ಕೊರೊನಾ ಆರ್ಥಿಕ ಸಂಕಷ್ಟದಿಂದ ಪಾರಾಗಲು ದೇಶ ಸಶಕ್ತವಾಗಿದೆ ಎಂದಿರುವ ಪ್ರಧಾನಿ ಮೋದಿ, ನಾವು ಒಟ್ಟಾಗಿ ಈ ಆರ್ಥಿಕ ಹೊಡೆತದಿಂದ ಹೊರಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಉದ್ಯಮ ಒಕ್ಕೂಟ(CII)ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆತ್ಮ ನಿರ್ಭರ ಭಾರತದತ್ತ ದೇಶ ದೃಢವಾಗಿ ಹೆಜ್ಜೆ ಇಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶವನ್ನು ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರದ ಆರ್ಥಿಕ ಯೋಜನೆಗಳು ಸಹಾಯಕಾರಿ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮೇಡ್ ಇನ್ ಇಂಡಿಯಾ ಯೋಜನೆ ಜಗತ್ತಿನ ಒಳಿತಿಗಾಗಿ ಇದೆ ಎಂದು ಹೇಳುವ ಮೂಲಕ ವಿಶ್ವಕ್ಕೆ ಭಾರತದ ನೆರವಿನ ಕುರಿತು ದೇಶಕ್ಕೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ CII ವಾರ್ಷಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಭಾಷಣದ ಕುರಿತು ಗಮನಹರಿಸುವುದಾದರೆ...ಭಾರತದ ಉದ್ಯಮ ಒಕ್ಕೂಟ(CII)ವಾರ್ಷಿಕ ಸಮ್ಮೇಳನ ಹಾಗೂ 125ನೇ ವರ್ಷಾಚರಣೆ ಸಮಾರಂಭ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ನೀಡಿರುವ ಆರ್ಥಿಕ ಹೊಡೆತದಿಂದ ದೇಶ ಪಾರಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಹಾವಳಿಯಿಂದಾಗಿ ತತ್ತರಿಸಿರುವ ದೇಶದ ಉದ್ಯಮ ವಲಯವಕ್ಕೆ ಪುನಶ್ಚೇತನ ತುಂಬಲು ಕೇಂದ್ರ ಸರ್ಕಾರ ಸಿದ್ಧವಿದ್ದು, ಈ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್ ತುಂಬ ಸಹಾಯಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದರು.
ನಿಮ್ಮೊಂದಿಗೆ ನಾನಿದ್ದೇನೆ, ಧೈರ್ಯವಾಗಿ ಮುನ್ನುಗ್ಗಿ: ಆತ್ಮನಿರ್ಭರ ಭಾರತಕ್ಕೆ ಹುಮ್ಮಸ್ಸು ತುಂಬಿದ ಮೋದಿ!
ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ಮೇಲೆತ್ತಲು ಕೇಂದ್ರ ಸರ್ಕಾರ ಸಿದ್ಧವಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಮೋದಿ ಸ್ಪಷ್ಟಪಡಿಸಿದರು. ದೇಶದ ಜನಶಕ್ತಿಯನ್ನು ಬಳಸಿಕೊಂಡು ಆರ್ಥಿಕ ಪುನಶ್ಚೇತನಕ್ಕೆ ನಾಂದಿ ಹಾಡಲಾಗುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ದೇಶಕ್ಕೆ ಆರ್ಥಿಕ ಪುನಶ್ಚೇತನದ ಹಾದಿ ತೋರಿಸಿರುವ ಪ್ರಧಾನಿ ಮೋದಿ, ಆತ್ಮ ನಿರ್ಭರ ಭಾರತದ ಯೋಜನೆಗೆ ಮತ್ತಷ್ಟು ವೇಗ ತುಂಬುವ ಮುನ್ಸೂಚನೆ ನೀಡಿದರು. ಭಾರತದ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಜನಶಕ್ತಿಯನ್ನು ಬಳಸಿಕೊಂಡೇ ಆರ್ಥಿಕ ಪುನಶ್ಚೇತನಕ್ಕೆ ಮುನ್ನುಡಿ ಬರೆಯಲಾಗುವುದು ಎಂದು ಮೋದಿ ಹೇಳಿದರು.
ಪ್ರಧಾನಿ ಮೋದಿ ಮನ್ ಕಿ ಬಾತ್: ದೇಶಕ್ಕೆ ಭವಿಷ್ಯದ ಮಾರ್ಗ ತೋರಿಸಿದ ನಾಯಕ!
20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಹಾಗೂ ಹಂತ ಹಂತವಾಗಿ ವಾಣಿಜ್ಯ ಚಟುವಟಿಕೆಗಳನ್ನು ಪುನರಾರಂಭಿಸುವ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಾಗುವುದು ಎಂದು ಪ್ರಧಾನಿ ನುಡಿದರು. ಭಾರತದ ಸಂಪನ್ಮೂಲಗಳ ಸದ್ಭಳಕೆ ಮಾಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, ಇದೇ ಕಾರಣಕ್ಕೆ ಆತ್ಮ ನಿರ್ಭರ ಭಾರತ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಮೋದಿ ಸ್ಪಷ್ಟಪಡಿಸಿದರು.
ಕೊರೊನಾ ಆರ್ಥಿಕ ಆಘಾತದಿಂದ ಹೆದರದೇ ದೇಶವಾಸಿಗಳು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಕರೆ ನೀಡಿರುವ ಪ್ರಧಾನಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಆರ್ಥಿಕ ಪುನಶ್ಚೇತನ ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದ್ದು, ಆಯವುದಕ್ಕು ಅಂಜದೇ ಮುನ್ನುಗ್ಗುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಘೋಷಿಸಿದ್ದು ವಿಶ್ವದ ಮೂರನೇ ಅತಿದೊಡ್ಡ ವಿಶೇಷ ಆರ್ಥಿಕ ಪ್ಯಾಕೇಜ್!
ನಾವು ಒಟ್ಟಾಗಿ ದೇಶದ ಅಭಿವೃದ್ಧಿಗೆ ದುಡಿಯಬೇಕಿದ್ದು, ಸರ್ಕಾರ, ಜನತೆ ಮತ್ತು ಉದ್ಯಮ ವಲಯದ ಸಂಘಟಿತ ಪ್ರಯತ್ನ ಖಂಡಿತ ಫಲ ನೀಡಲಿದೆ ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದರು. ಸರ್ಕಾರ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಸಹಾಯ ಮಾಡಲಿದ್ದು, ಸಮಾಜದ ಎಲ್ಲಾ ವರ್ಗಗಳ ಅಭ್ಯುದಯಕ್ಕಾಗಿ ಶ್ರಮಿಸಲಿದೆ ಎಂದು ಮೋದಿ ನುಡಿದರು.
ಮೇಕ್ ಇನ್ ಇಂಡಿಯಾ ಹಾಗೂ ಮೇಡ್ ಇನ್ ಇಂಡಿಯಾ ಯೋಜನೆಗಳು ಭಾರತದ ಆರ್ಥಿಕ ಅಭಿವೃಧ್ಧಿಯ ದಿಕ್ಕನ್ನೇ ಬದಲಾಯಿಸಿದ್ದು, ಇದೀಗ ಈ ಯೋಜನೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಕಾಲ ಕೂಡಿ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಗತ್ತಿನ ಒಳಿತಿಗಾಗಿ ಮೇಡ್ ಇನ್ ಇಂಡಿಯಾ ಯೋಜನೆ ಕಾರ್ಯ ನಿರ್ವಹಿಸಲಿದ್ದು, ನಮ್ಮೊಂದಿಗೆ ಇಡೀ ಜಗತ್ತನ್ನು ಮುಂದಕ್ಕೆ ಕೊಂಡೊಯ್ಯಲು ದುಡಿಯೋಣ ಎಂದು ಮೋದಿ ಕರೆ ನೀಡಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ಜಗತ್ತಿನ ಸುಮಾರು 150ಕ್ಕೂ ಹೆಚ್ಚು ದೇಶಗಳಿಗೆ ಭಾರತ ವೈದ್ಯಕೀಯ ನೆರವು ನೀಡಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದು, ಜಗತ್ತು ಹಿಂದೆಂದಿಗಿಂತಲೂ ಭಾರತದ ನೆರವಿನ ನಿರೀಕ್ಷೆಯಲ್ಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಆತ್ಮಬಲದಿಂದ ಆರ್ಥಿಕತೆವರೆಗೆ..! ಪ್ರಧಾನಿ ಮೋದಿ ಭಾಷಣದ Top 10 ಹೈಲೈಟ್ಸ್..
ಈ ಅವಕಾಶವನ್ನೇ ಬಳಸಿಕೊಂಡು ನಾವು ಒಗ್ಗಟ್ಟಿನಿಂದ ದುಡಿದರೆ ದೇಶದ ಆರ್ಥಿಕ ಬೆಳವಣಿಗೆಯನ್ನು ಮರಳಿ ಪಡೆಯುವುದು ಕಷ್ಟಕರವಲ್ಲ ಎಂದು ಮೋದಿ ಸಲಹೆ ನೀಡಿದರು. ಒಟ್ಟಿನಲ್ಲಿ ಕೊರೊನಾ ವೈರಸ್ ನೀಡಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ದೇಶಕ್ಕೆ ಪ್ರಧಾನಿ ಮೋದಿ ಪಥ ತೋರಿಸಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖವಾಗಬೇಕಿದೆ.
from India & World News in Kannada | VK Polls https://vijaykarnataka.com/business/news/made-in-india-is-made-for-the-world-says-pm-modi-in-cii-annual-meet/articleshow/76150576.cms