ಬೆಂಗಳೂರು: ಫೆಬ್ರವರಿ 6ರ ಗುರುವಾರ ಖಚಿತ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಪ್ರಕಟಿಸುವುದರೊಂದಿಗೆ, ನೂತನ ಸಚಿವರ ಪ್ರಮಾಣವಚನಕ್ಕೆ ಅಧಿಕೃತವಾಗಿ ಮುಹೂರ್ತ ನಿಗದಿಯಾದಂತಾಗಿದೆ. ಹಾಗೆಯೇ 10 ಪ್ಲಸ್ 3 ಫಾರ್ಮುಲಾ ಅನುಸಾರವೇ ಮಂತ್ರಿಮಂಡಲ ವಿಸ್ತರಣೆಯಾಗಲಿದೆ. ಈ ನಡುವೆ, ಸಚಿವ ಹುದ್ದೆಯ ಅವಕಾಶದಿಂದ ವಂಚಿತರಾಗಿರುವ ಎಂಟಿಬಿ ನಾಗರಾಜ್ ಮತ್ತು ಮಹೇಶ ಕುಮಠಳ್ಳಿ ಅವರನ್ನು ಸಮಾಧಾನಪಡಿಸುವಲ್ಲಿ ಬಿಎಸ್ವೈ ಯಶಸ್ವಿಯಾಗಿದ್ದಾರೆ. ಎಚ್ ವಿಶ್ವನಾಥ್ ಒಬ್ಬರು ಮಾತ್ರ ಕುದಿಯುತ್ತಲೇ ಇದ್ದಾರೆ. ಇನ್ನು, ಮೂಲ ಬಿಜೆಪಿಗರ ಮುನಿಸನ್ನು ಸಿಎಂ ಹೇಗೆ ನಿಭಾಯಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಅರ್ಹರಲ್ಲಿ 10 ಶಾಸಕರಿಗಷ್ಟೇ ಈ ಬಾರಿ ಸಚಿವ ಸ್ಥಾನ ಸಿಗಲಿದೆ. ಉಳಿದ 3 ಸ್ಥಾನಗಳು ಮೂಲ ಬಿಜೆಪಿಗರ ಪಾಲಾಗಲಿದೆ. ಅರ್ಹರ ಕೋಟಾದ ಮಹೇಶ್ ಕುಮಠಳ್ಳಿ ಹಾಗೂ ಶ್ರೀಮಂತ ಭಾಳಾಸಾಹೇಬ್ ಪಾಟೀಲ್ ಪೈಕಿ ಯಾರು ಸಂಪುಟ ಸೇರುತ್ತಾರೆಂಬ ಕುತೂಹಲಕ್ಕೂ ತೆರೆಬಿದ್ದಿದೆ. ಶ್ರೀಮಂತ ಪಾಟೀಲ್ಗೆ ಜಾಕ್ಪಾಟ್ ಹೊಡೆದಿದ್ದು, ಕುಮಠಳ್ಳಿಗೆ ನಿರಾಸೆಯಾಗಿದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ವಿವರ ತಿಳಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿ ವೇಳೆ ಸಿಎಂ ಬಿಎಸ್ವೈ ಅವರು ಸ್ವಯಂಪ್ರೇರಿತರಾಗಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿರುವುದನ್ನು ಘೋಷಿಸಿದರು. ''ಗುರುವಾರ ಬೆಳಗ್ಗೆ 10.30ಕ್ಕೆ ಸಂಪುಟ ವಿಸ್ತರಣೆಯಾಗಲಿದೆ. 10 ಪ್ಲಸ್ 3 ಸೂತ್ರದಂತೆ ಈ ಪ್ರಕ್ರಿಯೆ ಕೈಗೊಳ್ಳಲು ಯೋಚಿಸಿದ್ದೇನೆ. ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ತಕ್ಷಣವೇ ಖಾತೆ ಹಂಚಿಕೆಯೂ ಆಗಲಿದೆ,'' ಎಂದು ಸಿಎಂ ಸ್ಪಷ್ಟವಾಗಿ ಹೇಳಿದರು. ಈ ಮಧ್ಯೆ ರಮೇಶ್ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲೂ ಸಿಎಂ ಯಶಸ್ವಿಯಾಗಿದ್ದಾರೆ. ಕೆಲ ದಿನದಿಂದ ಅಂತರ ಕಾಯ್ದುಕೊಂಡಿದ್ದ ಜಾರಕಿಹೊಳಿ ಅವರೂ ಸಿಎಂರನ್ನು ಭೇಟಿಯಾದರು. ಈ ವೇಳೆ ಸನ್ನಿವೇಶದ ಸೂಕ್ಷ್ಮತೆ ಬಗ್ಗೆ ವಿವರಿಸಿದ ಸಿಎಂ ''ಹೈಕಮಾಂಡ್ ನಿರ್ಣಯದಂತೆ ಅರ್ಹರಲ್ಲಿ 10 ಮಂದಿಗೆ ಸಚಿವ ಸ್ಥಾನ ನೀಡಲು ಸಾಧ್ಯ. ಹಾಗಾಗಿ ಈ ಬಾರಿ ಕುಮಠಳ್ಳಿ ಅವರಿಗೆ ಮಂತ್ರಿ ಮಾಡಲು ಆಗುವುದಿಲ್ಲ. ಮುಂದಿನ ಹಂತದಲ್ಲಿ ಅವರಿಗೆ ನ್ಯಾಯ ದೊರಕಿಸಲಾಗುವುದು,'' ಎಂಬ ಭರವಸೆ ನೀಡಿದರು. ಈ ಪ್ರಸ್ತಾಪಕ್ಕೆ ಒಪ್ಪಿಕೊಂಡ ಜಾರಕಿಹೊಳಿ ತಮಗೆ ಜಲಸಂಪನ್ಮೂಲ ಖಾತೆ, ಬೆಳಗಾವಿ ಉಸ್ತುವಾರಿ ಕೇಳಿದರು. ಅದನ್ನೂ ಈಡೇರಿಸುವ ಭರವಸೆಯನ್ನು ಸಿಎಂ ಕೊಟ್ಟರು ಎನ್ನಲಾಗಿದೆ. ಗುರುವಾರ ಬೆಳಗ್ಗೆ 10.30ಕ್ಕೆ ಸಂಪುಟ ವಿಸ್ತರಣೆಯಾಗಲಿದೆ. 10 ಪ್ಲಸ್ 3 ಸೂತ್ರದಡಿ ಈ ಪ್ರಕ್ರಿಯೆ ಕೈಗೊಳ್ಳಲು ಯೋಚಿಸಲಾಗಿದೆ. - ಬಿ.ಎಸ್.ಯಡಿಯೂರಪ್ಪ, ಸಿಎಂ ನನಗೆ ಮಂತ್ರಿ ಸ್ಥಾನ ಕೊಡದಿದ್ದರೂ ಪರವಾಗಿಲ್ಲ, ವಿಶ್ವನಾಥ್ ಅವರನ್ನು ಮಂತ್ರಿ ಮಾಡಿ. ನಾನು ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವ ಕೆಲಸ ಕೊಟ್ಟರೂ ಮಾಡುತ್ತೇನೆ. ನಾವೆಲ್ಲ ಬಿಜೆಪಿಯನ್ನು ಬಲಿಷ್ಠಗೊಳಿಸುತ್ತೇವೆ. - ಮಹೇಶ್ ಕುಮಠಳ್ಳಿ ಪಕ್ಷಕ್ಕೆ ಬಂದ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದರು. ಅವರ ಮಾತಿನ ಮೇಲೆ ನಂಬಿಕೆ ಇದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಂಪುಟ ಸೇರ್ಪಡೆಯಾಗದೇ ಇರುವುದಕ್ಕೆ ಯಾವುದೇ ಬೇಸರವಿಲ್ಲ. - ಎಂ.ಟಿ.ಬಿ.ನಾಗರಾಜ್ ಸಂಭವನೀಯ ಸಚಿವರು
- ಉಮೇಶ್ ಕತ್ತಿ
- ಅರವಿಂದ ಲಿಂಬಾವಳಿ
- ಸಿ.ಪಿ.ಯೋಗೀಶ್ವರ
- ರಮೇಶ್ ಜಾರಕಿಹೊಳಿ
- ಬಿ.ಸಿ.ಪಾಟೀಲ್
- ಶಿವರಾಂ ಹೆಬ್ಬಾರ್
- ಆನಂದ್ ಸಿಂಗ್
- ಎಸ್.ಟಿ.ಸೋಮಶೇಖರ್
- ಗೋಪಾಲಯ್ಯ
- ಬೈರತಿ ಬಸವರಾಜು
- ಡಾ.ಕೆ.ಸುಧಾಕರ್
- ಕೆ.ಆರ್.ಪೇಟೆ ನಾರಾಯಣಗೌಡ
- ಶ್ರೀಮಂತ ಪಾಟೀಲ್
from India & World News in Kannada | VK Polls https://ift.tt/2GPSWSA