ದಿಲ್ಲಿ ಟಿ20 ಪಂದ್ಯ ಆಡಲು ರೆಡಿ; ಗಂಗೂಲಿಗೆ ಭರವಸೆ ನೀಡಿದ ರೋಹಿತ್

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನವೆಂಬರ್ 3 ಭಾನುವಾರದಂದು ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಪಂದ್ಯ ಆಯೋಜನೆಯಾಗಲಿದೆ. ಈ ನಡುವೆ ನಗರದಲ್ಲಿ ವಾಯು ಗುಣಮಟ್ಟ ಗಣನೀಯವಾಗಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕರೆ ಮಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಮಾತುಕತೆ ನಡೆಸಿದ್ದಾರೆ. ಟೀಮ್ ಇಂಡಿಯಾ ಆಟಗಾರರಿಗೆ ಯಾವುದೇ ತೊಂದರೆ ಕಾಡುತ್ತಿದೆಯೇ ಎಂಬುದನ್ನು ಅರಿತುಕೊಳ್ಳಲು ಗಂಗೂಲಿ ಕರೆ ಮಾಡಿ ಸಂಭಾಷಣೆ ನಡೆಸಿದ್ದರು. ಈ ಸಂದರ್ಭದಲ್ಲಿ ತಂಡದೆಲ್ಲ ಆಟಗಾರರು ಕ್ಷೇಮವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲದೆ ಔಟ್ ಡೋರ್ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿದ್ದೇವೆ ಎಂಬದನ್ನು ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ. ನಿಗದಿ ವೇಳಾಪಟ್ಟಿಯಂತೆ ಆಡಲು ಟೀಮ್ ಇಂಡಿಯಾ ಆಟಗಾರರು ತಯಾರಿದ್ದಾರೆ ಎಂಬುದರ ಬಗ್ಗೆ ನಾಯಕ ರೋಹಿತ್ ಶರ್ಮಾ ಒಪ್ಪಿಗೆ ಸೂಚಿಸಿದ್ದಾರೆ. ಹಾಗಿದ್ದರೂ ಬಾಂಗ್ಲಾದೇಶ ಆಟಗಾರರು ಮುಖಗವಸು ಹಾಕಿ ಅಭ್ಯಾಸ ನಡೆಸಿರುವುದು ಹೆಚ್ಚಿನ ಆತಂಕ ಸೃಷ್ಟಿ ಮಾಡಲು ಕಾರಣವಾಗಿದೆ. ಈ ಮಧ್ಯೆ ಬಿಸಿಸಿಐ ಹಾಗೂ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧಿಕಾರಿಗಳು ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ), ಪಿಡಬ್ಲ್ಯೂಡಿ ಮತ್ತು ದಕ್ಷಿಣ ದಿಲ್ಲಿ ಮಹಾನಗರ ಪಾಲಿಕೆಯೂಂದಿಗೆ (ಎಸ್‌ಡಿಎಂಸಿ) ಸಭೆ ನಡೆಸಿ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ಜರಗಲು ತೀರ್ಮಾನ ಕೈಗೊಂಡಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದ ಎರಡು ಕೀ.ಮೀ. ಪರಿಧಿಯಲ್ಲಿ ಹೆಚ್ಚಿನ ಶುಚಿತ್ವವನ್ನು ಕಾಪಾಡಲು ಸೂಚನೆ ನೀಡಲಾಗಿದೆ. ಧೂಳಿನ ಕಣಗಳನ್ನು ನಿಯಂತ್ರಿಸಲು ಈ ಪರಿಧಿಯಲ್ಲಿ ಮರಗಳಿಗೆ ನೀರನ್ನು ಸಿಂಪಡಿಸಲು ಸೂಚಿಸಲಾಗಿದೆ. ಅಲ್ಲದೆ ಮಾಲಿನ್ಯಕಾರಕ ವಸ್ತುಗಳನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲಾಗಿದೆ. ದಿಲ್ಲಿಯಲ್ಲಿ ವಾಯು ಗುಣಮಟ್ಟವು ತೀವ್ರವಾಗಿ ಹದೆಗೆಟ್ಟಿರುವ ಹಿನ್ನಲೆಯಲ್ಲಿ ನವೆಂಬರ್ 5ರ ವರೆಗೆ ಶಾಲೆಗಳನ್ನು ತೆರೆಯದಿರಲು ಸೂಚಿಸಲಾಗಿದೆ. ಹಾಗೆಯೇ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಎಲ್ಲ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ರಾತ್ರಿ ವೇಳೆಯಲ್ಲಿ ಪಂದ್ಯ ನಡೆಯಲಿರುವುದರಿಂದ ಆಟಗಾರರಿಗೆ ಉಸಿರಾಟದ ತೊಂದರೆ ಹೆಚ್ಚು ಕಾಡದು ಎಂದು ನಿರೀಕ್ಷಿಸಲಾಗಿದೆ. ಅತ್ತ ಬಾಂಗ್ಲಾ ಆಟಗಾರರು ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದರೂ, ಪಂದ್ಯದಿಂದ ಹಿಂದೆ ಸರಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೇವಲ ಮೂರು ತಾಸಿನ ಪಂದ್ಯಕ್ಕೆ ಹೆಚ್ಚೇನು ಭಯಪಡುವ ಅಗತ್ಯವಿಲ್ಲ ಎಂದು ಕೋಚ್ ರಸೆಲ್ ಡೊಮಿಂಗೊ ತಿಳಿಸಿದ್ದರು. ಹಾಗಾಗಿ ಮಾಲಿನ್ಯ ಮತ್ತಷ್ಟು ಹದೆಗೆಡದಿದ್ದಲ್ಲಿ ಬಾಂಗ್ಲಾ ಆಟಗಾರರು ಪೂರ್ಣ ಸಹಕಾರ ನೀಡುವ ಸಾಧ್ಯತೆಯಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NB2gMP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...