ಭುವನೇಶ್ವರ: ಜೈಲಿನೊಳಗಿರುವ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವುದಕ್ಕಾಗಿ ನ್ಯಾಯಧೀಶರ ಸಹಿಯನ್ನು ನಕಲು ಮಾಡಿದ ಆರೋಪದಡಿ ಒಡಿಶಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಸೂರ್ಯ ನಾರಾಯಣ ಬೆಹೆರಾ ಬಂಧಿತ ಅಧಿಕಾರಿ. ಇವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬುಗುಡಾ ನ್ಯಾಯಾಲಯದಲ್ಲಿಇವರನ್ನು ಸೇವೆಗೆ ನಿಯೋಜಿಸಲಾಗಿತ್ತು. ಇವರು ಕೊಲೆ ಯತ್ನ ಆರೋಪದ ಮೇಲೆ ಬಂಧಿತನಾಗಿರುವ ತಮ್ಮ ಸೋದರ ಸಂಬಂಧಿ ಬಬುಲಾ ಬೆಹೆರಾ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲು ನ್ಯಾಯಾಧೀಶರ ಸಹಿಯನ್ನು ನಕಲು ಮಾಡಿದ್ದರು. ಮೊದಲನೇ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಪ್ರೇಟ್ ಸೋನಾಲಿ ಅಪರಾಜಿತಾ ಅವರ ಸಹಿಯನ್ನು ನಕಲು ಮಾಡಿ, ಆರೋಪಿಯನ್ನು ಬಿಡುಗಡೆ ಮಾಡುವಂತೆ ಸೂಚಿಸಿದ ಆದೇಶದ ಪ್ರತಿಯನ್ನು ಜೈಲಿನ ಅಧೀಕ್ಷಕರಿಗೆ ಸಲ್ಲಿಸಿದ್ದಾರೆ. ಬಂಧಿತ ಆರೋಪಿಯು ತಮ್ಮ ಮಗಳ ಮದುವೆ ಉದ್ದೇಶಕ್ಕಾಗಿ ಜಾಮೀನು ನೀಡಬೇಕೆಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಆದರೆ, ನ್ಯಾಯಾಧೀಶರ ರಜೆ ಹಿನ್ನೆಲೆಯಲ್ಲಿ ಆರೋಪಿಯ ಬಿಡುಗಡೆ ಆದೇಶಕ್ಕೆ ಸಹಿ ಹಾಕಲು ಸಾಧ್ಯವಾಗಿರಲಿಲ್ಲ. ಮತ್ತೊಬ್ಬ ನ್ಯಾಯಾಧೀಶರನ್ನು ಪರ್ಯಾಯವಾಗಿ ನಿಯೋಜಿಸಲಾಗಿತ್ತು. ಆದರೆ, ಪೊಲೀಸ್ ಅಧಿಕಾರಿಯು ಜಾಮೀನು ಆದೇಶದ ದಾಖಲೆಯನ್ನು ನಿಯೋಜಿತ ನ್ಯಾಯಾಧೀಶರಿಗೆ ಸಲ್ಲಿಸುವುದು ಬಿಟ್ಟು, ತಾವೇ ರಜೆ ಇದ್ದ ನ್ಯಾಯಾಧೀಶರ ಸಹಿಯನ್ನು ಹಾಕಿ, ಜೈಲು ಅಧಿಕಾರಿಗಳಿಗೆ ಸಲ್ಲಿಸಿದ್ದರು. ಬಂಧಿತ ಅಧಿಕಾರಿ ವಿರುದ್ಧ ಐಪಿಸಿ ಸೆಕ್ಷನ್ 146(ಕೋರ್ಟ್ ದಾಖಲೆಗಳ ನಕಲು) ಅಡಿ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/3bzkzho