ಮಕ್ಕಳಿಂದ ಮುದುಕರವರೆಗೆ.. ಕೊರೊನಾ ಸೃಷ್ಟಿಸಿದೆ ಮಾನಸಿಕ ತಲ್ಲಣ..!

ಕೊರೊನಾ ವೈರಸ್ ಸೋಂಕು ತಗುಲಿದರೆ ಒಂಟಿಯಾಗಿ ಸಾಯುವ ಭಯ, ಅದಾಗಲೇ ಉದ್ಯೋಗ ಕಳೆದುಕೊಂಡಿರುವ ದೊಡ್ಡ ಮಟ್ಟದ ಜನ ಸಮೂಹ, ಮಕ್ಕಳು ಹಾಗೂ ಯುವ ಸಮೂಹದ ವಿಚಿತ್ರ ವರ್ತನೆ, ಭವಿಷ್ಯದ ಬಗೆಗಿನ ಅಸ್ಥಿರತೆ.. ಹೀಗೆ ಹಲವಾರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಬೆಂಗಳೂರಿನ ಬಹಳಷ್ಟು ಮಂದಿ. ಇದೆಲ್ಲದಕ್ಕೂ ನೇರ ಕಾರಣ, ಕೊರೊನಾ ವೈರಸ್ ಸೋಂಕಿನ ಹೆಚ್ಚಳ..!ಈ ಎಲ್ಲಾ ತಲ್ಲಣಗಳನ್ನು ಬಿಚ್ಚಿಡುತ್ತಾರೆ, ಸ್ವಸ್ಥಿ. ಇವರು ಬೆಂಗಳೂರಿನಲ್ಲಿ ಉಚಿತ ಟೆಲಿ ಕೌನ್ಸೆಲಿಂಗ್‌ ಕೇಂದ್ರವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಮನೋಶಾಸ್ತ್ರಜ್ಞರ ಸಂಘಟನೆ ಹಾಗೂ ಬೆಂಗಳೂರು ಮನಃಶಾಸ್ತ್ರ ವೇದಿಕೆ ರಚಿಸಿರುವ ಉಚಿತ ಟೆಲಿ ಕೌನ್ಸೆಲಿಂಗ್ ಕೇಂದ್ರದಲ್ಲಿ ಸ್ವಸ್ಥಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಗಮನಕ್ಕೆ ಬಂದಂತೆ, ರಾಜ್ಯಾದ್ಯಂತ ಮಾನಸಿಕ ಸಮಸ್ಯೆಗಳಿಗೆ, ಒತ್ತಡಕ್ಕೆ ಸಿಲುಕುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ದೂರವಾಣಿ ಕರೆಗಳೂ ಹೆಚ್ಚಾಗುತ್ತಿವೆ.ಆತಂಕ, ಒತ್ತಡ, ಖಿನ್ನತೆ, ಕುಟುಂಬದಿಂದ ದೂರ ಉಳಿದಿರುವಿಕೆ, ಪಾಪಪ್ರಜ್ಞೆ, ಅನಿಶ್ಚಿತತೆ, ಆರೋಗ್ಯದ ಭಯ.. ಹೀಗೆ ಹಲವು ಸಮಸ್ಯೆಗಳ ಕುರಿತಾಗಿ ಕರೆ ಮಾಡಿ ಸಂಕಷ್ಟ ತೋಡಿಕೊಳ್ಳುವವರ ಪ್ರಮಾಣ ಹೆಚ್ಚುತ್ತಿದೆ ಎಂದು ಮಾಹಿತಿ ನೀಡುತ್ತಾರೆ, ಟೆಲಿ ಕೌನ್ಸೆಲಿಂಗ್ ಕೇಂದ್ರದ ಕಾರ್ಯದರ್ಶಿ ಮನಿಕಾ ಘೋಷ್.

ಕೊರೊನಾ ವೈರಸ್ ಹಾವಳಿ ಈಗಾಗಲೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆರೋಗ್ಯ ಸಮಸ್ಯೆಗಳ ದೊಡ್ಡದೊಂದು ಅಲೆಯನ್ನೇ ಸೃಷ್ಟಿಸಿದೆ. ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳು ತಮ್ಮ ಪ್ರಜೆಗಳಲ್ಲಿ ಉಂಟಾಗಿರುವ ಈ ಮಾನಸಿಕ ಅಸ್ಥಿರತೆ ನಿವಾರಿಸಲು ಹರಸಾಹಸ ಪಡುತ್ತಿವೆ. ಇದೀಗ ಈ ಸಮಸ್ಯೆ ಭಾರತವನ್ನೂ ಕಾಡತೊಡಗಿದೆ. ಜನರಲ್ಲಿನ ಮಾನಸಿಕ ಅಸ್ಥಿರತೆಯ ಬಗ್ಗೆ ಸೂಕ್ತ ಸಮಯದಲ್ಲಿ ಸ್ಪಂದಿಸಿ ಅವರ ನೆರವಿಗೆ ನಿಲ್ಲದಿದ್ದರೆ ಮುಂದಿನ ದಿನಗಳಲ್ಲ ಪರಿಸ್ಥಿತಿ ಬಿಗಡಾಯಿಸುತ್ತದೆ. ಜನರಿಗೆ ಸದ್ಯದ ಮಟ್ಟಿಗೆ ಮಾನಸಿಕ ಆಪ್ತ ಸಮಾಲೋಚನೆ ಅಗತ್ಯವಿದೆ ಎನ್ನುತ್ತಾರೆ, ಮನಿಕಾ ಘೋಷ್.

ಇನ್ನು ಸ್ವಸ್ಥಿ ಅವರಿಗೆ ಕರ್ನಾಟಕದಾದ್ಯಂತ ದಿನಕ್ಕೆ 15 ರಿಂದ 20 ಕರೆಗಳು ಬರುತ್ತಿವೆ. ಇದು ಜನರನ್ನು ಕಾಡುತ್ತಿರುವ ಮಾನಸಿಕ ತುಮುಲಗಳ ತೀವ್ರತೆಯನ್ನು ಬಿಚ್ಚಿಡುತ್ತದೆ.

ಬಹಳಷ್ಟು ಮಂದಿ ತಾವು ಮನೆಯಿಂದ ಕೆಲಸ ಮಾಡುತ್ತಿದ್ದು, ಈ ಪರಿಸ್ಥಿತಿಗೆ ಹೊಂದಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಿದ್ಧಾರೆ. ಕೆಲವರು ಮಕ್ಕಳನ್ನು ಸಂಭಾಳಿಸುವ ಜವಾಬ್ದಾರಿಯನ್ನೂ ಹೊತ್ತಿರುವ ಕಾರಣ, ಉದ್ಯೋಗ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಶಾಲೆಗೆ ಹೋಗದ ಕಾರಣ ತನ್ನ ಇಬ್ಬರು ಮಕ್ಕಳನ್ನು ಸಂಭಾಳಿಸೋದೇ ಕಷ್ಟವಾಗುತ್ತಿದೆ ಎನ್ನುತ್ತಾರೆ ಗೃಹಿಣಿ. 9 ಹಾಗೂ 7 ವರ್ಷದ ಇಬ್ಬರು ಮಕ್ಕಳು ಪದೇ ಪದೇ ಹಲವು ಪ್ರಶ್ನೆಗಳನ್ನು ಕೇಳಿ ಗೃಹಿಣಿಗೆ ಕಿರಿಕಿರಿ ಮಾಡುತ್ತಿದ್ದಾರಂತೆ. ಮಕ್ಕಳು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಅದರ ಜೊತೆಯಲ್ಲೇ ಟಿವಿಯಿಂದ ದೂರ ಉಳಿಯಬೇಕು ಅನ್ನೋದು ಪೋಷಕರ ನಿಲುವು.

ಮತ್ತೊಬ್ಬ ಗೃಹಿಣಿ ಟೆಲಿ ಕೌನ್ಸೆಲಿಂಗ್ ಕೇಂದ್ರಕ್ಕೆ ಕರೆ ಮಾಡಿ ತನ್ನ 17 ವರ್ಷದ ಮಗಳನ್ನು ಸಂಭಾಳಿಸೋದೇ ಕಷ್ಟವಾಗಿದೆ, ಆಕೆ ಎಲ್ಲರ ಮೇಲೂ ಕೂಗಾಡುತ್ತಿದ್ಧಾಳೆ, ಅಳುತ್ತಾಳೆ, ಕಾರಣವೇ ಇಲ್ಲದೆ ಸಿಡುಕುತ್ತಾಳೆ ಎಂದು ಸಂಕಷ್ಟ ಬಿಚ್ಚಿಡುತ್ತಾರೆ.

ಹಿರಿಯ ನಾಗರಿಕರ ಸಂಕಷ್ಟವಂತೂ ಹೇಳತೀರದು. ಮಕ್ಕಳು ಹಾಗೂ ಮೊಮ್ಮಕ್ಕಳು ಹೊರ ರಾಜ್ಯಗಳಲ್ಲಿ, ಬೇರೆ ದೇಶಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ, ತಾವು ಒಂಟಿಯಾಗಿ ಸತ್ತು ಹೋಗುತ್ತೇವಾ ಅನ್ನೋ ಭಯ ಅವರನ್ನು ಕಾಡುತ್ತಿದೆ. ನಿವೃತ್ತ ಪ್ರೊಫೆಸರ್‌ ಒಬ್ಬರು ಕರೆ ಮಾಡಿ ತಮ್ಮ ಮಗ ಕುಟುಂಬ ಸಮೇತ ಅಮೆರಿಕದಲ್ಲಿದ್ದು, ಅವರು ಬರಲು ಸಾಧ್ಯವಿಲ್ಲವೇ ಎಂದು ಕೇಳುತ್ತಾರೆ. ಒಂದು ವೇಳೆ ನನಗೇನಾದ್ರೂ ಆದ್ರೆ ಆತ ಬರೋದಕ್ಕೆ ಸಾಧ್ಯವಿಲ್ಲ ಅಲ್ಲವೇ ಎಂದು ಪ್ರಶ್ನಿಸುತ್ತಾರೆ.

ಇವೆಲ್ಲವೂ ಖಿನ್ನತೆಯ ಆರಂಭಿಕ ಲಕ್ಷಣ ಎಂದು ವಿವರಿಸುತ್ತಾರೆ ಮನಿಕಾ ಘೋಷ್. ವಿಚಿತ್ರ ಸನ್ನಿವೇಶವೊಂದಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಸನ್ನಿವೇಶದಲ್ಲಿ ಈ ರೀತಿಯ ಖಿನ್ನತೆ ಆವರಿಸುತ್ತದೆ. ಹೀಗಾಗಿ, ಅವರೆಲ್ಲರಿಗೂ ಕೌನ್ಸೆಲಿಂಗ್‌ನ ಅಗತ್ಯತೆ ಇದೆ. ಈ ಮೂಲಕ ಅವರು ಸುಧಾರಿಸಬಹುದು ಎಂದು ಮಾಹಿತಿ ನೀಡುತ್ತಾರೆ.

ಸ್ವಸ್ಥಿ ಅವರಂತೂ ಮುನ್ನಲೆ ಕಾರ್ಯಕರ್ತರಾಗಿ ದೂರವಾಣಿ ಕರೆಗಳನ್ನು ಮೇಲಿಂದ ಮೇಲೆ ಸ್ವೀಕರಿಸುತ್ತಿದ್ದಾರೆ. ಕೊರೊನಾ ವಾರಿಯರ್‌ಗಳು, ಕಾರ್ಮಿಕರು, ದಿನಗೂಲಿ ನೌಕರರು, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ವಯೋವೃದ್ಧರೂ ಸೇರಿದಂತೆ ಹಲವರು ಕೌನ್ಸೆಲಿಂಗ್‌ಗಾಗಿ ಕರೆ ಮಾಡುತ್ತಿರುತ್ತಾರೆ.

ಒಂದು ವೇಳೆ ನಿಮಗೇನಾದ್ರೂ ಕೌನ್ಸೆಲಿಂಗ್‌ ಬೇಕು ಎಂಬ ಭಾವನೆ ಇದ್ದರೆ, ತಮ್ಮ ನೆರೆ ಹೊರೆಯವರಿಗೆ ಕೌನ್ಸೆಲಿಂಗ್ ಅಗತ್ಯವಿದ್ದರೆ 080 47186960 ಸಂಖ್ಯೆಗೆ ಕರೆ ಮಾಡಬಹುದು. ಇದು ಉಚಿತ ಕರೆ ನಂಬರ್‌ ಆಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆವರೆಗೂ ಯಾವಾಗ ಬೇಕಾದರೂ ಕರೆ ಮಾಡಿ ಮಾನಸಿಕ ಆಪ್ತ ಸಮಾಲೋಚನೆ ಪಡೆಯಬಹುದಾಗಿದೆ.



from India & World News in Kannada | VK Polls https://ift.tt/3etmjcl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...