ಹೊಸದಿಲ್ಲಿ: ದೇಶಾದ್ಯಂತ ದಿನೇ ದಿನೇ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ವರೆಗಿನ ಪ್ಯಾಸೆಂಜರ್ ರೈಲು ಟಿಕೆಟ್ಗಳನ್ನು ರದ್ದು ಮಾಡಲು ನಿರ್ಧರಿಸಿದೆ. ಲಾಕ್ಡೌನ್ ಹಿನ್ನೆಲೆ ಮಾರ್ಚ್ನಲ್ಲಿ ವಿಧಿಸಲಾದ ಕೆಲವು ನಿರ್ಬಂಧಗಳನ್ನು ಸರ್ಕಾರ ಸಡಿಲಿಸಿದ ನಂತರ ದೇಶದೆಲ್ಲೆಡೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಹೀಗಾಗಿ ಜುಲೈ ಒಂದರಿಂದ ಆಗಸ್ಟ್ 12ರ ತನಕ ಸಾಮಾನ್ಯ ರೈಲುಗಳಿಗಾಗಿ ಕಾಯ್ದಿರಿಸಿದ ಎಲ್ಲಾ ಟಿಕೆಟುಗಳನ್ನು ರದ್ದು ಮಾಡಿ ಪೂರ್ತಿ ಹಣವನ್ನು ಮರುಪಾವತಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಆದರೆ ಮೇ ಮತ್ತು ಜೂನ್ ತಿಂಗಳಲ್ಲಿ ಘೋಷಿಸಲಾದ ವಿಶೇಷ ರೈಲುಗಳು ಸಂಚರಿಸಲಿದ್ದು, ಜುಲೈ ಒಂದರಿಂದ ಸಾಮಾನ್ಯ ರೈಲುಗಳ ಸಂಚಾರ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಜೂನ್ ಆರಂಭದಲ್ಲಿ ಪ್ಯಾಸೆಂಜರ್ ರೈಲುಗಳ ಸಂಖ್ಯೆಯನ್ನು 30ರಿಂದ 200ಕ್ಕೆ ಏರಿಸಲಾಗಿತ್ತು. ಇನ್ನು, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಕೂಡ ರೈಲು ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿದ್ದು, ಟಿಕೆಟ್ ಕ್ಯಾನ್ಸಲ್ ಮಾಡಿ ಹಣ ಮರುಪಾವತಿ ಮಾಡಲು ಬೇಡಿಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದಲ್ಲಿ ಲಾಕ್ಡೌನ್ ಆಗುವ ಮೊದಲು ಪ್ರತಿದಿನ 12,000 ರೈಲುಗಳು ಸಂಚಾರ ಮಾಡುತ್ತಿದ್ದು, ರೈಲುಗಳಲ್ಲಿ ದಿನವೊಂದಕ್ಕೆ 2 ಕೋಟಿ ಜನರು ಪ್ರಯಾಣಿಸುತ್ತಿದ್ದರು.
from India & World News in Kannada | VK Polls https://ift.tt/2CLSZQF