ಹೊಸದಿಲ್ಲಿ: ಕಳೆದ 2011ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡಕ್ಕೆ ಸೇರ್ಪಡೆಯಾದ ಬಳಿಕ ಫ್ರಾಂಚೈಸಿ ಮಾಲೀಕ ಶಾರೂಕ್ ಖಾನ್ ಹೇಳಿದ್ದ ವಿಷಯವನ್ನು ಇದೀಗ ಮಾಜಿ ನಾಯಕ ಗೌತಮ್ ಗಂಭೀರ್ ಬಹಿರಂಗ ಪಡಿಸಿದ್ದಾರೆ. ಆರಂಭದಲ್ಲಿ ಕೆಕೆಆರ್ ತಂಡದ ಪ್ರದರ್ಶನ ಅಷ್ಟೊಂದು ಹೇಳಿಕೊಳ್ಳುವ ರೀತಿ ಇರಲಿಲ್ಲ. ಗೌತಮ್ ಗಂಭೀರ್ ನಾಯಕತ್ವ ವಹಿಸಿಕೊಂಡ ಬಳಿಕ ತಂಡ ಅತ್ಯುತ್ತಮ ದಿನಗಳನ್ನು ಕಂಡಿತು. 2008 ರಿಂದಲೇ ಕೆಕೆಆರ್ ಐಪಿಎಲ್ ಪಯಾಣ ಆರಂಭಿಸಿತ್ತು. ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಲ್ಲಿಯೇ ಬ್ರೆಂಡನ್ ಮೆಕ್ಕಲಮ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 158 ರನ್ ಚಚ್ಚಿದ್ದರು. ಅಂದು ಸೌರವ್ ಗಂಗೂಲಿ ನಾಯಕತ್ವದಲ್ಲಿ ಕೆಕೆಆರ್ 140 ರನ್ಗಳಿಂದ ಗೆಲುವು ಸಾಧಿಸಿತ್ತು. ಸೌರವ್ ಗಂಗೂಲಿ ನಾಯಕತ್ವದ ಹೊರತಾಗಿಯೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಮೂರು ವರ್ಷಗಳಲ್ಲಿ ಸಾಧಾರಣ ಪ್ರದರ್ಶನಕ್ಕೆ ಸೀಮಿತವಾಗಿ ಬಿಟ್ಟಿತ್ತು. ತಂಡದ ಕಳಪೆ ಪ್ರದರ್ಶನದಿಂದ ಎಚ್ಚೆತ್ತುಕೊಂಡ ಕೆಕೆಆರ್ ತಂಡದ ಮ್ಯಾನೇಜ್ಮೆಂಟ್ ಅವರಿಗೆ ನಾಯಕತ್ವ ನೀಡುವ ಮೂಲಕ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿತು. 2011ರಲ್ಲಿ ಗಂಭೀರ್ ನಾಯಕತ್ವ ವಹಿಸಿಕೊಳ್ಳುವ ವೇಳೆ ತಂಡದ ಮಾಲೀಕ , ಇದು ನಿಮ್ಮ ತಂಡ, ನಿಮಗೆ ಹೇಗೆ ಅಗತ್ಯವಿದೆಯೂ ಹಾಗೆ ತಂಡವನ್ನು ರೂಪಿಸಿಕೊಳ್ಳಿ, ಇದರಲ್ಲಿ ನಾನು ತಲೆ ಹಾಕುವುದಿಲ್ಲ ಎಂದು ಹೇಳಿದ್ದರು. 2011ರಲ್ಲಿ ಮೊದಲ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ಗೆ ತಲುಪಿತ್ತು ಹಾಗೂ 2012 ಚೊಚ್ಚಲ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. 2018ರಲ್ಲಿ ಗೌತಮ್ ಗಂಭೀರ್ ಕೆಕೆಆರ್ ತಂಡದಿಂದ ಹೊರ ನಡೆದಿದ್ದರು. ತಂಡದ ನಾಯಕತ್ವ ವಹಿಸಿಕೊಳ್ಳುವ ವೇಳೆ ಮಾಲೀಕ ಶಾರೂಖ್ ಖಾನ್ ಹೇಳಿದ ಮಾತನ್ನು ಸ್ಮರಿಸಿದ ಗಂಭೀರ್,"ಇದು ನಿಮ್ಮ ತಂಡ, ತೆಗೆದುಕೊಳ್ಳಿ ಅಥವಾ ಹೊಡೆದು ಹಾಕಿ, ಆದರೆ ನಾನು ಇದರಲ್ಲಿ ತಲೆ ಹಾಕುವುದಿಲ್ಲ... ಎಂದು ಹೇಳಿದ್ದರು. ನಾನು ಅಂದೇ ಅವರಿಗೆ ಒಂದು ವಿಷಯದಲ್ಲಿ ಭರವಸೆ ನೀಡಿದ್ದೆ, ತಂಡಕ್ಕೆ ಎಲ್ಲಿ ಒಳ್ಳೆಯದಾಗುತ್ತದೊ ಗೊತ್ತಿಲ್ಲ, ಆದರೆ, ನಾನು ತಂಡ ಬಿಡುವ ಹೊತ್ತಿಗೆ ಕೆಕೆಆರ್ ಉತ್ತಮ ಸ್ಥಾನದಲ್ಲಿ ಇರುತ್ತದೆ. ಇದು 3 ವರ್ಷವಾಗಬಹುದು ಅಥವಾ 6 ವರ್ಷವಾಗಬಹುದು," ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ ಕ್ರಿಕೆಟ್ ಕನೆಕ್ಟೆಡ್ಗೆ ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dvgH06