ಕೊಚ್ಚಿ: ವಿವಾದಿತ ಕ್ರಿಕೆಟಿಗ ಶಾಂತಕುಮಾರನ್ ಶ್ರೀಶಾಂತ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವ ದಿನ ಹತ್ತಿರವಾದಂತ್ತಿದೆ. ಕೇರಳ ಎಕ್ಸ್ಪ್ರೆಸ್ ಖ್ಯಾತಿಯ ಬಲಗೈ ವೇಗಿಯ ವಿರುದ್ದದ ನಿಷೇಧ ಅವಧಿ ಅಂತ್ಯಗೊಳ್ಳಲಿದ್ದು, ಸೆಪ್ಟೆಂಬರ್ನಲ್ಲಿ ಪ್ರಕಟಿಸಲಾಗುವ ರಾಜ್ಯ ರಣಜಿ ಕ್ರಿಕೆಟ್ ತಂಡದಲ್ಲಿ ಸ್ಥಾನ ನೀಡಲು ನಿರ್ಧರಿಸಿದೆ. 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದ ಮತ್ತು ರಾಯಲ್ಸ್ ತಂಡದ ಸಹ ಆಟಗಾರರಾದ ಅಜಿತ್ ಚಾಂಡೇಲಾ ಮತ್ತು ಅಂಕಿತ್ ಚವಾಣ್ ಅವರನ್ನು ದಿಲ್ಲಿ ಪೊಲೀಸರು ಸ್ಪಾಟ್ ಫಿಕ್ಸಿಂಗ್ ನಡೆಸಿರುವ ಆರೋಪದ ಮೇರೆಗೆ ಬಂಧಿಸಿದ್ದರು. ಬಳಿಕ ಈ ಕ್ರಿಕೆಟಿಗರ ವಿರುದ್ಧ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ತಾವು ನಿರಪರಾಧಿ ಎಂದು ಶ್ರೀಶಾಂತ್ ನಡೆಸಿದ ಕಾನೂನು ಸಮರದ ಫಲವಾಗಿ 2015ರಲ್ಲಿ ದಿಲ್ಲಿ ನ್ಯಾಯಾಲಯ ಅವರನ್ನು ಆರೋಪ ಮುಕ್ತರನ್ನಾಗಿಸಿತ್ತು. ಆದರೆ ಬಿಸಿಸಿಐ ಹೇರಿದ್ದ ನಿಷೇಧ ಮುಂದುವರಿದಿತ್ತು. ನಂತರ 2018ರಲ್ಲಿ ಕೇರಳ ಹೈ ಕೋರ್ಟ್ಸ್ ಶ್ರೀಶಾಂತ್ ವಿರುದ್ಧ ನಿಷೇಧ ತೆಗೆಯುವಂತೆ ಬಿಸಿಸಿಐಗೆ ಆದೇಶಿಸಿತ್ತು. ನಂತರ 2019ರಲ್ಲಿ ಸುಪ್ರೀಂ ಕೋರ್ಟ್ ಶ್ರೀಶಾಂತ್ ತಪ್ಪನ್ನು ಎತ್ತಿ ಹಿಡಿಯಿತಾದರೂ, ಬಿಸಿಸಿಐಗೆ ನಿಷೇಧ ಶಿಕ್ಷೆ ಕಡಿಮೆ ಮಾಡುವಂತೆ ಆದೇಶಿಸಿತ್ತು. ಇದರೊಂದಿಗೆ 2020ರ ಸೆಪ್ಟೆಂಬರ್ಗೆ 37 ವರ್ಷದ ಅನುಭವಿ ವೇಗಿಯ ವಿರುದ್ಧದ ನಿಷೇಧ ಕೊನೆಗೊಳ್ಳಲಿದೆ. "ಅವಕಾಶ ನೀಡಲು ಮುಂದಾಗಿರುವ ಕೇರಳ ಕ್ರಿಕೆಟ್ ಸಂಸ್ಥೆಯ ಋಣದಲ್ಲಿ ನಾನಿದ್ದೇನೆ. ನನ್ನ ಫಿಟ್ನೆಸ್ ಸಾಬೀತು ಪಡಿಸಿ ಭರ್ಜರಿ ಕಮ್ಬ್ಯಾಕ್ ಮಾಡಲಿದ್ದೇನೆ. ಎಲ್ಲಾ ವಿವಾದಗಳು ವಿಶ್ರಾಂತಿ ತೆಗೆದುಕೊಳ್ಳುವ ಸಮಯವಿದ್ದು," ಎಂದು ಶ್ರೀಶಾಂತ್ ಹೇಳಿದ್ದಾರೆ. ಕೆಸಿಎ, ಇತ್ತೀಚೆಗೆ ಟಿನು ಯೊಹಾನನ್ ಅವರನ್ನು ರಣಜಿ ಟ್ರೋಫಿ ಸಲುವಾಗಿ ಕೇರಳ ತಂಡಕ್ಕೆ ನೂತನ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿತ್ತು. ಈ ಸಂದರ್ಭದಲ್ಲಿ ಕೆಸಿಯ ಕಾರ್ಯದರ್ಶಿ ಶ್ರೀತ್ ನಾಯರ್ ಮಾತನಾಡಿ, ಎಸ್ ಶ್ರೀಶಾಂತ್ ಅವರ ಕಮ್ಬ್ಯಾಕ್ ತಂಡಕ್ಕೆ ಹೆಚ್ಚಿನ ಬಲ ತಂದುಕೊಡಲಿದೆ ಎಂದಿದ್ದರು. 2007 ಮತ್ತು 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯನಾಗಿರುವ ಶ್ರೀಶಾಂತ್, 27 ಟೆಸ್ಟ್ಗಳಿಂದ 87 ವಿಕೆಟ್ ಮತ್ತು ಏಕದಿನ ಕ್ರಿಕೆಟ್ನಲ್ಲೂ 75 ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YJ6Cax