ಹರವೆ ಮಹೇಶ್ ಚಾಮರಾಜನಗರ: ತಾಲೂಕಿನ ನಾನಾ ಕಡೆ ಶುಕ್ರವಾರ ಸುರಿದ ಭಾರಿ ಗಾಳಿಮಳೆಯ ಪರಿಣಾಮ, ಕೃಷಿ ಬೆಳೆಗಳಿಗಿಂತ ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಹಾನಿಯಾಗಿದೆ. ಅಂದಾಜು ಮೂರು ಕೋಟಿ ರೂ. ಬೆಳೆನಾಶವಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ತಾಲೂಕಿನ ಚಂದಕವಾಡಿ ಹೋಬಳಿಯ ಜ್ಯೋತಿಗೌಡನಪುರ, ಹೆಬ್ಬಸೂರು, ಬ್ಯಾಡಮೂಡ್ಲು ಗ್ರಾಮಗಳಲ್ಲಿ 50ರಿಂದ 60 ತೆಂಗಿನಮರಗಳು ಗಾಳಿಗೆ ಮುರಿದು ಬಿದ್ದಿವೆ. ಸಂತೇಮರಹಳ್ಳಿ ಹೋಬಳಿಯ 30 ಎಕರೆ ಪ್ರದೇಶದಲ್ಲಿ ಬಾಳೆ ನಾಶವಾಗಿದೆ. ಕಸಬಾ ಹೋಬಳಿ ವ್ಯಾಪ್ತಿಯ ರಾಮಸಮುದ್ರದಲ್ಲಿ 300 ಎಕರೆಯಷ್ಟು ಬಾಳೆ ಬೆಳೆ, 30 ಎಕರೆಯಲ್ಲಿ ಬೆಳೆದಿದ್ದ ಸಣ್ಣ ಈರುಳ್ಳಿ ಬೆಳೆ ನಾಶವಾಗಿದೆ. ಹೆಬ್ಬಸೂರು ಸೇರಿದಂತೆ ನಾನಾ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ನುಗ್ಗೆ ಗಿಡ, ಜೋಳದ ಫಸಲು ಸೇರಿದಂತೆ ಹಲವು ಬೆಳೆಗಳು ಗಾಳಿ ಮಳೆಗೆ ನಾಶವಾಗಿವೆ. 3 ಕೋಟಿ ರೂ. ಬೆಳೆನಾಶ''ಸಣ್ಣ ಈರುಳ್ಳಿ, ಟೊಮೆಟೊ ಸೇರಿದಂತೆ ಇನ್ನಿತರ ಬೆಳೆಗಳು ಹಲವೆಡೆ ಅಕಾಲಿಕ ಮಳೆಯಿಂದಾಗಿ ನಾಶವಾಗಿದೆ. ಮೊದಲಿಗೆ ಬಾಳೆಬೆಳೆ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದೇವೆ. ನಂತರ ಈರುಳ್ಳಿ ಬೆಳೆ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ಶನಿವಾರ ನಡೆದ ಪ್ರಾಥಮಿಕ ಸಮೀಕ್ಷೆಯಲ್ಲಿ 600 ಎಕರೆಯಲ್ಲಿ ಬೆಳೆದಿದ್ದ ಬಾಳೆಬೆಳೆ ನಾಶವಾಗಿದ್ದು, ಅಂದಾಜು 3 ಕೋಟಿ ನಷ್ಟವಾಗಿದೆ,'' ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನೆಲಕ್ಕುರುಳಿದ ವಿದ್ಯುತ್ ಕಂಬಗಳುಶುಕ್ರವಾರ ಬಿದ್ದ ಗಾಳಿಮಳೆಯ ಪರಿಣಾಮ ಚಂದಕವಾಡಿ ಹೋಬಳಿಯ ನಾನಾ ಗ್ರಾಮಗಳಲ್ಲಿ 38 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. 4 ವಿದ್ಯುತ್ ಪರಿವರ್ತಕಗಳು ಧರೆಗುರುಳಿದ್ದು, 3 ಕಿ.ಮೀ. ಉದ್ದದ ಲೈನ್ ನೆಲಕ್ಕೆ ಬಿದ್ದಿತ್ತು. ಇದರಿಂದಾಗಿ ತಾಲೂಕಿನ 27 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. 25 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಚಾಮರಾಜನಗರ ಸೆಸ್ಕ್ ಉಪ ವಿಭಾಗದ ಇಇ ತಿಳಿಸಿದ್ದಾರೆ. ಹಾರಿ ಹೋದ ಚಾವಣಿ ಜಿಲ್ಲಾ ಕೇಂದ್ರ ಚಾಮರಾಜನಗರದ ಗಾಳಿಪುರ 3 ಮತ್ತು 4ನೇ ವಾರ್ಡ್, ನಲ್ಲೂರು ಸಮೀಪದ ನಲ್ಲೂರು ಮೋಳೆ, ದಡದಹಳ್ಳಿ ಗ್ರಾಮದಲ್ಲಿ ಗಾಳಿ ಮಳೆಯಿಂದಾಗಿ ನಿವಾಸಿಗಳ ಮನೆಗಳ ಚಾವಣಿ ಹಾರಿಹೋಗಿವೆ. ಜಿಲ್ಲಾಸ್ಪತ್ರೆಯ ಸುತ್ತುಗೋಡೆಯ ಒಂದು ಭಾಗ ನೆಲಕ್ಕುರುಳಿದೆ. ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ಬಿದ್ದ ಗಾಳಿ ಮಳೆಯಿಂದಾಗಿ ಬಾಳೆ, ಮುಸುಕಿನ ಜೋಳ, ತೆಂಗಿನ ಮರ, ಸಣ್ಣ ಈರುಳ್ಳಿ ಬೆಳೆಗಳು ನಾಶವಾಗಿವೆ. ಕೂಡಲೇ ತೋಟಗಾರಿಕೆ ಅಧಿಕಾರಿಗಳು ಬೆಳೆನಷ್ಟ ಅಂದಾಜು ಸಮೀಕ್ಷೆ ನಡೆಸಿ, ವೈಜ್ಞಾನಿಕ ಪರಿಹಾರ ನೀಡಬೇಕು. ಜ್ಯೋತಿಗೌಡನಪುರ ಸಿದ್ದರಾಜು, ರೈತಮುಖಂಡರು
from India & World News in Kannada | VK Polls https://ift.tt/3sgz4NU