ಮೀರತ್: ಇನ್ನೇನು ಗಲ್ಲಿಗೇರಿಸಲು ಕೆಲವೇ ದಿನ ಬಾಕಿ ಇದೆ, ಕೆಲವೇ ದಿನದಲ್ಲಿ ತಾಯಿಯನ್ನು ತಾನು ಕಳೆದುಕೊಳ್ಳುತ್ತೇನೆ ಎನ್ನುವ ನೋವಿನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮಹಿಳಾ ಅಪರಾಧಿಯ ಪುತ್ರನೊಬ್ಬನ ಮನ ಮಿಡಿಯುವ ಮನವಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಶಬ್ನಮ್ ಅಲಿಯ 12 ವರ್ಷದ ಮಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಭಿತ್ತಿ ಪತ್ರದ ಮೂಲಕ ಈ ರೀತಿ ಮನವಿ ಮಾಡಿದ್ದಾನೆ. ತಾಯಿಯ ಗಲ್ಲು ಶಿಕ್ಷ ಸಂಬಂಧ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿರುವುದರಿಂದ ತಾಯಿಯನ್ನು ಉಳಿಸಿಕೊಡಿ ಎನ್ನುವ ರೀತಿಯಲ್ಲಿ ಯುವಕ ಮನವಿಯನ್ನು ಮಾಡಿದ್ದಾನೆ. ಬೀದಿಯಲ್ಲಿ ನಿಂತು ಭಿತ್ತಿ ಪತ್ರವನ್ನು ಹಿಡಿದಿರುವ ಬಾಲಕನ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ, ಅನೇಕರು ಯುವಕನ ಮುಗ್ಧತೆಗೆ ಮರುಗಿದ್ದಾರೆ. ಏನಿದು ಪ್ರಕರಣ?ಇದು ಇಡೀ ಉತ್ತರ ಪ್ರದೇಶವನ್ನೇ ಬೆಚ್ಚಿಬೀಳಿಸಿದ ಹತ್ಯೆ ಪ್ರಕರಣವಾಗಿದೆ. ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿತ್ತು. ಈ ಬಾಲಕನ ತಾಯಿ ಶಬ್ನಮ್ ಅಲಿಗೆ, ಸಲೀಂ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ಆದರೆ ಆಸ್ತಿ-ಅಂತಸ್ತಿನಲ್ಲಿ ಸಲೀಂ, ಶಬ್ನಮ್ ಕುಟುಂಬಕ್ಕಿಂತ ತೀರ ಕಡಿಮೆ ಇದ್ದಿದ್ದರಿಂದ, ಇವರ ಪ್ರೇಮಕ್ಕೆ ಮನೆಯವರು ವಿರೋಧಿಸಿದ್ದರು. ಮದುವೆಗೂ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಶಬ್ನಮ್ ಹಾಗೂ ಸಲೀಂ ಆಕೆಯ ಕುಟುಂಬದ ಏಳು ಮಂದಿಯನ್ನು ಕೊಂದಿದ್ದರು. ಹಾಲಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಶಬ್ಮಮ್ನ ತಂದೆ, ತಾಯಿ, ಸಹೋದರರು, 10 ತಿಂಗಳ ಮಗು ಸೇರಿ ಒಟ್ಟು ಏಳು ಮಂದಿಯನ್ನು ಅತ್ಯಂತ ಪೈಶಾಚಿಕ ರೀತಿಯಲ್ಲಿ ಈ ಜೋಡಿ ಕೊಂದಿತ್ತು. 14, 2008 ರಂದು ಈ ಘಟನೆ ನಡೆದಿದ್ದು ಘಟನೆಯ ಎರಡು ದಿನಗಳ ಬಳಿಕ ಪೊಲೀಸರು ಇವರಿಬ್ಬರನ್ನು ಅರೆಸ್ಟ್ ಮಾಡಿದ್ದರು. ನಂತರ ಸುದೀರ್ಘ ವಿಚಾರಣೆ ಬಳಿಕ 2015ರಲ್ಲಿ ಸುಪ್ರೀಂಕೋರ್ಟ್ ಇಬ್ಬರಿಗೆ ಮರಣ ದಂಡನೆ ವಿಧಿಸಿತ್ತು. ನಂತರ ಇವರು ಮರು ಪರಿಶೀಲನೆ ಅರ್ಜಿ ಕೂಡ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದರು . ಇದು ಕೂಡ ಕೋರ್ಟ್ ವಜಾಗೊಳಿಸಿತ್ತು.ನಂತರ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಕೂಡ ಸಲ್ಲಿಸಿದ್ದರು, ಇದನ್ನು ಕೂಡ ರಾಷ್ಟ್ರಪತಿ ಭವನ ತಿರಸ್ಕರಿಸಿತ್ತು. ಸದ್ಯ ಇವರಿಬ್ಬರ ಗಲ್ಲು ಶಿಕ್ಷೆಗೆ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಶಬ್ನಮ್ ಮಗ ತಾಯಿಯನ್ನು ಕ್ಷಮಿಸಿ ಬಿಡಿ ಎಂದು ಭಿತ್ತಿ ಪತ್ರ ಹಿಡಿದು ರಾಷ್ಟ್ರಪತಿಗಳಿಗೆ. ಪ್ರೇಮದ ವೇಳೆ ಶಬ್ನಮ್ಗೆ ಈ ಮಗು ಜನಿಸಿತ್ತು. ಸದ್ಯ ಈತನನ್ನು ಇವರ ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ.
from India & World News in Kannada | VK Polls https://ift.tt/3bnN6X8