ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೊದಲ ಟ್ವೆಂಟಿ-20 ಮುನ್ನ ಟೀಮ್ ಇಂಡಿಯಾಗೆ ಶುಭ ಸಮಾಚಾರ ಬಂದಿದೆ. ಗಾಯದ ಆತಂಕಕ್ಕೊಳಗಾಗಿರುವ ಭಾರತ ತಂಡದ ನಾಯಕ ಆಡಲು ಫಿಟ್ ಆಗಿದ್ದಾರೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಶುಕ್ರವಾರ ನಡೆದ ಅಭ್ಯಾಸ ಅವಧಿಯ ವೇಳೆಯಲ್ಲಿ ರೋಹಿತ್ ಶರ್ಮಾಗೆ ಗಾಯದ ಆತಂಕ ಕಾಡಿತ್ತು. ಪರಿಣಾಮ ಮೈದಾನ ಬಿಟ್ಟು ತೆರಳಿದ್ದರು. ಇದೀಗ ಬಿಸಿಸಿ ಮಾಧ್ಯಮ ವ್ಯವಸ್ಥಾಪಕರು ರೋಹಿತ್ ಶರ್ಮಾ, ಗಾಯದ ಸಮಸ್ಯೆ ಗಂಭೀರವಲ್ಲ. ಅವರೀಗ ಫಿಟ್ ಆಗಿದ್ದು ಮೊದಲ ಟ್ವೆಂಟಿ-20 ಪಂದ್ಯ ಆಡಲು ಫಿಟ್ ಆಗಿದ್ದಾರೆ ಎಂದಿದ್ದಾರೆ. ಟೀಮ್ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾದೇಶ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ಜವಾಬ್ದಾರಿ ವಹಿಸಿಕೊಡಲಾಗಿದೆ ಶುಕ್ರವಾರ ನೆಟ್ನಲ್ಲಿ ಥ್ರೋಡೌನ್ ಪ್ರಾಕ್ಟೀಸ್ ವೇಳೆಯಲ್ಲಿ ರೋಹಿತ್ ಎಡ ತೊಡೆಭಾಗಕ್ಕೆ ಚೆಂಡು ಬಡಿದಿತ್ತು. ತಕ್ಷಣ ಅವರು ಅಭ್ಯಾಸ ನಿಲ್ಲಿಸಿ ಮೈದಾನ ತೊರೆದರು. ಬಳಿಕ ಅವರಿಗೆ ಮಂಜುಗಡ್ಡೆ ಚಿಕಿತ್ಸೆ ನೀಡಲಾಯಿತು. ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟಿ20 ಸರಣಿಯು ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನವೆಂಬರ್ 3 ಭಾನುವಾರದಂದು ಚಾಲನೆ ದೊರೆಯಲಿದೆ. ವಿಷಗಾಳಿಯ ಸಮಸ್ಯೆ: ಶುಕ್ರವಾರ ಬೆಳಗಿನ ಅವಧಿಯಲ್ಲಿಅಭ್ಯಾಸ ನಡೆಸಿದ ಬಾಂಗ್ಲಾದೇಶ ತಂಡಕ್ಕೆ ವಿಷಾನಿಲ ಮಿಶ್ರಿತ ಮಂಜಿನ ಸಮಸ್ಯೆ ಕಾಡಿತು. ಪ್ರಧಾನ ಕೋಚ್ ರಸೆಲ್ ಡೊಮಿಂಗೊ ಹಾಗೂ ಸ್ಪಿನ್ ಕೋಚ್ ನ್ಯೂಜಿಲೆಂಡ್ನ ಡೇನಿಯಲ್ ವೆಟೋರಿ ಮುಖಗವಸು ಧರಿಸಿಕೊಂಡು ಮೈದಾನಕ್ಕಿಳಿದಿದ್ದರು. ಆಟಗಾರರಾದ ಅಬು ಹೈದರ್, ಅಲ್ ಅಮೀನ್ ಕೂಡ ಮಾಸ್ಕ್ ಧರಿಸಿ ನೆಟ್ನಲ್ಲಿಕಾಣಿಸಿಕೊಂಡರು. ಬಿಸಿಲೇರುತ್ತಿದ್ದಂತೆ ಮಂಜಿನ ಪ್ರಮಾಣ ಕಡಿಮೆಯಾಯಿತು. ಆ ಬಳಿಕ ಆಟಗಾರರು ಮಾಸ್ಕ್ ರಹಿತವಾಗಿ ಅಭ್ಯಾಸ ಮುಂದುವರಿಸಿದರು. ಬಾಂಗ್ಲಾದೇಶ ತಂಡದ ಸಹಾಯಕ ಸಿಬ್ಬಂದಿ ವಿಷಾನಿಲ ಮಿಶ್ರಿತ ಮಂಜಿನ ಬಗ್ಗೆ ಹೆಚ್ಚು ಆತಂಕಗೊಂಡಂತೆ ಕಂಡುಬರಲಿಲ್ಲ. ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಮುಕ್ತಾಯಗೊಳ್ಳುವ ಟಿ20 ಪಂದ್ಯಕ್ಕೆ ಮಂಜಿನ ಭಯವಿಲ್ಲಎಂದು ಬಾಂಗ್ಲಾ ತಂಡದ ಕೋಚ್ ರಸೆಲ್ ಡೊಮಿಂಗೊ ಸುದ್ದಿಗಾರರಿಗೆ ತಿಳಿಸಿದರು. ಏನೇ ಆದರೂ ದಿಲ್ಲಿಯ ವಾಯು ಮಾಲಿನ್ಯದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JJ5Pzv