ಹುಬ್ಬಳ್ಳಿ: 150 ವರ್ಷದ ಹಿಂದೆ ಜನಿಸಿದ ಮಹಾತ್ಮಾ ಗಾಂಧೀಜಿ ಅವರ ಚಿಂತನೆಗಳು ಇಂದಿಗೂ ಪ್ರೇರಣೆಯಾಗಿವೆ ಎಂದು ಕೇಂದ್ರ ಸಂಸದೀಯ ವ್ಯವಹರಾಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಹೇಳಿದರು. ನಗರದ ಲ್ಯಾಮಿಂಗಟನ್ ಪ್ರೌಢಶಾಲೆಯಲ್ಲಿ ಜಿಲ್ಲಾಡಾಳಿತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಹಾಗೂ ಬೃಹತ್ ಪ್ಲಾಸ್ಟಿಕ್ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದಕ್ಷಿಣ ಆಫ್ರೀಕಾ ಸ್ವಾತಂತ್ರಕ್ಕಾಗಿ ಹೋರಾಡಿದ ನೆಲ್ಸನ್ ಮಂಡೇಲಾ ಗಾಂಧೀ ಚಿಂತನೆಯಿಂದ ಪ್ರೇರೇಪಿತರಾಗಿದ್ದರು. ಬಾಲ್ಯದಿಂದಲೂ ಸತ್ಯ ಅನ್ವೇಷಣೆಯಲ್ಲಿ ಕಾರ್ಯದಲ್ಲಿ ತೊಡಗಿದ್ದ ಗಾಂಧೀಜಿ ಅಸ್ಪೃಶ್ಯತೆ ವಿರೋಧಿಸಿದರು. ಸ್ವಾತಂತ್ರ್ಯ ಹೋರಾಟದ ಚಳುವಳಿಗಳನ್ನು ಜನಾಂದೋಲನವಾಗಿ ರೂಪಿಸಿದ ಕೀರ್ತಿ ಗಾಂಧೀಜಿಯವರದು. ಖ್ಯಾತ ಉಪ್ಪಿನ ಸತ್ಯಾಗ್ರಹ ಇದಕ್ಕೆ ಉತ್ತಮ ನಿದರ್ಶನ ಎಂದು ಹೇಳಿದರು. ವೈಯಕ್ತಿಕ ಹಾಗೂ ಪರಿಸರದ ಸ್ವಚ್ಛತೆ ಬಗ್ಗೆ ಗಾಂಧೀಜಿ ಅವರು ಅಪಾರ ಕಾಳಜಿ ವಹಿಸಿದ್ದರು. ಪ್ಲಾಸ್ಟಿಕ್ ಸ್ವಚ್ಛತೆಗೆ ತೊಡುಕಾಗಿದೆ. ಎಲ್ಲರೂ ನಿತ್ಯ ಜೀವನದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ತ್ಯಜಿಸಲು ಧೃಡ ನಿರ್ಧಾರ ಮಾಡಬೇಕು. ಪ್ಲಾಸ್ಟಿಕ್ ಕೊಳೆತು ಪರಿಸರದಲ್ಲಿ ಬೆರತು ಹೋಗುವುದಿಲ್ಲ. ಪ್ಲಾಸ್ಟಿಕ್ ಭೂಮಿ ಸೇರಿದರೆ ಮಣ್ಣು ಕಲುಷಿತವಾಗುತ್ತದೆ. ನಂತರ ಆಹಾರದಲ್ಲಿ ಬೆರೆತು ಕ್ಯಾನ್ಸರ್ ಕಾರಕವಾಗುತ್ತದೆ. ನಗರ ಸ್ವಚ್ಛತೆಯ ಬಗ್ಗೆ ಪಾಲಿಕೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಪಾಲಿಕೆ ಜೊತೆಗೆ ನಾಗರಿಕರು ಕೈ ಜೋಡಿಸಬೇಕು. ಮಕ್ಕಳು ಪ್ಲಾಸ್ಟಿಕ್ ಬಳಕೆ ವಿರುದ್ದ ಮನೆಯಲ್ಲಿ ಜಾಗೃತಿಸಿ ಮೂಡಿಸಿ ಪಾಲಕರಿಗೆ ತಿಳಿ ಹೇಳಬೇಕು. ಮನೆ ಹಾಗೂ ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಸಬೇಕು ಎಂದು ಹೇಳಿದರು. ಇದೇ ವೇಳೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ಲಾಸ್ಟಿಕ್ ನಿಷೇಧಿಸಿ ಸ್ವಚ್ಚತಾ ಆಂದೋಲನಕ್ಕೆ ಪ್ರೇರಣೆ ನೀಡಿದ್ದಾರೆ. ಸರಕಾರದಿಂದ ಪ್ಲಾಸ್ಟಿಕ್ ನಿಷೇಧ ಮಾಡಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳು ಪ್ಲಾಸ್ಟಿಕ್ ಬಳಸದಂತೆ ತಂದೆ ತಾಯಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ವಚ್ಛಮೇವ ಜಯತೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಜಿ.ಪಂ ಸಿ.ಇ.ಓ ಡಾ.ಬಿ.ಸಿ.ಸತೀಶ್, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಡಿ.ಡಿ.ಪಿ.ಐ ಗಜಾನನ ಮನ್ನಿಕೇರಿ ಸೇರಿದಂತೆ ಇತರೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ಲಾಸ್ಟಿಕ್ ಕಸ ಸಂಗ್ರಹಣೆ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ಲಾಸ್ಟಿಕ್ ಕಸ ಸಂಗ್ರಹಣಾ ಅಭಿಯಾನಕ್ಕೆ ಸಂಸದೀಯ ವ್ಯವಹರಾಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು. ಶಾಲಾ ಮಕ್ಕಳು ಮನೆಗಳಿಂದ ಆಯ್ದ ತಂದ ಪ್ಲಾಸ್ಟಿಕ್ ವಸ್ತುಗಳನ್ನು ಸಚಿವರಿಗೆ ನೀಡಿದರು. ನಂತರ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಶಿಕ್ಷಕರು, ವಿದ್ಯಾರ್ಥಿಗಳು ಕೊಪ್ಪಿಕರ್ ರಸ್ತೆಯಿಂದ ಮಹಾತ್ಮಾಗಾಂಧಿ ಮಾರುಕಟ್ಟೆಯವರೆಗೆ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ನಿಷೇಧಿತ ಪ್ಲಾಸ್ಟಿಕ್ ಸಂಗ್ರಹಣೆ ಮಾಡಿದರು.
from India & World News in Kannada | VK Polls https://ift.tt/2nHbE8T