ಬೆಂಗಳೂರು: ಕುತೂಹಲ ಘಟ್ಟದಲ್ಲಿರುವ ವಿಧಾನಸಭೆಯ ಉಪಚುನಾವಣೆಯ ಕದನದಲ್ಲಿ ನಾಮಪತ್ರ ವಾಪಸ್ ಪಡೆಯುವುದಕ್ಕೆ ಇಂದೇ(ಗುರುವಾರ) ಲಾಸ್ಟ್ ಚಾನ್ಸ್ ಆಗಿದ್ದು. ಕ್ಷೇತ್ರದಲ್ಲಿನಾಮಪತ್ರ ಸಲ್ಲಿಸಿದ ಬಂಡಾಯ ಅಭ್ಯರ್ಥಿ ಸಹಿತ ಕೆಲವು ಮತಗಳನ್ನು ಪಡೆದು ಒಳ ಏಟು ನೀಡುವ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ ರಾಜಕೀಯ ಬುಧವಾರ ನಡೆದಿದೆ. ಪ್ರಮುಖ ರಾಜಕೀಯ ಪಕ್ಷಗಳು ಬಂಡಾಯ ತಡೆಯಲು ಕೊನೆ ಕಸರತ್ತು ನಡೆಸಿವೆ. ಕದನದ ಅಸಲಿಯ ಸ್ಪಷ್ಟ ಚಿತ್ರಣ ಗುರುವಾರ ಸಂಜೆ ಲಭ್ಯವಾಗಲಿದೆ. ನಾಮಪತ್ರ ಪರಿಶೀಲನೆ ಬಳಿಕ 218 ಅಭ್ಯರ್ಥಿಗಳ 301 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಆಯೋಗ ಘೋಷಿಸಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ನ.21 ಕಡೆಯ ದಿನವಾಗಿದ್ದು ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಕೆ ಪ್ರಯತ್ನ ಮುಂದುವರಿದಿದೆ. ಬಂಡಾಯಗಾರರಿಗೆ ಉಚ್ಚಾಟನೆ ಎಚ್ಚರಿಕೆ ವಿಶೇಷವಾಗಿ ಬಿಜೆಪಿ ವಿಜಯನಗರ ಹಾಗೂ ಹೊಸಕೋಟೆ ಕ್ಷೇತ್ರಗಳ ಬಂಡಾಯಗಾರರಿಗೆ ಉಚ್ಚಾಟನೆ ಸಂದೇಶ ರವಾನಿಸಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹೊಸಕೋಟೆಯ ಶರತ್ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದರಿಂದ ಅಧಿಕೃತ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ಗೆ ತೊಡರುಗಾಲು ಆಗಿದ್ದಾರೆ. ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯಡಿಯೂರಪ್ಪ ಅವರು ಈಗಾಗಲೇ ಹೊಸಕೋಟೆಗೆ ತೆರಳಿ ಒಂದು ಸುತ್ತಿನ ಪ್ರಚಾರ ನಡೆಸಿ ಸಂಸದ ಬಿ.ಎನ್. ಬಚ್ಚೇಗೌಡ ಹಾಗೂ ಪುತ್ರ ಶರತ್ ಬಚ್ಚೇಗೌಡರಿಗೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದರೂ ಕಣದಿಂದ ಹಿಂದೆ ಸರಿಯುವ ಲಕ್ಷಣಗಳಿಲ್ಲ. ಈ ಮಧ್ಯೆ ಬುಧವಾರ ನಡೆದ ಉಸ್ತುವಾರಿಗಳ ಸಭೆ ಬಳಿಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರು ಗುರುವಾರ ನಾಮಪತ್ರ ವಾಪಸ್ ಪಡೆಯದಿದ್ದರೆ ಶಿಸ್ತು ಕ್ರಮದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಶರತ್ ಏನು ಮಾಡುತ್ತಾರೆಂಬುದು ಕುತೂಹಲ ಕೆರಳಿಸಿದೆ. ಅದೇ ರೀತಿ ವಿಜಯನಗರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕವಿರಾಜ್ ಅರಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೆ, ಅಥಣಿಯಲ್ಲಿ ಕಾಂಗ್ರೆಸ್ನಿಂದ ಎಸ್.ಕೆ.ಬುಟಾಳಿ, ಸುರೇಶಗೌಡ ಪಾಟೀಲ್ ಹಾಗೂ ಸಹಜಹಾನ್ ಡೊಂಗರಗಾವ್ ಅವರು ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಇನ್ನೊಂದೆಡೆ ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಆಪ್ತ ದಶ್ಯಾಳ ಅವರನ್ನು ಕಣದಿಂದ ಹಿಂದೆ ಸರಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸವದಿಗೆ ತಾಕೀತು ಮಾಡಿದ್ದಾರೆ. ಆದರೆ ಇದುವರೆಗೂ ಗುರು ದಶ್ಯಾಳ ಅವರ ನಡೆ ಏನು ಎಂಬುದು ತಿಳಿದಿಲ್ಲ. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಮಗ್ಗಲು ಮುಳ್ಳಾಗಿ ಕಾಡುತ್ತಿರುವ ಬಂಡಾಯ ಅಭ್ಯರ್ಥಿಗಳ ಆತಂಕ ಸೃಷ್ಟಿಸಿದ್ದಾರೆ. ಒಂದು ವೇಳೆ ಬಂಡಾಯ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯದಿದ್ದರೆ ಅವರ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಅಡ್ಡಗಾಲು ಆಗುವುದಂತೂ ನಿಶ್ಚಿತ. ಹೀಗಾಗಿ ಅವರ ನಿವೃತ್ತಿಗೆ ಕೊನೆ ಕಸರತ್ತುಗಳು ನಡೆದಿವೆ. ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಅವರು ಹಲವು ಮಠಾಧೀಶರ ಒತ್ತಡದ ಹಿನ್ನೆಲೆಯಲ್ಲಿ ಕಣದಿಂದ ನಿವೃತ್ತಿಯಾಗಲು ನಿರ್ಧರಿಸಿರುವುದರಿಂದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ನಿರಾಳರಾದಂತೆ ಕಾಣುತ್ತಿದೆ.
from India & World News in Kannada | VK Polls https://ift.tt/2QDkErz