ಬೆಂಗಳೂರು: ನೆರೆಯ ಮತ್ತು ಕೇರಳದಲ್ಲಿ ಕೋವಿಡ್ ಸೋಂಕಿನ 2ನೇ ಅಲೆ ಆರಂಭವಾಗಿದ್ದು, ಕೆಲ ಜಿಲ್ಲೆಗಳಲ್ಲಿ ಲಾಕ್ಡೌನ್ ಹೇರಲಾಗುತ್ತಿದೆ. ಈ ರಾಜ್ಯಗಳಿಂದ ಪಾಠ ಕಲಿತು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ, ನಗರದಲ್ಲಿ ಈ ಹಿಂದಿನ ಪರಿಸ್ಥಿತಿ ಮತ್ತೆ ಮರುಕಳಿಸಲಿದೆ. ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮಹಾರಾಷ್ಟ್ರದ ಪುಣೆ, ಅಮರಾವತಿ, ನಾಗಪುರ ಸೇರಿದಂತೆ 21 ಜಿಲ್ಲೆಗಳಲ್ಲಿ ನಿತ್ಯ 5-6 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ, ಕೆಲವೊಂದು ಜಿಲ್ಲೆಗಳಲ್ಲಿಶನಿವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆವರೆಗೆ ಹಾಗೂ ಇನ್ನೂ ಕೆಲವೆಡೆ ಬೆಳಗ್ಗೆಯಿಂದ ರಾತ್ರಿವರೆಗೆ ಲಾಕ್ಡೌನ್ ಹೇರಲಾಗುತ್ತಿದೆ. ಇನ್ನೊಂದು ಆತಂಕಕಾರಿ ವಿಷಯವೇನೆಂದರೆ ಮಹಾರಾಷ್ಟ್ರದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರೂಪಾಂತರ ಸೋಂಕು ಕಾಣಿಸಿಕೊಂಡಿದ್ದು, ಇದು ಬ್ರಿಟನ್ ರೂಪಾಂತರ ಸೋಂಕಿಗಿಂತ ಅಪಾಯಕಾರಿಯಾಗಿದೆ. ಈ ಸೋಂಕು ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಹಾಗಾಗಿ, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಕೊರೊನಾ ಪ್ರಕರಣಗಳು ಉಲ್ಭಣಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಕರ್ನಾಟಕವು ಮತ್ತು ಮಹಾರಾಷ್ಟ್ರದೊಂದಿಗೆ ಗಡಿಗಳನ್ನು ಹಂಚಿಕೊಂಡಿದ್ದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚರಿಸಲು ಯಾವುದೇ ನಿರ್ಬಂಧವಿಲ್ಲ. ಇದರ ಪರಿಣಾಮವಾಗಿಯೇ ಕಾವಲ್ಭೈರಸಂದ್ರ ಬಳಿಯ ಮಂಜುಶ್ರೀ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 40 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಶುಕ್ರವಾರ ನಗರದ ಪುರಭವನದಲ್ಲಿಪಾಲಿಕೆಯ ಎಲ್ಲವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಆಯುಕ್ತ ಎನ್.ಮಂಜುನಾಥ ಪ್ರಸಾದ್, ''ಪಕ್ಕದ ಕೇರಳ, ಮಹಾರಾಷ್ಟ್ರದಿಂದ ಪಾಠ ಕಲಿಯದಿದ್ದರೆ, ನಗರದಲ್ಲಿಪರಿಸ್ಥಿತಿ ಉಲ್ಬಣಿಸಲಿದೆ. ಲಾಕ್ಡೌನ್ ಹೇರಿದ್ದಾಗ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ರಾಜ್ಯದ ಗಡಿಗಳಲ್ಲಿನಿರ್ಬಂಧ ತೆರವುಗೊಳಿಸುತ್ತಿದ್ದಂತೆಯೇ ಸೋಂಕು ವ್ಯಾಪಕವಾಗಿ ಹರಡಿತು,'' ಎಂದು ಎಚ್ಚರಿಕೆ ನೀಡಿದರು. ಮುಲಾಜಿಲ್ಲದೆ ದಂಡ ವಿಧಿಸಿ: ''ಕಳೆದ ಜುಲೈನಲ್ಲಿನಿತ್ಯ 6 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದವು. ಸದ್ಯ ಕಳೆದ ಒಂದೆರಡು ತಿಂಗಳುಗಳಿಂದ ನಿತ್ಯ ಪ್ರಕರಣಗಳ ಸಂಖ್ಯೆ 200-300 ದಾಟುತ್ತಿಲ್ಲ. ಇದರಿಂದಾಗಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಉದಾಸೀನತೆ, ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಂಡು ದಂಡ ವಿಧಿಸಬೇಕು,'' ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ''ಕೇರಳದಿಂದ ನಗರಕ್ಕೆ ಬರುವವರಿಗೆ 72 ಗಂಟೆಗಳ ಹಿಂದೆ ಆರ್ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಒಂದೊಮ್ಮೆ ಪರೀಕ್ಷೆ ಮಾಡಿಸದವರು ಕ್ವಾರಂಟೈನ್ಗೆ ಒಳಗಾಗಿ ಪರೀಕ್ಷೆಯಲ್ಲಿನೆಗೆಟಿವ್ ಬಂದರಷ್ಟೇ ಮನೆಯಿಂದ ಹೊರಬರಬೇಕು. ಅಲ್ಲಿಂದ ರೆಸ್ಟೋರೆಂಟ್, ಐಟಿ-ಬಿಟಿ ಕಂಪೆನಿಗಳು, ಶಿಕ್ಷಣ ಸಂಸ್ಥೆಗಳಿಗೆ ಬರುವವರ ಪರೀಕ್ಷಾ ವರದಿ ಪರಿಶೀಲಿಸುವುದು ಸಂಬಂಧಪಟ್ಟ ಮುಖ್ಯಸ್ಥರ ಜವಾಬ್ದಾರಿ. ಈ ಕ್ರಮ ಅನುಸರಿಸದವರ ವಿರುದ್ಧ ಕ್ರಮ ಜರುಗಿಸಲಾಗುವುದು,'' ಎಂದು ಎಚ್ಚರಿಸಿದರು. ಮಹಾರಾಷ್ಟ್ರದಿಂದ ಬರುವವರಿಗೂ ನಿರ್ಬಂಧ: ''ಕೇರಳ ಮಾದರಿಯಲ್ಲಿಯೇ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ಪರೀಕ್ಷಾ ವರದಿ ಕಡ್ಡಾಯಗೊಳಿಸಲು ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಈ ಕುರಿತು ಸರಕಾರದಿಂದ ಶೀಘ್ರದಲ್ಲೇ ಆದೇಶ ಬರುವ ಸಾಧ್ಯತೆ ಇದೆ. ಆನಂತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು,'' ಎಂದು ತಿಳಿಸಿದರು. ಮುಂದಿನ ತಿಂಗಳಿನಿಂದ 3ನೇ ಹಂತದ ಲಸಿಕೆ ''3ನೇ ಹಂತದ ಲಸಿಕೆ ವಿತರಣೆಯು ಮಾರ್ಚ್ನಿಂದ ಆರಂಭವಾಗಲಿದೆ. 50 ವರ್ಷ ಮೇಲ್ಪಟ್ಟ ಮತ್ತು ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷದೊಳಗಿನ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುವುದು. ಇಂಥವರ ಸಮೀಕ್ಷೆಗಾಗಿ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದರ ನೆರವಿನಿಂದ ಸಾರ್ವಜನಿಕರು ಲಸಿಕೆ ಪಡೆಯಲು ಸ್ವಯಂ ನೋಂದಣಿಯಾಗಬಹುದು,'' ಎಂದು ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು. ''ನಗರದ ಕೊಳೆಗೇರಿಗಳಲ್ಲಿ 15-20 ಲಕ್ಷ ಮಂದಿ ವಾಸ ಮಾಡುತ್ತಿದ್ದು, ಮಧುಮೇಹ, ರಕ್ತದೊತ್ತಡ ಹಾಗೂ ಇನ್ನಿತರೆ ಕಾಯಿಲೆಗಳಿಂದ ನರಳುತ್ತಿರುವವರ ಮಾಹಿತಿ ಕಲೆ ಹಾಕಲಾಗುವುದು. ಪಾಲಿಕೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ದತ್ತಾಂಶವನ್ನು ಸಂಗ್ರಹಿಸಿ ಆ್ಯಪ್ನಲ್ಲಿಅಪ್ಲೋಡ್ ಮಾಡಲಿದ್ದಾರೆ. ಇದಕ್ಕಾಗಿಯೇ ಸ್ಮಾರ್ಟ್ ಸಿಟಿ ಕಂಪೆಧಿನಿಯು 2500 ಟ್ಯಾಬ್ಗಳನ್ನು ಒದಗಿಸಿದೆ. ಮಧುಮೇಹ, ರಕ್ತದೊತ್ತಡ ಪರೀಕ್ಷಿಸುತ್ತಿದ್ದಂತೆಯೇ ಬ್ಲೂಟೂತ್ ಮೂಲಕ ಸ್ವಯಂಚಾಲಿತವಾಗಿ ಆ ಮಾಹಿತಿಯು ಮೊಬೈಲ್ಗೆ ಅಪ್ಲೋಡ್ ಆಗುತ್ತದೆ,'' ಎಂದು ಹೇಳಿದರು. ''ಹಾಗೆಯೇ ನಗರದೆಲ್ಲೆಡೆ ಸಮೀಕ್ಷೆ ಕೈಗೊಂಡು ಜನರ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುವುದು. ಸಾರ್ವಜನಿಕರು ಸ್ವಯಂ ಇಚ್ಛೆಯಿಂದ ಆರೋಗ್ಯ ಮಾಹಿತಿಯನ್ನು ಆ್ಯಪ್ನಲ್ಲಿಅಪ್ಲೋಡ್ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇಲ್ಲಿಯಾರು ಮಾಹಿತಿ ಒದಗಿಸುವುದಿಲ್ಲವೋ ಅಂಥ ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ವಿವರ ಕಲೆ ಹಾಕಲಿದ್ದಾರೆ. ಈ ರೀತಿಯ ಸರ್ವೆ ಕಾರ್ಯವನ್ನು ದೇಶದ ಯಾವುದೇ ನಗರ ಮಾಡುತ್ತಿಲ್ಲ,'' ಎಂದರು. ಮಾರ್ಚ್ ಅಂತ್ಯದವರೆಗೆ ಬಿಡುಗಡೆ ಇಲ್ಲ ''ಕೋವಿಡ್ ಪತ್ತೆ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡವರನ್ನು ಮಾರ್ಚ್ ಅಂತ್ಯದವರೆಗೆ ಬಿಡುಗಡೆ ಮಾಡುವುದಿಲ್ಲ. ಅಗತ್ಯ ಬಿದ್ದರೆ ಪರೀಕ್ಷಾ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗುವುದು. ನಗರದ ಎಲ್ಲನರ್ಸಿಂಗ್ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್ನಿಂದ ಮೃತಪಟ್ಟವರ ಮಾಹಿತಿಯನ್ನು ಆಯಾ ದಿನವೇ ನೀಡಬೇಕು. ಆದರೆ, ಕೆಲ ಆಸ್ಪತ್ರೆಗಳು ತಡವಾಗಿ ವರದಿ ನೀಡುತ್ತಿವೆ. ಆ ಆಸ್ಪತ್ರೆಗಳ ಮೇಲೆ ವಿಪತ್ತು ನಿರ್ವಹಣಾ ಕಾಯಿದೆಯಡಿ ಕ್ರಮ ಜರುಗಿಸಲಾಗುವುದು,'' ಎಂದು ಹೇಳಿದರು.
from India & World News in Kannada | VK Polls https://ift.tt/2MbwKIS