ಹೊಸದಿಲ್ಲಿ: ಭಾರತ ಹಾಗೂ ಪ್ರವಾಸಿ ಬಾಂಗ್ಲಾದೇಶ ನಡುವಣ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯವು ದಿಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನವೆಂಬರ್ 3 ಭಾನುವಾರದಂದು ಆಯೋಜನೆಯಾಗಲಿದೆ. ವಾಯು ಗುಣಮಟ್ಟ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಿದ್ದರೂ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ನಡೆಯುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಈ ಮಧ್ಯೆ ಶನಿವಾರದ ಅಭ್ಯಾಸ ಅವಧಿಯ ಬಳಿಕ ಟೀಮ್ ಇಂಡಿಯಾ ನಾಯಕ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಳೆದ ದಕ್ಷಿಣ ಆಫ್ರಿಕಾ ಸರಣಿಯಂತೆ ಬಾಂಗ್ಲಾದೇಶ ವಿರುದ್ಧಯಲ್ಲೂ ಗುರಿ ನಿಗಪಡಿಸಿ ಡಿಫೆಂಡ್ ಮಾಡುವುದನ್ನು ಪ್ರಯೋಗ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ನಾವು ಗುರಿ ನಿಗದಿಪಡಿಸುವುದು ಹಾಗೂ ಚೇಸಿಂಗ್ ಮಾಡುವುದರ ಬಗ್ಗೆ ಕೆಲವು ಅಂಕಿಅಂಶಗಳನ್ನು ಪರಿಶೀಲಿಸಿದ್ದೇವೆ. ಗುರಿ ಬೆನ್ನಟ್ಟಿದ್ದಾಗ ನಮ್ಮ ಅಂಕಿಗಳು ಅತ್ಯುತ್ತಮವಾಗಿದೆ. ಮುಂದಿನ ವಿಶ್ವಕಪ್ ಗುರಿಯನ್ನಿಟ್ಟುಕೊಂಡು ಮೊದಲು ಬ್ಯಾಟಿಂಗ್ ಮಾಡಿ ಗುರಿ ನಿಗದಿಪಡಿಸಿ ಅದನ್ನು ಡಿಫೆಂಡ್ ಮಾಡಲು ಬಯಸುತ್ತೇವೆ ಎಂದು ವಿವರಿಸಿದರು. ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಬೆಂಗಳೂರಿನ ಕಠಿಣ ವಿಕೆಟ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ಸವಾಲನ್ನು ಆಹ್ವಾನಿಸಿರುವುದನ್ನು ರೋಹಿತ್ ಉಲ್ಲೇಖಿಸಿದರು. ಅದೇ ಹೊತ್ತಿಗೆ ಪಂದ್ಯ ಗೆಲ್ಲುವುದು ಸಹ ನಮ್ಮ ಗುರಿಯಾಗಿದೆ ಎಂದು ರೋಹಿತ್ ಸೇರಿಸಿದರು. ಟಿ20 ಪ್ರಕಾರದಲ್ಲಿ ಇತ್ತೀಚೆಗಿನ ಸಮಯದಲ್ಲಿ ನಾವು ಉತ್ತಮ ನಿರ್ವಹಣೆ ನೀಡಿಲ್ಲ. ಟಿ20 ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದೇವೆ. ಎಲ್ಲ ಪ್ರಕಾರದಲ್ಲೂ ಅಗ್ರಪಟ್ಟ ಕಾಯ್ದುಕೊಳ್ಳುವುದು ನಮ್ಮ ಗುರಿಯಾಗಿದೆ ಎಂದರು. ಪಂತ್ಗೆ ಮೊದಲ ಆದ್ಯತೆ... ಇದೇ ಸಂದರ್ಭದಲ್ಲಿ ಟಿ20 ಪ್ರಕಾರದಲ್ಲಿ ಮ್ಯಾಚ್ ವಿನ್ನರ್ ಎನಿಸಿಕೊಂಡಿರುವ ರಿಷಬ್ ಪಂತ್ಗೆ ಮೊದಲ ಆದ್ಯತೆ ನೀಡಲಾಗುವುದು ಎಂಬುದನ್ನು ರೋಹಿತ್ ಶರ್ಮಾ ಸ್ಪಷ್ಟಪಡಿಸಿದರು. ನಮ್ಮ ತಂಡದಲ್ಲಿರುವ ಇಬ್ಬರು ವಿಕೆಟ್ ಕೀಪರ್ಗಳು (ರಿಷಬ್ ಪಂತ್ ಹಾಗೂ ಸಂಜು ಸ್ಯಾಮ್ಸನ್) ಪ್ರತಿಭಾಂತ ಆಟಗಾರರಾಗಿದ್ದಾರೆ. ನಾವೀಗ ಪಂತ್ರನ್ನು ನೆಚ್ಚಿಕೊಂಡಿದ್ದು, ಈ ಮಾದರಿಯಲ್ಲೇ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ಸಮಯಗಳಿಂದ ಪಂತ್ರನ್ನೇ ನೆಚ್ಚಿಕೊಂಡಿದ್ದು, ತಮ್ಮ ದಿನದಲ್ಲಿ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದರು. ನಮ್ಮ ತಂಡದಲ್ಲಿ ಹಲವು ಆಯ್ಕೆಗಳಿದ್ದು, ಆದರೆ ಶ್ರೇಷ್ಠ ಪ್ರದರ್ಶನ ಹೊರತರಲು ಬೇಕಾದಷ್ಟು ಅವಕಾಶವನ್ನು ನೀಡಬೇಕಾಗುತ್ತದೆ. ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಎರಡು ವಿಭಿನ್ನ ಮಾದರಿಗಳಾಗಿದ್ದು, ವಿಭಿನ್ನ ಸವಾಲುಗಳು ಎದುರಾಗುತ್ತದೆ ಎಂದು ನುಡಿದರು. ನಮ್ಮಲ್ಲಿ ಹಲವು ಆಯ್ಕೆಗಳಿದ್ದು, ತಂಡದಲ್ಲಿರುವ ಆಟಗಾರರನ್ನು ಪರೀಕ್ಷಿಸಲು ಉತ್ತಮ ಅವಕಾಶವಿದು. ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವಾಗ ವಿಭಿನ್ನ ಆಟವಾಗಿರುತ್ತದೆ ಎಂದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೀಮಿತ ಅವಕಾಶಗಳು ಮಾತ್ರ ಸಿಗುತ್ತದೆ. ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕಾಗುತ್ತದೆ ಎಂದು ರೋಹಿತ್ ವಿವರಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2C1n8aZ