ಹೊಸ ದಿಲ್ಲಿ: ಅಯೋಧ್ಯಾ ತೀರ್ಪಿನ ವೇಳೆ ಶಾಂತಿ, ಸಂಯಮ, ತಾಳ್ಮೆ ಹಾಗೂ ಪ್ರಬುದ್ಧತೆ ಮೆರೆದ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗಿಂತಾ ದೊಡ್ಡದು ಇನ್ಯಾವುದೂ ಇಲ್ಲ ಎಂದು ಬಣ್ಣಿಸಿರುವ , ಈ ಐತಿಹಾಸಿಕ ತೀರ್ಪಿನ ಮೂಲಕ ನಾವು ಹೊಸ ಹಾದಿಯಲ್ಲಿ ನಡೆಯುವಂತಾಗಿದೆ ಎಂದಿದ್ದಾರೆ. ರಾಮಜನ್ಮಭೂಮಿ ವಿವಾದ ಬಗೆಹರಿದಿರುವುದರಿಂದ ನಾವು ಹೊಸ ವಿಶ್ವಾಸ, ಕನಸುಗಳೊಂದಿಗೆ ಮುನ್ನಡೆಯುವ ಹುಮ್ಮಸ್ಸು ಬಂದಿದೆ. ಶಾಂತಿ, ಸಹಬಾಳ್ವೆ ಹಾಗೂ ಒಗ್ಗಟ್ಟಿನೊಂದಿಗೆ ಬದುಕೋಣ ಎಂದು ತಮ್ಮ ಮಾಸಿಕ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಶತಮಾನಗಳ ಇತಿಹಾಸವಿರುವ ಅಯೋಧ್ಯಾ ಶ್ರೀರಾಮಮಂದಿರ-ಬಾಬ್ರಿ ಮಸೀದಿ ವಿವಾದಕ್ಕೆ ನವೆಂಬರ್ 9ರಂದು ಇತಿಶ್ರೀ ಹಾಡಿದ್ದ ಸುಪ್ರೀಂ ಕೋರ್ಟ್, ವಿವಾದಿತ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸುವಂತೆ ಆದೇಶ ನೀಡಿತ್ತು. ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲೇ 5 ಎಕರೆ ಭೂಮಿ ನೀಡುವಂತೆಯೂ ಸುಪ್ರೀಂ ಕೋರ್ಟ್ ಹೇಳಿತ್ತು. ಕಳೆದ ತಿಂಗಳು, ಅಕ್ಟೋಬರ್ನ ಮನ್ ಕಿ ಬಾತ್ನಲ್ಲೂ ಇದೇ ವಿಚಾರ ಪ್ರಸ್ತಾಪಿಸಿದ್ದ ಮೋದಿ, 2010ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಸ್ತಾಪಿಸಿದ್ದರು. 2010ರಲ್ಲಿಯೂ ಪ್ರಕಟವಾದಾಗ ದೇಶದ ಜನರು ಶಾಂತಿ, ಸೌಹಾರ್ದತೆ ಕಾಪಾಡಿದ್ದರು. ಮುಂದೆಯೂ ಹಾಗೆಯೇ ಇರಬೇಕೆಂದು ಮನವಿ ಮಾಡಿದ್ದರು. ಶಾಂತಿ, ಸೌಹಾರ್ಯತೆಯಿಂದಲೇ ಅಯೋಧ್ಯಾ ತೀರ್ಪನ್ನು ಜನರು ಸ್ವೀಕರಿಸಿದರು ಎಂದು ಹಾಡಿ ಹೊಗಳಿರುವ ಪ್ರಧಾನಿ ಮೋದಿ, ನಿಮ್ಮ ಪ್ರೌಢತೆ, ತಾಳ್ಮೆಗೆ ಧನ್ಯವಾದ ಎಂದಿದ್ದಾರೆ. ಒಂದು ಕಡೆ ಸುದೀರ್ಘ ಕಾನೂನು ಸಮರವೊಂದು ಅಂತ್ಯವಾಗಿದೆ. ಜೊತೆಯಲ್ಲೇ ನ್ಯಾಯಾಂಗದ ಬಗ್ಗೆ ಇದ್ದ ಗೌರವ ಇನ್ನಷ್ಟು ವೃದ್ಧಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಅಯೋಧ್ಯಾ ತೀರ್ಪು ದೇಶದ ನ್ಯಾಯಾಂಗ ವ್ಯವಸ್ಥೆಗೆ ಅತಿದೊಡ್ಡ ಮೈಲುಗಲ್ಲು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಅಯೋಧ್ಯಾ ತೀರ್ಪು ಬಂದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿ ಮಾತನಾಡಿದ್ದರು.
from India & World News in Kannada | VK Polls https://ift.tt/33gxBKP