ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಭೀಕರ ಘರ್ಷಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಗಡಿಯಲ್ಲಿ ಭಾರತೀಯ ಸೈನಿಕರು ಹುತಾತ್ಮರಾಗಲು ಸರ್ಕಾರದ ನಿರ್ಲ್ಯಕ್ಷವೇ ಕಾರಣ ಎಂಬುದು ರಾಹುಲ್ ಗಾಂಧಿ ಆರೋಪವಾಗಿದೆ. ಚೀನಿ ಸೈನಿಕರ ದುಸ್ಸಾಹಸ ಹಾಗೂ ಸರ್ಕಾರದ ಮೌನದ ಕುರಿತು ರಾಹುಲ್ ನಿರಂತರವಾಗಿ ಟ್ವೀಟ್ ಮಾಡುತ್ತಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದರಂತೆ ಮಾಧ್ಯಮವೊಂದರ ಸಂದರ್ಶನದ ವಿಡಿಯೋವನ್ನು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಚೀನಾ ನಮ್ಮ ನಿಶಸ್ತ್ರ ಸೈನಿಕರನ್ನು ಕೊಲ್ಲುವ ಧೈರ್ಯ ಹೇಗೆ ಮಾಡಿತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಮ್ಮ ಸೈನಿಕರನ್ನು ಶಸ್ತ್ರಗಳಿಲ್ಲದೇ ಗಡಿಗೆ ಏಕೆ ಕಳುಹಿಸಲಾಯಿತು ಎಂದೂ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅದರೆ ರಾಹುಲ್ ಗಾಂಧಿ ಅವರ ಈ ಟ್ವೀಟ್ಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ಸೂಕ್ತ ತರಬೇತಿ ನೀಡದಿದ್ದರೆ ಇಂತಹ ಮುಜುಗರವನ್ನು ಅನುಭವಿಸುತ್ತಲೇ ಇರಬೇಕಾಗುತ್ತದೆ ಎಂದು ಎಚ್ಚರಸಿದ್ದಾರೆ. ' ಗಡಿ ಘರ್ಷಣೆ ಕುರಿತು ಅತಾರ್ಕಿಕವಾಗಿ ಮಾತನಾಡುತ್ತಿರುವ ರಾಹುಲ್ ಗಾಂಧಿ ಅವರಿಗೆ ಸೈನ್ಯ ಮಿಲಿಟರಿ ಜ್ಞಾನವನ್ನು ಕಲಿಸಬೇಕು ಎಂದೂ ಬಿ.ಎಲ್ ಸಂತೋಷ್ ಆಗ್ರಹಿಸಿದ್ದಾರೆ. ರಾಹುಲ್ಗೆ ನೆಟ್ಟಿಗರ ಕ್ಲಾಸ್: ಇನ್ನು ರಾಹುಲ್ ಗಾಂಧಿ ಅವರ ಟ್ವೀಟ್ಗೆ ನೆಟ್ಟಿಗರೂ ಪ್ರತಿಕ್ರಿಯೆ ನೀಡುತ್ತಿದ್ದು, 1962ರ ಯುದ್ಧದಲ್ಲಿ ಅಂದಿನ ನೆಹರೂ ಸರ್ಕಾರ ಭಾರತೀಯ ಸೈನಿಕರಿಗೆ ಎಂತಹ ಶಸ್ತ್ರಗಳನ್ನು ನೀಡಿತ್ತು ಎಂಬುದು ಇಡೀ ಜಗತ್ತಿಗೆ ಗೊತ್ತು ಎಂದು ಕಾಲೆಳೆದಿದ್ದಾರೆ. ಗಡಿ ಘರ್ಷಣೆ ಕುರಿತು ಮಾತನಾಡುತ್ತಿರುವ ರಾಹುಲ್ ಗಾಂಧಿ, ಮೊದಲು 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ನೆಹರೂ ಸರ್ಕಾರ ಮಾಡಿದ ತಪ್ಪುಗಳ ಕುರಿತು ಅಧ್ಯಯನ ನಡೆಸಲಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಗಡಿ ಘರ್ಷಣೆ ಕುರಿತು ಪ್ರಧಾನಿ ಮೋದಿ ಸರ್ಕಾರವನ್ನು ಪ್ರಶ್ನಿಸುವ ಭರದಲ್ಲಿ ರಾಹುಲ್ ಗಾಂಧಿ, ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
from India & World News in Kannada | VK Polls https://ift.tt/2YPbECt