- ಪ್ರಮೋದ ಹರಿಕಾಂತ, ಬೆಳಗಾವಿ ಕಳೆದ ವರ್ಷದ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರಕಾರ 10 ತಿಂಗಳು ಕಾಲಾವಕಾಶ ಕೊಟ್ಟಿತ್ತು. ಆ ಅವಧಿ ಇನ್ನೇನು ಮುಕ್ತಾಯವಾಗುತ್ತಿದೆ. ಆದರೆ, ಎಲ್ಲಿಯೂ ಮನೆ ನಿರ್ಮಾಣ ಪೂರ್ಣಗೊಂಡಿಲ್ಲ. ಹೀಗಿದ್ದರೂ, ಇನ್ನೂ ಯಾಕೆ ಮನೆ ನಿರ್ಮಿಸಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿ ಗ್ರಾಮ ಪಂಚಾಯಿತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಕೆಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂತ್ರಸ್ತರನ್ನು ಭೇಟಿ ಮಾಡಿ ಬೇಗ ಮನೆ ನಿರ್ಮಿಸಿಕೊಳ್ಳಿ ಒತ್ತಡ ಹಾಕುತ್ತಿದ್ದಾರೆ. ಇದು ಸಂತ್ರಸ್ತರನ್ನು ಕಂಗಾಲಾಗಿಸಿದೆ. ಅಲ್ಲದೆ, ಈ ನೋಟಿಸ್ ಕೊರೊನಾ ಸಂದರ್ಭದಲ್ಲಿ ರಾಜ್ಯ ಸರಕಾರ ಗಳಿಸಿದ ವಿಶ್ವಾಸವನ್ನೆಲ್ಲ ಮಣ್ಣು ಪಾಲು ಮಾಡಿದೆ. ವಾಸ್ತವದಲ್ಲಿ ರಾಜ್ಯದಲ್ಲಿ ಯಾವೊಬ್ಬ ಸಂತ್ರಸ್ತರಿಗೂ ಪೂರ್ಣ ಪರಿಹಾರ ವಿತರಣೆ ಆಗಿಯೇ ಇಲ್ಲ. ಬಹುತೇಕ ಮನೆಗಳು ತಳಪಾಯ, ಗೋಡೆ ಹಂತದಲ್ಲಿಯೇ ಇವೆ. ಅದರಲ್ಲಿ ಸರಕಾರದ ಪರಿಹಾರಕ್ಕಿಂತ ಜನರು ಸ್ವಂತ ಹಣವನ್ನೇ ಹೆಚ್ಚು ವಿನಿಯೋಗಿಸಿದ್ದಾರೆ. ತಳಪಾಯವಾದ ಬಳಿಕ ಮೊದಲ ಕಂತು, ಗೋಡೆಯಾದ ಬಳಿಕ ಎರಡನೇ ಕಂತು ಕೊಡುವುದಾಗಿ ಸರಕಾರ ಹೇಳಿತ್ತು. ಆದರೆ, ಎಷ್ಟೋ ಮನೆಗಳು ತಳಪಾಯ ಆಗಿ ತಿಂಗಳು ಕಳೆದರೂ ಎರಡನೇ ಕಂತು ಕೊಟ್ಟಿಲ್ಲ. ಒಂದೊಂದು ತಿಂಗಳು ವಿಳಂಬ ಮಾಡಲಾಗುತ್ತಿದೆ. ಕೆಲವರಿಗಂತೂ ಮೊದಲ ಕಂತಿನ ಹಣವೇ ಸಿಕ್ಕಿಲ್ಲ. ಇನ್ನೊಂದೆಡೆ ಮತ್ತೊಂದು ಮಳೆಗಾಲ ಬಂದೇ ಬಿಟ್ಟಿದೆ. ಸರಕಾರದ ಪರಿಹಾರ ನಂಬಿ ಜನರು ಇದ್ದ ಹಣವನ್ನೆಲ್ಲ ಮನೆ ನಿರ್ಮಾಣಕ್ಕೆ ಬಳಸಿದ್ದಾರೆ. ಕೊರೊನಾ ಬಂದು ತುತ್ತು ಅನ್ನಕ್ಕೂ ತತ್ವಾರ ಮಾಡಿದೆ. ಹೀಗಿರುವಾಗ ಜ್ಞಾಪನಾ ಪತ್ರದ ರೂಪದಲ್ಲಿ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದರಿಂದ ಜನ ಹೆದರಿ ಕಂಗಾಲಾಗಿದ್ದಾರೆ. 11 ಸಾವಿರ ಮನೆಗಳುಕಳೆದ ವರ್ಷ ಆಗಸ್ಟ್ನಲ್ಲಿ ಬಂದ ಪ್ರವಾಹದಲ್ಲಿ ರಾಜ್ಯದಲ್ಲಿ ಬರೋಬ್ಬರಿ 11 ಸಾವಿರ ಮನೆಗಳು ಸಂಪೂರ್ಣ ನೆಲಸಮ ಆಗಿದ್ದವು. 32 ಸಾವಿರ ಮನೆಗಳು ವಿವಿಧ ರೀತಿಯಲ್ಲಿ ಹಾನಿಯಾಗಿದ್ದವು. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಸುಮಾರು ಸುಮಾರು ಒಂಬತ್ತು ಸಾವಿರ ಮನೆಗಳು ನೆಲ ಸಮ ಆಗಿವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಕುಂಭದ್ರೋಣ ಮಳೆಗೆ ಅತಿ ಹೆಚ್ಚು ಹಾನಿಗೊಂಡಿವೆ. ಪ್ರವಾಹದ ಹೊಡೆತಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೂರಿಲ್ಲದೆ, ಬಾಡಿಗೆ ಮನೆ, ಶೆಡ್ ಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಅವರೆಲ್ಲರ ಸ್ಥಿತಿ ಈಗ ಚಿಂತಾಜನಕವಾಗಿದೆ. ಈ ವರ್ಷ ವಾಡಿಕೆಯಷ್ಟು ಮಳೆಯಾದರೂ ಅದೇ ಸಂತ್ರಸ್ತರು ಮತ್ತೆ ಕಾಳಜಿ ಕೇಂದ್ರ ಸೇರುವ ಸ್ಥಿತಿ ಸೃಷ್ಟಿಯಾಗುವ ಆತಂಕ ಇದೆ. ಆಮೆ ಗತಿ ಕೆಲಸಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರಕಾರ 2019ರ ಅಕ್ಟೋಬರ್ನಲ್ಲಿ ಪರಿಹಾರ ಘೋಷಣೆ ಮಾಡಿದರೂ, ಸಂತ್ರಸ್ತರಿಗೆ ಮೊದಲ ಕಂತಿನ ಪರಿಹಾರ ಸಿಕ್ಕಿದ್ದು 2019ರ ಕೊನೆಗೆ. ಅದಾದ ಬಳಿಕ ಅರ್ಹರನ್ನು ಆಯ್ಕೆ ಮಾಡುವಲ್ಲಿ ಯಡವಟ್ಟು ಆಗಿದ್ದರಿಂದ 2020ರ ಫೆಬ್ರುವರಿಯಲ್ಲಿ ಹಲವರಿಗೆ ಮೊದಲ ಕಂತು ಕೊಡಲಾಗಿದೆ. ಕೆಲವರು ದಾಖಲೆ ಹೊಂದಿಸಲಾಗದೆ ಇನ್ನೂ ಪರಿಹಾರ ಪಡೆದಿಲ್ಲ. ಈಗಂತೂ ತಳಪಾಯ ಜಿಪಿಎಸ್ ಆದರೂ ಎರಡನೇ ಕಂತು ಬರುವಷ್ಟರಲ್ಲಿ ಒಂದು ತಿಂಗಳ ಸಮಯ ತಗಲುತ್ತಿದೆ. ಗ್ರಾಮ ಪಂಚಾಯಿತಿ, ತಹಸೀಲ್ದಾರ್ ಕಚೇರಿ ಹಂತದಲ್ಲಿಯೇ ದಾಖಲೆಗಳು ಸಿಕ್ಕಿ ಬೀಳುತ್ತಿವೆ. ಬರೆಯ ಮೇಲೆ ಬರೆರಾಜ್ಯ ಸರಕಾರ ಪೂರ್ಣ ಮನೆ ಬಿದ್ದವರಿಗೆ ಐದು ಲಕ್ಷ ರೂ. ಮತ್ತು 50 ಸಾವಿರ ರೂ. ಭಾಗಶಃ ಹಾನಿ ಆಗಿದ್ದರೆ ಮೂರು ಲಕ್ಷ ರೂ. (ಮೊದಲು ಐದು ನಂತರ ಮೂರಕ್ಕೆ ಇಳಿಸಿದೆ) ಅಲ್ಪ ಹಾನಿ ಆಗಿದ್ದರೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಅಲ್ಲದೆ, ಮನೆ ನಿರ್ಮಿಸಿಕೊಳ್ಳಲು 10 ತಿಂಗಳ ಗಡುವು ನೀಡಿತ್ತು. ಪರಿಹಾರ ವಿತರಣೆಯಲ್ಲಿ ಆದ ಮಹಾ ವಿಳಂಬ ನೀತಿಯಿಂದಾಗಿ ಸಂತ್ರಸ್ತರು ಮತ್ತೊಂದು ಮಳೆಗಾಲ ಗುಡಿಸಲಿನಲ್ಲಿಯೇ ಇರುವಂತಾಗಿದೆ. ರಾಜ್ಯ ಸರಕಾರ ಕೊಡುವ ಬಾಡಿಗೆ 10 ತಿಂಗಳಿಗೆ ಮುಗಿಯಲಿದೆ. ಕೆಲವರಿಗೆ ಬಾಡಿಗೆ ಹಣ ಸಹ ಕೊಟ್ಟಿಲ್ಲ. ಕೊರೊನಾ ಆರ್ಥಿಕ ಹೊಡೆತ ಕೊಟ್ಟಿದೆ. ಇದರಿಂದ ಸಂತ್ರಸ್ತರಿಗೆ ಮನೆ ಬಾಡಿಗೆ ಕಟ್ಟುವುದಕ್ಕೂ ಹಣದ ಕೊರತೆ ಸೃಷ್ಟಿಯಾಗಿದೆ.
from India & World News in Kannada | VK Polls https://ift.tt/300n2gS