ಉಪ ಚುನಾವಣೆ ಕುರಿತಾದ ಎಚ್ಡಿಕೆ ಹೇಳಿಕೆಗಳನ್ನು ಜೆಡಿಎಸ್‌ ಪಕ್ಷದ ಶಾಸಕರೇ ನಂಬೋ ಸ್ಥಿತಿಯಲ್ಲಿಲ್ಲ!

ಬೆಂಗಳೂರು: ಕೆಲವು ದಿನಗಳಿಂದ ಮಾಜಿ ಸಿಎಂ ಕುಮಾರಸ್ವಾಮಿಯವರ ವಿಭಿನ್ನ ಹೇಳಿಕೆಗಳು ರಾಜಕೀಯ ವಲಯದಲ್ಲಿ ವಿಶೇಷವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಳೆಯದಲ್ಲಿ ಸಾಕಷ್ಟು ಗೊಂದಲ ಮೂಡಿಸಿವೆ. ಜತೆಗೆ ಅವರ ನಡೆ-ನುಡಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ಉಭಯ ಪಕ್ಷಗಳು ಅವರನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಅನರ್ಹರ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಪು ಬರುವ ಮುನ್ನ ಯಾವುದೇ ಕಾರಣಕ್ಕೂ ಬಿಜೆಪಿ ಸರಕಾರ ಪತನಗೊಳ್ಳಲು ಬಿಡುವುದಿಲ್ಲ, ಸಾಧ್ಯವಾದರೆ ಬಿಜೆಪಿಗೆ ಬೆಂಬಲ ನೀಡಲು ಸಿದ್ಧ, ರಾಜ್ಯದ ಜನತೆಗೆ ಪ್ರವಾಹ ಪರಿಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ಬೇಕಿಲ್ಲವೆಂದು ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ್ದರು. ಆದರೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಂದರ್ಭದಲ್ಲೇ ಅನರ್ಹ ಶಾಸಕರನ್ನು ಸೋಲಿಸಲು ನಮ್ಮ ಪಕ್ಷ ಪ್ರಬಲವಾಗಿರುವ ಕಡೆ ಹೋರಾಡುತ್ತೇವೆ, ಉಳಿದ ಕಡೆ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಎರಡು ದೋಣಿಗಳಲ್ಲೂ ಕಾಲಿಟ್ಟಿದ್ದಾರೆ. ಜತೆಗೆ ಅನರ್ಹರನ್ನು ಟಾರ್ಗೆಟ್‌ ಮಾಡಿ ತಮ್ಮದೇ ಲೆಕ್ಕಾಚಾರದಲ್ಲಿ ಹೊರಟಿದ್ದಾರೆ. ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಬಗ್ಗೆ ಇದುವರೆಗೂ ಕಾಂಗ್ರೆಸಿಗರು ಸ್ವಾಗತಿಸಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ. ಆ ಬಗ್ಗೆ ಕಾಂಗ್ರೆಸ್‌ ಜಾಣ ಮೌನ ತಾಳಿದೆ. ಉಪ ಚುನಾವಣೆಯ ಫಲಿತಾಂಶ ನಂತರ ಬಿಜೆಪಿ ಮ್ಯಾಜಿಕ್‌ ನಂಬರ್‌ (113) ದಾಟಬಾರದು ಎಂಬುದು ಮಾಜಿ ದೋಸ್ತಿಗಳ ನಿರೀಕ್ಷೆ. ಆದರೆ ಬಿಜೆಪಿಯು ಸ್ಥಿರ ಸರಕಾರದ ಆಶಯದೊಂದಿಗೆ ಪೂರ್ಣ ಬಹುಮತದ ಸಂಖ್ಯಾಬಲ ಗಿಟ್ಟಿಸಿಕೊಳ್ಳಲು ರಣತಂತ್ರ ರೂಪಿಸಿದೆ. ಈ ರಣತಂತ್ರ ವಿಫಲವಾಗಿ ಚುನಾವಣಾ ಫಲಿತಾಂಶದ ಬಳಿಕ ಮತ್ತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಬಿಜೆಪಿ ನನ್ನನ್ನೇ ಆಶ್ರಯಿಸಬೇಕು ಇಲ್ಲವೇ ಕಾಂಗ್ರೆಸ್‌ ಜತೆಗೂಡಿ ಮತ್ತೆ ಸಮ್ಮಿಶ್ರ ಸರಕಾರ ರಚಿಸಬೇಕೆಂಬ ಒಂದೇ ಬಾಣದ ಎರಡು ಗುರಿಗಳೊಂದಿಗೆ ಕುಮಾರಸ್ವಾಮಿ ಹೊರಟಿದ್ದಾರೆ. ಹೀಗಾಗಿ ಅವರ ಒಂದು ದಿನ ಬಿಜೆಪಿ ಕಡೆ ವಾಲಿದರೆ ಮತ್ತೊಂದು ದಿನ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ. ತಮ್ಮ ನೇತೃತ್ವದ ಸರಕಾರ ಪತನಗೊಳ್ಳಲು ಕಾರಣರಾದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಇತ್ತೀಚೆಗೆ ತಮ್ಮ ಧೋರಣೆ ಬದಲಾಯಿಸಿಕೊಂಡು ಮೃದು ಮಾತುಗಳನ್ನಾಡುತ್ತಿದ್ದಾರೆ. ಎಚ್‌ಡಿಕೆ ಅವರ ಹೇಳಿಕೆಗಳು ಕೇವಲ ಬಿಜೆಪಿ, ಕಾಂಗ್ರೆಸ್‌ ಪಕ್ಷದೊಳಗೆ ಗೊಂದಲ ಮೂಡಿಸಿಲ್ಲ, ಜೆಡಿಎಸ್‌ನಲ್ಲೂ ಗೊಂದಲಮಯ ವಾತಾವರಣ ಸೃಷ್ಟಿಸಿದೆ. ಪಕ್ಷಕ್ಕೆ ಅನಾಯಾಸವಾಗಿ ದೊರಕಿದ್ದ ಅಧಿಕಾರವನ್ನು ಕಳೆದುಕೊಂಡಿದ್ದರ ಬಗ್ಗೆ ಜೆಡಿಎಸ್‌ ಶಾಸಕರಲ್ಲಿ ಕುಮಾರಸ್ವಾಮಿ ಬಗೆಗಿನ ಸಿಟ್ಟು ಇನ್ನೂ ತಣ್ಣಗಾಗಿಲ್ಲ. ಹೀಗಾಗಿ ಅವರ ಹೇಳಿಕೆಗಳನ್ನು ಅವರ ಶಾಸಕರೇ ನಂಬುವ ಸ್ಥಿತಿಯಲ್ಲಿ ಇಲ್ಲ.


from India & World News in Kannada | VK Polls https://ift.tt/2KGFhPN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...