ಬೆಂಗಳೂರು: ಅನರ್ಹ ಶಾಸಕರ ವಿಚಾರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವ ಆಡಿಯೊ ಸೋರಿಕೆಯಿಂದ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರವಾಗಿದ್ದು, ಐದು ಸಂಭವನೀಯ ಹಾನಿಯ ಬಗ್ಗೆ ತಲೆಕೆಡಿಸಿಕೊಂಡಿದೆ. ಪ್ರಕರಣದಿಂದ ಕ್ರುದ್ಧಗೊಂಡಿರುವ ಬಿಜೆಪಿ ಹೈಕಮಾಂಡ್ ಈ ಬಗ್ಗೆ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕಟ್ಟಪ್ಪಣೆ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಬೈಠಕ್ನಲ್ಲಿ ನಾಲ್ಕು ಗೋಡೆಯ ಮಧ್ಯೆ ಬಿಎಸ್ವೈ ಆಡಿದ ಮಾತುಗಳಿರುವ ವಿಡಿಯೊವೀಗ ದೇಶಾದ್ಯಂತ ಸದ್ದು ಮಾಡಿದೆ. ಈ ಅಸ್ತ್ರ ಹಿಡಿದುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ನಾಯಕರು ಕೇಂದ್ರ ಗೃಹ ಸಚಿವ ರಾಜೀನಾಮೆಗೂ ಒತ್ತಾಯಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸಲು ಹುಬ್ಬಳ್ಳಿಯಲ್ಲಿ ಸೇರಿದ್ದ ಸಭೆಯಲ್ಲಿ ಬಿಎಸ್ವೈ ಅನರ್ಹರ ಪರ ಬ್ಯಾಟಿಂಗ್ ಮಾಡಿದ್ದರು. ಈ ಕುರಿತ ವಿಡಿಯೊ ಬಹಿರಂಗಗೊಳ್ಳುತ್ತಿದ್ದಂತೆ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಸೃಷ್ಟಿಯಾಗಿದೆ. ಅನರ್ಹರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುವ ಹಂತದಲ್ಲಿ ಸಿಕ್ಕಿರುವ ಈ ಆಯುಧವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇದು ಬಿಜೆಪಿಯ ರಾಷ್ಟ್ರೀಯ ನಾಯಕರ ನಿದ್ದೆಯೂ ಕೆಡುವಂತೆ ಮಾಡಿದೆ. ಸೋರಿಕೆ ಮಾಡಿದ್ದು ಯಾರು? ಬಿಎಸ್ವೈ ಮಾತುಗಳು ನಾಲ್ಕು ಗೋಡೆಯ ಮಧ್ಯೆಯಿಂದ ಹೊರಗೆ ಬಂದದ್ದು ಹೇಗೆ? ವಿಡಿಯೊವನ್ನು ಬಹಿರಂಗಗೊಳಿಸಿದವರು ಯಾರು? ವಿಡಿಯೊ ಸೋರಿಕೆ ಮಾಡುವುದರ ಹಿಂದಿನ ಉದ್ದೇಶವೇನಿತ್ತು? ಎಂಬೆಲ್ಲ ಅಂಶದ ಬಗ್ಗೆ ಪರಾಮರ್ಶೆ ನಡೆಸಿ ವರದಿ ಸಲ್ಲಿಸುವಂತೆ ಕಟೀಲ್ ಅವರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಹುಬ್ಬಳ್ಳಿ ಸಭೆಯಲ್ಲಿಬಿಎಸ್ವೈ, ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು. ಅನರ್ಹರಿಗೆ ಟಿಕೆಟ್ ನೀಡಲು ಪಕ್ಷದಲ್ಲಿ ವಿರೋಧವಿರುವುದು ಮೊದಲೇ ತಿಳಿದಿತ್ತು. ಈ ನಡುವೆಯೂ ಇಂತಹ ಮಹತ್ವದ ಸಭೆಯಲ್ಲಿ ಭಾಗಿಯಾದ ಮುಖಂಡರು ಮೊಬೈಲ್ ಕೊಂಡು ತರಲು ಬಿಡಬಾರದಿತ್ತು. ಪಕ್ಷದ ಆಂತರಿಕ ಸಭೆಯಲ್ಲಿನ ಮಾತುಕತೆ ಮೊಬೈಲ್ನಲ್ಲಿ ರೆಕಾರ್ಡ್ ಆಗದಂತೆ ಎಚ್ಚರಿಕೆ ವಹಿಸಬೇಕಿತ್ತು. ಈ ವಿಷಯದಲ್ಲಿ ರಾಜ್ಯಾಧ್ಯಕ್ಷರಾಗಿ ತಾವು ಮುಂಜಾಗ್ರತೆ ವಹಿಸಬೇಕಿತ್ತು ಎಂದೂ ಕಟೀಲ್ ಅವರಿಗೆ ಹೈಕಮಾಂಡ್ ಕಿವಿಮಾತು ಹೇಳಿದೆಯೆಂದು ತಿಳಿದು ಬಂದಿದೆ. ಸಂಭ್ರಮಕ್ಕೆ ಕರಿಛಾಯೆ ವಿಡಿಯೊ ಸೋರಿಕೆಯಿಂದ ಬಿಎಸ್ವೈ ಸರಕಾರದ ಶತದಿನದ ಸಂಭ್ರಮಕ್ಕೆ ಕರಿಛಾಯೆ ಮುಸುಕಿದೆ. ಇದೇ ಕಾರಣದಿಂದ ಬಿಎಸ್ವೈ ಅವರು ಭಾನುವಾರ ಡ್ಯಾಮೇಜ್ ಕಂಟ್ರೋಲ್ಗೆ ಇಳಿದಿದ್ದಾರೆ. ಅನರ್ಹರಿಗೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದು, ವಿಡಿಯೊದ ಮಾತುಗಳನ್ನು ನಿರಾಕರಿಸಿದ್ದಾರೆ. ಈ ನಡುವೆಯೂ ಈ ಪ್ರಕರಣ ಪಕ್ಷದ ವರ್ಚಸ್ಸಿಗೆ ಸಾಕಷ್ಟು ಧಕ್ಕೆ ತಂದಿದೆ. ಬಿಜೆಪಿಯ 3 ಆತಂಕ ಆತಂಕ 1: ಉಪಚುನಾವಣೆಯಲ್ಲಿಬಿಜೆಪಿಗೆ ಹಿನ್ನಡೆಯಾಗಬಹುದು. ಹಾಗಾದರೆ, ಸರಕಾರಕ್ಕೂ ಅಪಾಯ. ಆತಂಕ 2: ಮಧ್ಯಂತರ ಚುನಾವಣೆ ಬಂದರೆ ಕಾಂಗ್ರೆಸ್ನ ಶಕ್ತಿ ಹೆಚ್ಚುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆತಂಕ 3: ಅಮಿತ್ ಶಾ ಅವರ ಹೆಸರೂ ತಳುಕುಹಾಕಿಕೊಂಡಿರುವುದರಿಂದ ಕರ್ನಾಟಕದ ಹೊರಗೂ ಬಿಜೆಪಿಗೆ ಕಪ್ಪುಚುಕ್ಕೆ ಆತಂಕ 4: ಜಾರ್ಖಂಡ್ ಚುನಾವಣೆಯಲ್ಲಿ ಕರ್ನಾಟಕದ ಈ ಪ್ರಕರಣ ಮೊಳಗಿದರೆ ಅಚ್ಚರಿಯಿಲ್ಲ. ಆತಂಕ5: ಮಹಾರಾಷ್ಟ್ರದಲ್ಲಿ ಸರಕಾರ ರಚನೆಗಾಗಿ ಅನ್ಯಪಕ್ಷದವರನ್ನು ಸೆಳೆಯುವ ಬಿಜೆಪಿ ತಂತ್ರಕ್ಕೂ ಹಿನ್ನಡೆ ವರದಿಯನ್ನೇನೂ ಕೇಳಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಸತ್ಯಾಸತ್ಯತೆ ತಿಳಿಸುವಂತೆ ವರಿಷ್ಠರು ಸೂಚಿಸಿದ್ದಾರೆ. -ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
from India & World News in Kannada | VK Polls https://ift.tt/32cfqFp