- ಮಂಜುನಾಥ್ ಎಲ್ ಕೆ ಮಹಾರಾಷ್ಟ್ರದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿದ್ದ ಸರಕಾರ ರಚನೆಯ ಮಹಾ ನಾಟಕಕ್ಕೆ ಯಾರೂ ನಿರೀಕ್ಷಿಸದಂತಹ ಕ್ಲೈಮಾಕ್ಸ್ ಸಿಕ್ಕಿದೆ. ಶುಕ್ರವಾರ ರಾತ್ರಿ ನಡೆದ ಬೆಳವಣಿಗೆಯನ್ನು ಗಮನಿಸಿದರೆ ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮಹಾಮೈತ್ರಿ ಸರಕಾರ ರಚನೆಯಾಗುತ್ತೆ, ಶಿವಸೇನೆ ಮುಖ್ಯಸ್ಥ ಮುಖ್ಯಮಂತ್ರಿಯಾಗುತ್ತರೆ. ಅಷ್ಟು ಮಾತ್ರವಲ್ಲ 5 ವರ್ಷವೂ ಉದ್ಧವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದೇ ಭಾವಿಸಲಾಗಿತ್ತು. ಈ ಬಗ್ಗೆ ಸ್ವತಃ ಶರದ್ ಪವಾರ್ ಅವರು ಸರಕಾರ ರಚನೆಯ ಅಂತಿಮ ರೂಪುರೇಷೆ ಸಿದ್ಧಗೊಂಡಿದೆ. ಠಾಕ್ರೆಗೆ ಸರಕಾರದ ಚುಕ್ಕಾಣಿ ನೀಡಲು ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ ಎಂದಿದ್ದರು. ಮೂರು ಪಕ್ಷಗಳ ಉನ್ನತ ಸಭೆಯಲ್ಲಿ ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ, ಸುಭಾಷ್ ದೇಸಾಯಿ, ಸಂಜಯ್ ರಾವತ್, ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಅಹ್ಮದ್ ಪಟೇಲ್, ಅವಿನಾಶ್ ಪಾಂಡೆ, ಪೃಥ್ವಿರಾಜ್ ಚೌಹಾಣ್, ಎನ್ಸಿಪಿ ವರಿಷ್ಠ ಶರದ್ ಪವಾರ್, ಪಕ್ಷದ ಪ್ರಮುಖ ನಾಯಕರಾದ ಪ್ರಫುಲ್ ಪಟೇಲ್, ಜಯಂತ್ ಪಾಟೀಲ್ ಮತ್ತು ಅಜಿತ್ ಪವಾರ್ ಸೇರಿದ್ದರು. ಇದಿಷ್ಟು ನಾಯಕರು ಸೇರಿ ಒಮ್ಮತದಿಂದ ಸ್ವೀಕರಿಸಿದ ನಿರ್ಧಾರದ ಬಗ್ಗೆ ಯಾರಿಗೂ ಅನುಮಾನ ಮೂಡಲು ಸಾಧ್ಯವಿಲ್ಲ. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನದ ಜತೆಗೆ 16 ಸಚಿವ ಸ್ಥಾನಗಳು, ಎನ್ಸಿಪಿಗೆ 14 ಮಂತ್ರಿ ಸ್ಥಾನಗಳು ಹಾಗೂ ಕಾಂಗ್ರೆಸ್ 12 ಮಂತ್ರಿ ಸ್ಥಾನಗಳನ್ನು ಹಂಚುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅಂದರೆ 16-14-12 ಸೂತ್ರದ ಸರಕಾರದ ಸ್ಕೆಚ್ ರೆಡಿಯಾಗಿತ್ತು. ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ಹಾಗೂ ಇತರೆ ಹುದ್ದೆಗಳ ಬಗ್ಗೆ ಸರಕಾರ ರಚನೆಯಾದ ಬಳಿಕ ತಲೆ ಕೆಡಿಸಿಕೊಳ್ಳೋಣ ಎಂದು ಆರಾಮವಾಗಿ ಎಲ್ಲರೂ ಮಲಗಿದ್ದರು. ಹಾಗೆ ನೋಡಿದರೆ ಉದ್ಧವ್ ಠಾಕ್ರೆ ಅವರು ರಾಜಕಾರಣದಿಂದ ದೂರವೇ ಉಳಿದಿದ್ದ ವ್ಯಕ್ತಿ. ಕ್ಯಾಮರಾ ಹೊತ್ತು ತಿರುಗುತ್ತಿದ್ದ ಉದ್ಧವ್ ಠಾಕ್ರೆ, ತಂದೆ ಬಾಳಾಸಾಹೇಬ್ ಠಾಕ್ರೆ ಅವರ ಮರಣದ ನಂತರ ಅನಿವಾರ್ಯವಾಗಿ ಶಿವಸೇನೆಯ ನೊಗ ಹೊತ್ತವರು. ಛಾಯಾಗ್ರಹಣದ ಹವ್ಯಾಸಕ್ಕೂ ರಾಜಕಾರಣಕ್ಕೂ ಎಲ್ಲಿಂದ ಎಲ್ಲಿಯ ಸಂಬಂಧ? ಆದರೂ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಮಾತೇ ಅಂತಿಮವಾಗಿತ್ತು. ಆರಂಭದಲ್ಲಿ ಸಿಎಂ ಹುದ್ದೆಗೆ ಉದ್ಧವ್ ಠಾಕ್ರೆ ಹೆಸರು ಕೇಳಿ ಬಂದಿರಲಿಲ್ಲ. ಉದ್ಧವ್ ಠಾಕ್ರೆ ಹೆಸರನ್ನು ತೇಲಿಬಿಟ್ಟಿದ್ದೇ ಶರದ್ ಪವಾರ್. 29 ವರ್ಷದ ಯುವಕ ಆದಿತ್ಯ ಠಾಕ್ರೆ ಹೆಸರು ಮುಂಚೂಣಿಯಲ್ಲಿದ್ದ ಸಂದರ್ಭ ಹಿರಿಯರಾದ ಉದ್ಧವ್ ಠಾಕ್ರೆ ಅವರನ್ನು ಸಿಎಂ ಮಾಡುವುದಾದರೆ ನಮ್ಮ ಬೆಂಬಲವಿದೆ ಎಂದು ಶರದ್ ಪವಾರ್ ಹೇಳಿದ್ದರು. ನಂತರ ಉದ್ಧವ್ ಠಾಕ್ರೆ ಸಿಎಂ ಆಗುವ ಹುಮ್ಮಸ್ಸು ಗರಿಗೆದರಿಕೊಂಡಿತ್ತು. ಹೇಗಾದರೂ ಮಾಡಿ ಶಿವಸೇನೆ ನೇತೃತ್ವದ ಸರಕಾರ ರಚಿಸಬೇಕು, ಸಿಎಂ ಆಗಬೇಕು ಎಂಬ ಮಹಾದಾಸೆಗೆ ಬಿದ್ದರು. ಉದ್ಧವ್ ಠಾಕ್ರೆಯವರ ಸ್ಥಿತಿ ಈಗ ಹೇಗಿದೆ ಎಂದರೆ, ದೂರದ ಕಂಬದ ತುದಿಯಲ್ಲಿ ಬೇಟೆಯನ್ನು ಕಚ್ಚಿ ನಿಂತಿದ್ದ ಗಿಡುಗದ ಚಿತ್ರ ತೆಗೆಯಲು ಶಟರ್ ಸ್ಪೀಡ್, ಜೂಮ್ ಎಲ್ಲಾ ಸಿದ್ಧಪಡಿಸಿಕೊಂಡು ಸರ್ವ ಸನ್ನದ್ಧರಾಗಿ ಸರಿಯಾದ ಪೋಸ್ಗಾಗಿ ಕಾಯುತ್ತ ಇನ್ನೇನು ಕ್ಲಿಕ್ ಮಾಡಬೇಕು ಎನ್ನುವಷ್ಟರಲ್ಲಿ ಹಾರಿ ಹೋದಂತಿದೆ! ಆದರೆ ಶನಿವಾರ ಬೆಳಗ್ಗೆಯಾಗುತ್ತಿದ್ದಂತೆ ಮಹಾರಾಷ್ಟ್ರದ ಸರಕಾರ ರಚನೆಯ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಬೆಳಗ್ಗೆ ನಿದ್ರೆಯ ಮಂಪರಿನಿಂದ ಕಣ್ಣುಜ್ಜಿ ಏಳುವಾಗಲೇ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಅರೆ, ಇದು ನಿಜವೇ ಎಂದು ಮತ್ತೊಮ್ಮೆ ಕಣ್ಣುಜ್ಜಿ ಸರಿಯಾಗಿ ನೋಡುವಷ್ಟರಲ್ಲಿ ಎನ್ಸಿಪಿ ಮುಖಂಡ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ಭಿತ್ತರಗೊಳ್ಳುತ್ತಿವೆ. ಅಲ್ಲಿಗೆ ಸ್ಪಷ್ಟವಾಗಿದ್ದು ಬಿಜೆಪಿ-ಎನ್ಸಿಪಿ ಮೈತ್ರಿ ಸರಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು. ಬೆಳಗ್ಗೆ 5.47ರ ಸುಮಾರಿಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳಲಾಗಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶಾರಿಯಾ ತರಾತುರಿಯಲ್ಲಿ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ಗೆ ಪ್ರಮಾಣ ವಚನವನ್ನು ಬೋಧಿಸಿದ್ದಾರೆ. ಇವೆಲ್ಲ ಬೆಳವಣಿಗೆಗಳು ನಿಜಕ್ಕೂ ವಾಸ್ತವವೇ ಎಂದು ಕಣ್ಣಗಲಿಸಿ ನೋಡುವಷ್ಟರಲ್ಲಿ ನಮಗೆ 160 ಶಾಸಕರ ಬೆಂಬಲವಿದೆ. ನಿಮಗೆ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಅಣಕಿಸುತ್ತಿದ್ದಾರೆ. ರಾಜಕೀಯದಲ್ಲಿ ಏನು ಬೇಕಿದ್ದರೂ ನಡೆಯಬಹುದು ಎಂಬುದಕ್ಕೆ ಮಹಾರಾಷ್ಟ್ರ ರಾಜಕೀಯ ಸಾಕ್ಷಿಯಾಗಿದೆ.
from India & World News in Kannada | VK Polls https://ift.tt/2KM2OyR