
ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯವಾಗಿದ್ದ 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸದ ಬಗ್ಗೆ ಆಸ್ಟ್ರೇಲಿಯಾ ಸೀಮಿತ ಓವರ್ಗಳ ತಂಡದ ನಾಯಕ ನೀಡಿದ್ದ ಹೇಳಿಕೆಯನ್ನು ಮಾಜಿ ನಾಯಕ ಖಂಡಿಸಿದ್ದಾರೆ. ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಸ್ಟ್ರೇಲಿಯಾ ಸೀಮಿತ ಓವರ್ಗಳ ನಾಯಕ ಆರೋನ್ ಫಿಂಚ್ ವೈಫಲ್ಯ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 2021ರ ಐಪಿಎಲ್ ಆಟಗಾರರ ಹರಾಜಿಗೆ ಬಿಡುಗಡೆ ಮಾಡಿತ್ತು. ಆದರೆ, ಹರಾಜಿನಲ್ಲಿ ಯಾವುದೇ ಒಂದೂ ಫ್ರಾಂಚೈಸಿ ಕೂಡ ಆತನನ್ನು ಖರೀದಿಸಿರಲಿಲ್ಲ. ಹದಿಮೂರನೇ ಆವೃತ್ತಿಯ ಐಪಿಎಲ್ನಲ್ಲಿ 12 ಪಂದ್ಯಗಳಾಡಿದ್ದ ಆರೋನ್ ಫಿಂಚ್, 22.33ರ ಸರಾಸರಿಯಲ್ಲಿ 268 ರನ್ಗಳನ್ನು ಮಾತ್ರ ಕಲೆಹಾಕಿದ್ದರು. ಇದರಲ್ಲಿ ಅವರು ಸಿಡಿಸಿದ್ದು ಒಂದೇ ಒಂದು ಅರ್ಧಶತಕ ಮಾತ್ರ. ಫಿಂಚ್ ತಂಡಕ್ಕೆ ಅತ್ಯುತ್ತಮ ಆರಂಭ ನೀಡಬಹುದು ಎಂದು ಭಾವಿಸಿತ್ತು, ಆದರೆ, ಫ್ರಾಂಚೈಸಿಯ ಭರವಸೆಯನ್ನು ಆಸೀಸ್ ಆಟಗಾರ ಹುಸಿ ಮಾಡಿದ್ದರು. ಐಪಿಎಲ್ ಅಲ್ಲದೆ ಇತ್ತೀಚೆಗೆ ಮುಕ್ತಾಯವಾಗಿದ್ದ ಬಿಗ್ಬ್ಯಾಷ್ ಲೀಗ್ನಲ್ಲಿಯೂ ಫಿಂಚ್ ವಿಫಲರಾಗಿದ್ದರು. ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡಿದ್ದ 13 ಇನಿಂಗ್ಸ್ಗಳಿಂದ ಫಿಂಚ್ ಗಳಿಸಿದ್ದು, ಕೇವಲ 179 ರನ್ಗಳು ಮಾತ್ರ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ನಾಯಕನಿಗೆ ಹರಾಜಿನಲ್ಲಿ ಫ್ರಾಂಚೈಸಿಗಳು ನಿರಾಸೆ ಮೂಡಿಸಿದ್ದವು. ನ್ಯೂಜಿಲೆಂಡ್ ಸರಣಿ ನಿಮಿತ್ತ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಆರೋನ್ ಫಿಂಚ್, ಯಾವುದಾದರೂ ಫ್ರಾಂಚೈಸಿ ನನ್ನನ್ನು ಖರೀದಿಸಬಹುದು ಎಂದು ಭಾವಿಸಿದ್ದೆ, ಆದರೆ, ಯಾರೂ ನನ್ನನ್ನು ಆಯ್ಕೆ ಮಾಡಿಲ್ಲ ಎಂದರು. "ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ಭುತವಾದ ಸ್ಪರ್ಧೆ. ಈ ಟೂರ್ನಿಯಲ್ಲಿ ಮತ್ತೊಮ್ಮೆ ಆಡುತ್ತೇನೆಂದು ಅಂದುಕೊಂಡಿದ್ದೆ. ಆದರೆ, ಅನಿರೀಕ್ಷಿತವಾಗಿ ಯಾವುದೇ ಫ್ರಾಂಚೈಸಿ ನನ್ನನ್ನು ಖರೀದಿಸಿಲ್ಲ," ಎಂದು ಆರೋನ್ ಫಿಂಚ್ ಬೇಸರ ವ್ಯಕ್ತಪಡಿಸಿದ್ದರು. "ತಾಂತ್ರಿಕ ಅಂಶಗಳ ಮೇಲೆ ಇದೀಗ ನಾನು ಕೆಲಸ ಮಾಡುತ್ತಿದ್ದೇನೆ ಹಾಗೂ ಫ್ರಂಟ್ ಫುಟ್ ಮೇಲೆ ಸ್ವಲ್ಪ ಭಾರ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಬ್ಯಾಟಿಂಗ್ ವೇಳೆ ಫುಟ್ವರ್ಕ್ನಲ್ಲಿ ಸ್ವಲ್ಪ ಎಡವುತ್ತಿದ್ದೇನೆ. ಪಾದಗಳನ್ನು ಮುಂದಕ್ಕೆ ಚಲಿಸಲು ಹೆಣಗಾಡುತ್ತಿದ್ದೇನೆ. ಇದನ್ನು ಸರಿಪಡಿಸಿಕೊಳ್ಳಲು ಹೆಚ್ಚಿನ ತರಬೇತಿ ಪಡೆಯುತ್ತಿದ್ದೇನೆ," ಎಂದು ಹೇಳಿದ್ದರು. 2021ರ ಐಪಿಎಲ್ಗೆ ಯಾವುದೇ ಫ್ರಾಂಚೈಸಿಗೆ ಆಯ್ಕೆಯಾಗದ ಬಗ್ಗೆ ಫಿಂಚ್ ನೀಡಿದ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್, "ಫಿಂಚ್ ಆಸ್ಟ್ರೇಲಿಯಾ ಟಿ20 ತಂಡದ ನಾಯಕ, ಹೀಗಿರುವಾಗ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ ಎಂದರೆ ನಿಜಕ್ಕೂ ಬೇಸರದ ಸಂಗತಿ. ಯಾವುದೇ ಟೂರ್ನಿಯಾದರೂ ಫಿಂಚ್ ನಿರೀಕ್ಷಿಯಂತೆ ಎಲ್ಲದಕ್ಕೂ ಆಯ್ಕೆಯಾಗಬೇಕು," ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37Im1gy