ ಹೊಸ ಸಾಕ್ಷ್ಯ, ಸುಪ್ರೀಂ ತೀರ್ಪಿನ ಮೇಲೆ ಪರಿಣಾಮ ಬೀರಬಹುದಾ ಅನ್ನೋದನ್ನು ಕಾದು ನೋಡಬೇಕಿದೆ.
from India & World News in Kannada | VK Polls https://ift.tt/36AWwvB