ಹೊಸದಿಲ್ಲಿ: ರಾಷ್ಟ್ರಪತಿ ಆಡಳಿತದ ನಡುವೆಯೇ ಮಹಾರಾಷ್ಟ್ರದಲ್ಲಿ ನಡೆದಿರುವ ಸರಕಾರ ರಚನೆ ಕಸರತ್ತು ಸೋಮವಾರ ಹೊಸ ತಿರುವು ಪಡೆದಿದೆ. ಯುಪಿಎ ಇತರ ಮಿತ್ರಪಕ್ಷಗಳ ಜತೆಯೂ ಸಮಾಲೋಚಿಸಿದ ಬಳಿಕವಷ್ಟೇ ಶಿವಸೇನೆಗೆ ಬೆಂಬಲ ನೀಡುವ ಕುರಿತು ತೀರ್ಮಾನ ಕೈಗೊಳ್ಳಲು ಎನ್ಸಿಪಿ-ಕಾಂಗ್ರೆಸ್ ನಿರ್ಧರಿಸಿವೆ. ಇದರ ಬೆನ್ನಲ್ಲೇ 3:2 ಸೂತ್ರವನ್ನು ಬಿಜೆಪಿ ಮಿತ್ರಪಕ್ಷ ಆರ್ಪಿಐ ಶಿವಸೇನೆಯ ಮುಂದಿಟ್ಟಿದೆ. 3:2 ಸೂತ್ರ ಮುಂದಿಟ್ಟ ಅಠಾವಳೆ ಕೇಂದ್ರ ಸಚಿವ ಹಾಗೂ ಆರ್ಪಿಐ ಮುಖ್ಯಸ್ಥ ರಾಮದಾಸ್ ಅಠಾವಳೆ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರಕಾರ ರಚನೆಗೆ 3:2 ಸೂತ್ರ ಮುಂದಿಟ್ಟಿದ್ದಾರೆ. ಅಂದರೆ ಮೊದಲ ಮೂರು ವರ್ಷ ಬಿಜೆಪಿ, ಕೊನೆಯ ಎರಡು ವರ್ಷ ಶಿವಸೇನೆಗೆ ಮುಖ್ಯಮಂತ್ರಿ ಪದವಿ ದಕ್ಕಬೇಕು. ಹಾಗೆಯೇ 60:40 ಅನುಪಾತದಲ್ಲಿ ಅಧಿಕಾರ ಹಂಚಿಕೊಳ್ಳಬೇಕು. ''ಈ ವಿಚಾರವಾಗಿ ನಾಯಕ ಸಂಜಯ್ ರಾವತ್ ಜತೆ ಚರ್ಚಿಸಿದ್ದೇನೆ. ಸದ್ಯದಲ್ಲಿಯೇ ಬಿಜೆಪಿ ನಾಯಕರನ್ನೂ ಭೇಟಿ ಮಾಡಿ ಮಾತನಾಡುತ್ತೇನೆ. ಜನಾದೇಶದಂತೆ ಬಿಜೆಪಿ-ಶಿವಸೇನೆ ಮೈತ್ರಿಕೂಟವೇ ಸರಕಾರ ರಚಿಸಬೇಕು ಎಂಬುದು ನನ್ನ ಅಭಿಲಾಷೆ,'' ಎಂದು ಅಠಾವಳೆ ತಿಳಿಸಿದರು. ಎನ್ಸಿಪಿ ವರಿಷ್ಠ ಅವರು ಸೋಮವಾರ ಸಂಜೆ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ 45 ನಿಮಿಷ ಕಾಲ ಮಾತುಕತೆ ನಡೆಸಿದರು. ಮಹಾರಾಷ್ಟ್ರದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಪವಾರ್ ಮಾಹಿತಿ ನೀಡಿದರು. ಆದರೆ, ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದಲ್ಲಿರುವ ಇತರ ಪಕ್ಷಗಳ ಜತೆಗೂ ಮಾತುಕತೆ ನಡೆಸಬೇಕು. ಆ ಬಳಿಕ ಎನ್ಸಿಪಿ-ಕಾಂಗ್ರೆಸ್ ಮುಖಂಡರು ಮತ್ತಷ್ಟು ವಿವರವಾಗಿ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪವಾರ್, ''ಕೆಲವು ವಿಷಯಗಳ ಕುರಿತು ನಮ್ಮಲ್ಲಿಯೇ ಗೊಂದಲವಿದೆ. ಅವುಗಳನ್ನು ಇತ್ಯರ್ಥಪಡಿಸಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು,'' ಎಂದು ತಿಳಿಸಿದರು. ''ಎರಡು ದಿನಗಳಲ್ಲಿ ಎನ್ಸಿಪಿ-ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿ ಮುಂದಿನ ನಡೆ ಬಗ್ಗೆ ನಿರ್ಧರಿಸಲಿದ್ದಾರೆ,'' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಮಾಹಿತಿ ನೀಡಿದ್ದಾರೆ. ಎನ್ಸಿಪಿ ನಾಯಕರಾದ ಅಜಿತ್ ಪವಾರ್, ಜಯಂತ್ ಪಾಟೀಲ್, ಛಗನ್ ಭುಜಬುಲ್ ಹಾಗೂ ವಕ್ತಾರ ನವಾಬ್ ಮಲಿಕ್ ಅವರಿಗೆ ಮಂಗಳವಾರ ದಿಲ್ಲಿಗೆ ಬರುವಂತೆ ಶರದ್ ಪವಾರ್ ಬುಲಾವ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರ ಶಿವಸೇನೆಗೆ ಬೆಂಬಲ ನೀಡಲು ತಾತ್ವಿಕ ಒಪ್ಪಿಗೆ ಸೂಚಿಸಿದ್ದ ಕಾಂಗ್ರೆಸ್, ನಂತರ ಶರದ್ ಪವಾರ್ ಜತೆ ಸೋನಿಯಾ ಗಾಂಧಿಯವರು ಸಮಾಲೋಚನೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ತಿಳಿಸಿತ್ತು. ಎನ್ಸಿಪಿ ಷರತ್ತಿನಂತೆ ಶಿವಸೇನೆಯು ಬಿಜೆಪಿ ಸಖ್ಯ ಕಡಿದುಕೊಂಡು ಎನ್ಡಿಎಯಿಂದ ಹೊರ ಬಂದಿದೆ. ಮೂರು ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನೂ ರೂಪಿಸಿವೆ. ಅವರೇ ಹಾದಿ ಕಂಡುಕೊಳ್ಳಬೇಕು: ಸಂಸತ್ ಭವನದಲ್ಲಿ ಬೆಳಗ್ಗೆ ಪತ್ರಕರ್ತರ ಜತೆ ಮಾತನಾಡಿದ ಪವಾರ್ ಅವರು, ''ಮಹಾರಾಷ್ಟ್ರದಲ್ಲಿ ತನ್ನ ಹಾದಿಯನ್ನು ಶಿವಸೇನೆಯೇ ಕಂಡುಕೊಳ್ಳ ಬೇಕು,'' ಎಂದು ಹೇಳುವ ಮೂಲಕ ಶಿವಸೇನೆಗೆ ಬೆಂಬಲ ನೀಡುವ ವಿಚಾರವಾಗಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ''ಬಿಜೆಪಿ-ಶಿವಸೇನೆ ಹಾಗೂ ಎನ್ಸಿಪಿ-ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ರಾಜ್ಯದಲ್ಲಿ ತನ್ನ ಮುಂದಿನ ದಾರಿ ಏನೆಂಬುದನ್ನು ಶಿವಸೇನೆಯೇ ಕಂಡುಕೊಳ್ಳಬೇಕು. ನಮ್ಮ ರಾಜಕಾರಣವನ್ನು ನಾವು ಮಾಡುತ್ತೇವೆ,'' ಎಂದು ಪವಾರ್ ಹೇಳಿದ್ದರು. ಇದರಿಂದ ಶಿವಸೇನೆಗೆ ಎನ್ಸಿಪಿ-ಕಾಂಗ್ರೆಸ್ ಬೆಂಬಲ ನೀಡುವ ಅನುಮಾನ ವ್ಯಕ್ತವಾಗಿತ್ತು. ಮೇಯರ್ ಹುದ್ದೆಗೆ ಸ್ಪರ್ಧೆಗೆ ಇಲ್ಲ: ನ.22ರಂದು ನಡೆಯುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿ ಕಣಕ್ಕೆ ಇಳಿಸದೇ ಇರಲು ಎನ್ಸಿಪಿ, ಕಾಂಗ್ರೆಸ್ ನಿರ್ಧರಿಸಿವೆ. ಸದ್ಯ ಬಿಜೆಪಿ ಬೆಂಬಲದೊಂದಿಗೆ ಶಿವಸೇನೆ ಆಡಳಿತವಿದೆ. ಹೊಸ ಮಿತ್ರರ ಬೆಂಬಲದಿಂದ ಮುಂದಿನ ಎರಡೂವರೆ ವರ್ಷವೂ ಶಿವಸೇನೆಯೇ ಆಡಳಿತ ನಡೆಸುವುದು ಖಚಿತವಾಗಿದೆ. ಎನ್ಸಿಪಿ-ಕಾಂಗ್ರೆಸ್ ಹೆಚ್ಚು ಸ್ಥಾನಕ್ಕೆ ಚೌಕಾಸಿ?ಮುಖ್ಯಮಂತ್ರಿ ಪದವಿಯನ್ನು ಶಿವಸೇನೆಗೆ ಬಿಟ್ಟುಕೊಡಬೇಕು ಹಾಗೂ ಎನ್ಸಿಪಿ, ಕಾಂಗ್ರೆಸ್ಗೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು. ಸಚಿವ ಸಂಪುಟದಲ್ಲಿ ಶಿವಸೇನೆಗೆ 16, ಎನ್ಸಿಪಿಗೆ 14, ಕಾಂಗ್ರೆಸ್ಗೆ 12 ಸ್ಥಾನ ನೀಡಬೇಕು ಎನ್ನುವುದು ಈಗ ರೂಪುಗೊಂಡಿರುವ ಅಧಿಕಾರ ಸೂತ್ರ. ಶಿವಸೇನೆಯನ್ನು ಮಣಿಸಿ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುವ ಮತ್ತು ಮಹತ್ವದ ಖಾತೆಗಳನ್ನು ಗಿಟ್ಟಿಸಿಕೊಳ್ಳುವ ತಂತ್ರವನ್ನು ಎನ್ಸಿಪಿ-ಕಾಂಗ್ರೆಸ್ ಹೆಣೆಯುತ್ತಿವೆ ಎಂಬ ಶಂಕೆಯೂ ವ್ಯಕ್ತವಾಗಿದೆ.
from India & World News in Kannada | VK Polls https://ift.tt/33Zmasb