ಬೆಂಗಳೂರು: ಅವರ ವೃತ್ತಿಬದುಕು ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಆದರೂ ಅವರ ಸ್ಫೋಟಕ ಬ್ಯಾಟಿಂಗ್ನಲ್ಲಿ ಕಿಂಚಿತ್ತೂ ಕೊರತೆ ಕಂಡುಬಂದಿಲ್ಲ. ದೈತ್ಯಾಕಾರದ ವೆಸ್ಟ್ ಇಂಡೀಸ್ ದಾಂಡಿಗ ಬ್ಯಾಟ್ ಹಿಡಿದು ಕ್ರೀಸ್ಗೆ ಬಂದರೆ ಎದುರಾಳಿಗಳ ಮನದಲ್ಲಿ ಈಗಲೂ ಢವಢವ ಶುರುವಾಗುತ್ತದೆ. ಅದರಲ್ಲೂ ಟಿ20 ಕ್ರಿಕೆಟ್ನಲ್ಲಿ ಗೇಲ್ ತಮ್ಮ ಹೊಡಿಬಡಿ ಆಟದ ಮೂಲಕವೇ ಹೆಚ್ಚು ಜನಪ್ರಿಯ. ಹೀಗಾಗಿ ವಿಶ್ವದಾದ್ಯಂತ ಟಿ20 ಲೀಗ್ಗಳಲ್ಲಿ ಫ್ರಾಂಚೈಸಿಗಳು 'ಸಿಕ್ಸ್ ಮಷೀನ್' ಖ್ಯಾತಿಯ ಆಟಗಾರನನ್ನು ಖರೀದಿಸಲು ನಾಮುಂದು ತಾಮುಂದು ಎಂದು ಮುಗಿಬೀಳುತ್ತವೆ. ಏಕೆಂದರೆ ಏಕಾಂಗಿಯಾಗಿ ಪಂದ್ಯ ಗೆದ್ದುಕೊಡುವ ತಾಕತ್ತು ಗೇಲ್ ಅವರಲ್ಲಿದೆ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಹೀಗಿರುವಾಗ ಗೇಲ್ ಅವರನ್ನು ಕೆಣಕುವ ದುಸ್ಸಾಹಸ ಯಾರಾದರೂ ಮಾಡುತ್ತಾರೆಯೇ, ಹಾಗೇನಾದರು ಬಂಡ ಧೈರ್ಯ ಮಾಡಿದ್ದೇ ಆದರೆ ಆ ಬೌಲರ್ ಗೇಲ್ ಬಿರುಗಾಳಿ ಎದುರಿಸಲೇ ಬೇಕಾಗುತ್ತದೆ. ಇಂಥದ್ದೊಂದು ಘಟನೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದುದ್ದನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನೂತನ ನಾಯಕ ಕೆಎಲ್ ರಾಹುಲ್ ಇದೀಗ ಸ್ಮರಿಸಿದ್ದಾರೆ. 2018ರಲ್ಲಿ ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಇಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾಗಿದ್ದರು. ಆ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವಾಗ ಎದುರಾಳಿ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರ ಬೌಲಿಂಗ್ನಲ್ಲಿ ಚೆಂಡನ್ನು ಬಡಿದಟ್ಟಲು ಗೇಲ್ ಹಾತೊರೆಯುತ್ತಿದ್ದ ಘಟನೆಯನ್ನು ರಾಹುಲ್, ಮಯಾಂಕ್ ಅಗರ್ವಾಲ್ ನಡೆಸಿಕೊಡುವ 'ಓಪನ್ ನೆಟ್ಸ್' ಆನ್ಲೈನ್ ಚಾಟ್ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದ್ದಾರೆ. ಆ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಸೆಟೆದು ನಿಂತಿದ್ದ ಗೇಲ್, ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ಗನ್ನು ಒಳಗೊಂಡ 104 ರನ್ಗಳನ್ನು ಚಚ್ಚಿ ಶತಕ ಸಿಡಿಸಿದ್ದರು ಎಂಬುದು ವಿಶೇಷ. ಪ್ರಮುಖವಾಗಿ ರಶೀದ್ ಎದುರು ಸತತ 4 ಸಿಕ್ಸರ್ ಸಿಡಿಸಿ ಗರ್ಜಿಸಿದ್ದರು. "2018ರ ಐಪಿಎಲ್ ಪಂದ್ಯ ಈಗಲೂ ನೆನಪಿದೆ. ಗೇಲ್ ಕೋಪದಲ್ಲಿದ್ದರು, ರನ್ ಗಳಿಸುವ ಹಸಿವು ಅವರಲ್ಲಿ ಎದ್ದು ಕಾಣುತ್ತಿತ್ತು. ಪಂದ್ಯ ಗೆಲ್ಲಬೇಕೆಂದು ಹಾತೊರೆಯುತ್ತಿದ್ದರು. ಸನ್ರೈಸರ್ಸ್ ವಿರುದ್ಧದ ಪಂದ್ಯವದು. ಆಗ 'ರಶೀದ್ ಖಾನ್ ಬೌಲಿಂಗ್ ಮಾಡಲು ಬಂದರೆ ಅವನ ಕಥೆ ಮುಗಿಸುತ್ತೇನೆ, ಒಬ್ಬ ಸ್ಪಿನ್ನರ್ ನನ್ನೆದುರು ನಿಂತು ಗುರಾಯಿಸುವುದನ್ನು ಸಹಿಸಲಾರೆ. ಗುರಾಯಿಸಿದ್ರೆ, ಮುಗಿಸ್ತೀನಿ' ಎಂದು ಗೇಲ್ ಹೇಳಿದ್ದರು," ಎಂದು ರಾಹುಲ್ ಸ್ಮರಿಸಿದ್ದಾರೆ. "ಒಂದು ರನ್ ಮಾಡಿ ಸ್ಟ್ರೈಕ್ ನೀಡುವಂತೆ ಕೇಳಿದ್ದರು. ರಶೀದ್ ಎದುರು ಆರು ಎಸೆತಗಳನ್ನು ಎದುರಿಸಬೇಕು ಎಂದು ಕೇಳಿದ್ದರು. ಕ್ರೀಸ್ ಗೇಲ್ ಆ ರೀತಿ ವರ್ತಿಸಿದ್ದನ್ನು ನಾನು ಮೊದಲ ಬಾರಿ ನೋಡಿದ್ದು. ಪಕ್ಕಾ ಯೋಜನೆ ಅವರಲ್ಲಿತ್ತು. ಆ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದರು ಎಂದನಿಸುತ್ತದೆ," ಎಂದು ರಾಹುಲ್ ತಮ್ಮ ನೆನಪಿಣಾಳ ಕೆದಕಿದ್ದಾರೆ. ಆ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ 14 ರನ್ಗಳ ಜಯ ದಾಖಲಿಸಿತ್ತು. ಮಯಾಂಕ್ ಅಗರ್ವಾಲ್ ಬಿಸಿಸಿಐ ಸಲುವಾಗಿ ನಡೆಸಿಕೊಟ್ಟ 'ಓಪನ್ ನೆಟ್ಸ್' ಕಾರ್ಯಕ್ರಮದಲ್ಲಿ ರಾಹುಲ್ ಮತ್ತು ಗೇಲ್ ಸಂಭಾಷಣೆಯ ವಿಡಿಯೋ ಇಲ್ಲಿ ವೀಕ್ಷಿಸಬಹುದಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hZCpws