ಹಾವೇರಿ: ಶಿವಮೊಗ್ಗ ಮೂಲದ ಯುವ ಪತ್ರಕರ್ತ ದಾವಣಗೆರೆ ಜಿಲ್ಲೆಯ ಮಾಯಕೊಂಡ ಸಮೀಪದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ ಅವರು ಬೈಕ್ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ. ಶಿವಮೊಗ್ಗ ನಗರದವಾರದ ಮಂಜುನಾಥ ಅವರು 5 ತಿಂಗಳ ಹಿಂದಷ್ಟೇ ಹಾವೇರಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. 30 ವರ್ಷದ ಮಂಜುನಾಥ ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಗನೂರು ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಹಲವು ಪತ್ರಕರ್ತ ಸ್ನೇಹಿತರು ಮತ್ತು ಕಾಲೇಜು ಸ್ನೇಹಿತರು ಅಗಲಿದ ಗೆಳಯನಿಗೆ ಸಾಮಾಜಿಕ ತಾಣಗಳಲ್ಲಿ ಸ್ಟೇಟಸ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪತ್ರಕರ್ತ ಮಂಜುನಾಥ ಅವರ ಶವವನ್ನು ಆ್ಯಪೆ ಆಟೋದಲ್ಲಿ ಜಿಲ್ಲಾಸ್ಪತ್ರೆಗ ರವಾನೆ ಮಾಡಲಾಗಿದ್ದು, ಈ ಕುರಿತು ಸ್ಥಳೀಯ ಪತ್ರಕರ್ತರು ಖಂಡನೆ ವ್ಯಕ್ತ ಪಡಿಸಿದ್ದಾರೆ. ಇಂದು ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಪತ್ರಕರ್ತರು ಆ್ಯಂಬುಲೆನ್ಸ್ ಕಳುಹಿಸದಿರುವ ಬಗ್ಗೆ ಭಾರಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸುಮಾರು ಗಂಟೆಗಳ ಕಾಲ ಪತ್ರಕರ್ತನ ಶವ ರಸ್ತೆಯಲ್ಲೇ ಬಿದ್ದಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಲಿಲ್ಲ. ಶವ ಸಾಗಿಸಲು ಆ್ಯಂಬುಲೆನ್ಸ್ ಕಳುಹಿಸಲಿಲ್ಲ ಎಂದು ಪತ್ರಕರ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಎಸ್ಪಿ ಹನುಮಂತರಾಯ ಭೇಟಿ ನೀಡಿ ಪತ್ರಕರ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಟ್ರ್ಯಾಕ್ಟರ್ಅನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ರ್ಯಾಕ್ಟರ್ನಲ್ಲಿದ್ದ ಹುಲ್ಲನ್ನೇ ಆ್ಯಪೆ ಗಾಡಿಗೆ ತುಂಬಿ ಅದರ ಮೇಲೆ ಶವವನ್ನು ಸಾಗಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಸಾಗಿಸದೆ ಹೀಗೆ ಆ್ಯಪೆ ಗಾಡಿಯಲ್ಲಿ ಶವ ಸಾಗಿಸಿದ್ದರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
from India & World News in Kannada | VK Polls https://ift.tt/348Mdgm