ಬೆಂಗಳೂರು: ಬಾಬ್ರಿ ಮಸೀದಿ ಕುರಿತು ಸುಪ್ರೀಂ ತೀರ್ಪು, ಸಿಎಎ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ತ್ರಿವಳಿ ತಲಾಕ್ ರದ್ದು ವಿಚಾರವಾಗಿ ಕೇಂದ್ರ ಸರಕಾರದ ವಿರುದ್ಧ ಹಿಂದೂ ಸಮುದಾಯವನ್ನು ಕೆರಳಿಸಲು ಮತ್ತು ಪಿಎಫ್ಐನ ಮುಖಂಡರು ನಡೆಸಿದ್ದ ಸಂಚಿನ ಫಲ ‘ಡಿ.ಜೆ ಹಳ್ಳಿ ಗಲಭೆ'ಯಾಗಿದೆ. ರಾಷ್ಟ್ರೀಯ ತನಿಖಾ ದಳ () ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. 2020ರ ಆ.11ರಂದು ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಯಲ್ಲಿ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಅವರ ಅಳಿಯ ನವೀನ್ ಮನೆ, ಪೊಲೀಸ್ ಮತ್ತು ಖಾಸಗಿ ವಾಹನಗಳು ಸೇರಿ ಹಲವು ವಾಹನಗಳು, ಮನೆಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರು. ಗಲಭೆ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ನಾಲ್ವರು ಮೃತಪಟ್ಟಿದ್ದರು. ಸಿಎಎ, ಎನ್ಆರ್ಸಿ ವಿಚಾರದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಸರಕಾರದ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು. ದೊಡ್ಡ ಗಲಭೆ ನಡೆಸಿ, ಕೋಮು ಸೌಹಾರ್ದ ಕದಡುವ ಅವಕಾಶಕ್ಕಾಗಿ ಕಾಯುತ್ತಿದ್ದರು. ಹಿಂದೂ ದೇವರುಗಳ ಅವಹೇಳನದ ಮೂಲಕ ಹಿಂದೂ ಸಮುದಾಯದವರನ್ನು ಕೆರಳಿಸಲು ಎಸ್ಡಿಪಿಐ ಸದಸ್ಯರಾದ ಫೈರೋಜ್ ಪಾಷ, ಮುಜಾಮ್ಮಿಲ್ ಪಾಷ ಮತ್ತು ಇನ್ನಿತರರು ಸೇರಿ ಕ್ರಿಮಿನಲ್ ಒಳಸಂಚು ರೂಪಿಸಿದ್ದರು. ಫೇಸ್ಬುಕ್ ಖಾತೆ ಹೊಂದಿದ್ದ ಪೈರೋಜ್ ಪಾಷಾನಿಗೆ ನೂರಾರು ಹಿಂದೂ ಸ್ನೇಹಿತರು ಫಾಲೋವರ್ ಇದ್ದರು. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪೋಸ್ಟ್ಗಳನ್ನು ಹಾಕುತ್ತಿದ್ದ ಫೈರೋಜ್ಗೆ ಎಸ್ಡಿಪಿಐ/ ಸದಸ್ಯರು ಬೆಂಬಲಿಸುತ್ತಿದ್ದರು. ಹಿಂದೂಗಳಿಗೆ ಪವಿತ್ರ ಎನಿಸಿರುವ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಉದ್ದೇಶಪೂರ್ವಕವಾಗಿ ಅವಹೇಳನಕಾರಿ ಪೋಸ್ಟ್ ಮಾಡಲು ಆಯ್ಕೆ ಮಾಡಿಕೊಂಡಿದ್ದರು. ಮತ್ತೊಂದೆಡೆ ಪೋಸ್ಟ್ನಿಂದ ಉಂಟಾಗುವ ಪರಿಸ್ಥಿತಿಯನ್ನು ಬಳಸಿಕೊಂಡು ಗಲಭೆ ಎಬ್ಬಿಸಿ ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಎನ್ಐಎ ತಿಳಿಸಿದೆ.
from India & World News in Kannada | VK Polls https://ift.tt/3kxv1uh