ಹೊಸದಿಲ್ಲಿ: ಇತಿಹಾಸದಲ್ಲಿ ಹತ್ತು ಸಾವಿರ ರನ್ಗಳನ್ನು ಗಳಿಸಿದ ಮೊತ್ತ ಮೊದಲ ಬ್ಯಾಟ್ಸ್ಮನ್ ಆಗಿರುವ ಭಾರತ ತಂಡದ ಮಾಜಿ ನಾಯಕ , ಕಪ್ತಾನನಾಗಿಯೂ ಅಷ್ಟೇ ಯಶಸ್ಸನ್ನು ಕಂಡಿದ್ದಾರೆ. ಇದೀಗ ತಮ್ಮ ನಾಯಕತ್ವದ ದಿನಗಳನ್ನು ಸ್ಮರಿಸಿರುವ ಲಿಟ್ಲ್ ಮಾಸ್ಟರ್ ಖ್ಯಾತಿಯ ಆಟಗಾರ, 1978-79ರಲ್ಲಿ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ 6 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಟ್ಟರೂ ನಾಯಕತ್ವ ಕಳೆದುಕೊಂಡ ಘಟನೆ ವಿವರಿಸಿದ್ದಾರೆ. ಅಂದು ತಾವು ನಾಯಕತ್ವ ಕಳೆದುಕೊಂಡದ್ದು ಯಾವ ಕಾರಣಕ್ಕೆ ಎಂಬುದು ಈವರೆಗೆ ಅರ್ಥವಾಗಿಲ್ಲ ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ. ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ಗಳ ರೋಚಕ ಜಯ ದಾಖಲಿಸಿ 6 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಗವಾಸ್ಕರ್ ನಾಯಕನಾಗಿ 732 ರನ್ಗಳನ್ನು ಬಾರಿಸಿದ್ದರೂ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಎಸ್ ವೆಂಕಟರಾಘವನ್ ಅವರನ್ನು ನೂತನ ನಾಯಕನನ್ನಾಗಿ ನೇಮಕ ಮಾಡಿತ್ತು. "1978-79ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದುಕೊಟ್ಟರೂ ನನ್ನನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಿಸಲಾಗಿತ್ತು. ಅಷ್ಟೇ ಅಲ್ಲದೆ ಆ ಸರಣಿಯಲ್ಲಿ ನಾನು 700+ ರನ್ಗಳನ್ನು ಗಳಿಸಿದ್ದೆ. ಅಂದು ನಾಯಕತ್ವ ಕಳೆದುಕೊಂಡಿದ್ದಾದರೂ ಏಕೆ ಎಂಬುದು ಈಗಲೂ ಅರ್ಥವಾಗಿಲ್ಲ. ಆದರೆ, ಕೆರಿ ಪ್ಯಾಕರ್ ವಿಶ್ವ ಸರಣಿಗೆ ಸೇರುವಂತೆ ನನಗೆ ಆಹ್ವಾನವಿತ್ತು. ಈ ಬಗ್ಗೆ ನಾನು ಹೇಳಿಕೊಂಡಿದ್ದೆ ಕೂಡ. ಆ ಹೊತ್ತಿಗೆ ಬಿಸಿಸಿಐ ಒಪ್ಪಂದಕ್ಕೆ ಸಹಿ ಹಾಕಿದ್ದೆ. ಹೀಗಾಗಿ ಬಿಸಿಸಿಐಗೆ ನಾನು ನಿಷ್ಠೆಯಿಂದ ಇದ್ದೆ. ಬಹುಶ ಆ ಒಪ್ಪಂದದ ಬಗ್ಗೆ ಮಾತನಾಡಿದ ಸಲುವಾಗಿ ನಾಯಕತ್ವ ಕಳೆದುಕೊಂಡಿರಬಹುದು," ಎಂದು ಗವಾಸ್ಕರ್ ಮಿಡ್-ಡೇಗೆ ಬರೆದಿರುವ ತಮ್ಮ ಲೇಖನದಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಬಿಶನ್ ಸಿಂಗ್ ಬೇಡಿ ಅವರನ್ನು ಸಮಿತಿ ತಂಡದಿಂದ ಕೈಬಿಡಲು ನಿರ್ಧರಿಸಿತ್ತು. ಆದರೆ ಸಮಿತಿಯ ಮನವೊಲಿಸಿ ಬೇಡಿಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಆಡುವಂತೆ ಮಾಡಿದ್ದ ಘಟನೆಯನ್ನೂ ಗವಾಸ್ಕರ್ ನೆನೆದಿದ್ದಾರೆ. "ಮೂರು ಟೆಸ್ಟ್ಗಳ ಬಳಿಕ ಬೇಡಿಯನ್ನು ತಂಡದಿಂದ ಕೈಬಿಡಲು ಸಮಿತಿ ನಿರ್ಧರಿಸಿತ್ತು. ನೇರವಾಗಿಯೇ ಅವರನ್ನು ತಂಡದಿಂದ ಕೈಬಿಡಲು ಮುಂದಾಗಿದ್ದರು. ಪಾಕಿಸ್ತಾನ ವಿರುದ್ಧದ ಸರಣಿ ಬಳಿಕ ನಾನು ಅವರಿಂದ ನಾಯಕತ್ವ ವಹಿಸಿಕೊಂಡಿದ್ದೆ. ಬಳಿಕ ಸಮಿತಿಯೊಂದಿಗೆ ಬೇಡಿ ಈಗಲೂ ಶ್ರೇಷ್ಠ ಎಡಗೈ ಸ್ಪಿನ್ನರ್ ಎಂದು ವಾದಿಸಿದ್ದೆ. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯಕ್ಕೆ ಬೇಡಿಯನ್ನು ಆಯ್ಕೆ ಮಾಡಿದ್ದರು," ಎಂದು ಹೇಳಿದ್ದಾರೆ. "ತಂಡದಲ್ಲಿ ಆಗಷ್ಟೇ ಕಪಿಲ್ ದೇವ್ ಮತ್ತು ಕರ್ಸನ್ ಘಾರ್ವಿ ಅವರ ಆಗಮನವಾಗಿತ್ತು. ಹೊಸ ಚೆಂಡಿನಲ್ಲಿ ಈ ವೇಗಿಗಳು ಅಬ್ಬರಿಸುತ್ತಿದ್ದ ಕಾರಣ ಸ್ಪಿನ್ನರ್ಗಳಿಗೆ ಹೆಚ್ಚು ಅವಕಾಶ ಸಿಗುತ್ತಿರಲಿಲ್ಲ. ಜೊತೆಗೆ ಪಿಚ್ಗಳು ಕೂಡ ಬ್ಯಾಟಿಂಗ್ ಸ್ನೇಹಿಯಾಗಿತ್ತು. ಸ್ಪಿನ್ನರ್ಗಳಿಗೆ ಅಲ್ಲಿ ಕವಡೆ ಕಿಮ್ಮತ್ತಿರಲಿಲ್ಲ. ಹೀಗಾಗಿ ಆಯ್ಕೆದಾರರು 2-3ನೇ ಟೆಸ್ಟ್ಗೆ ಬೇಡಿಯನ್ನು ಹೊರಗಿಡಲು ನಿರ್ಧರಿಸಿದ್ದರು. ಆಗಲೂ ಕೂಡ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೆ," ಎಂದು ಸುನಿಲ್ ತಮ್ಮ ನೆನೆಪಿನಾಳ ಕೆದಕಿದ್ದಾರೆ. 70 ವರ್ಷದ ಮಾಜಿ ಕ್ರಿಕೆಟಿಗ ಭಾರತ ತಂಡದ ಪರ 125 ಟೆಸ್ಟ್ ಕ್ರಿಕೆಟ್ ಮತ್ತು 108 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 10122 ಮತ್ತು 3092 ರನ್ಗಳನ್ನ ಗಳಿಸಿದ್ದಾರೆ. ಇದರಲ್ಲಿ 35 ಅಂತಾರಾಷ್ಟ್ರೀಯ ಶತಕಗಳು ಸೇರಿವೆ ಎಂಬುದು ವಿಶೇಷ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2AdnFsV