ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅರುಣ್ ಮಹಾರಾಜ್ ಕಿಶನ್ ಜೇಟ್ಲಿ (66) ಶನಿವಾರ ನಿಧನರಾದರು. ಹಲವಾರು ವರ್ಷಗಳಿಂದಲೂ ತೀವ್ರ ಅನಾರೋಗ್ಯಗೊಂಡಿದ್ದ ಜೇಟ್ಲಿ ಶನಿವಾರ ಕೊನೆಯುಸಿರೆಳೆದರು ಎಂದು ಏಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ತೀವ್ರ ಅನಾರೋಗ್ಯರಾಗಿದ್ದ ಅರುಣ್ ಜೇಟ್ಲಿ ಹೊಸದಿಲ್ಲಿಯ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಅರುಣ್ ಜೇಟ್ಲಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಶನಿವಾರ ಮಧ್ಯಾಹ್ನ 12.07ಕ್ಕೆ ನಿಧನರಾದರು ಎಂದು ಏಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ತೀವ್ರ ಅನಾರೋಗ್ಯಗೊಂಡಿದ್ದ ಅರುಣ್ ಜೇಟ್ಲಿ ಅಮೆರಿಕದಲ್ಲಿಯೂ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ಪಡೆದುಕೊಂಡು ಬಂದ ನಂತರ ಅನಾರೋಗ್ಯ ಸ್ಥಿತಿಯಲ್ಲಿಯೇ ಕೇಂದ್ರ ಬಜೆಟ್ ಮಂಡಿಸಿದ್ದರು. ಕಳೆದ ಆಗಸ್ಟ್ 9ರಂದು ಉಸಿರಾಟದ ತೊಂದರೆಯಿಂದಾಗಿ ಅರುಣ್ ಜೇಟ್ಲಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದಲೂ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಅರುಣ್ ಮಹಾರಾಜ್ ಕಿಶನ್ ಜೇಟ್ಲಿ 28 ಡಿಸೆಂಬರ್, 1952ರಲ್ಲಿ ಹೊಸದಿಲ್ಲಿಯಲ್ಲಿ ಜನಿಸಿದರು. ವಿದ್ಯಾರ್ಥಿ ಜೀವನದಿಂದಲೇ ಸಂಘಟನೆ ಮತ್ತು ಹೋರಾಟದ ಪ್ರವೃತ್ತಿ ಬೆಳೆಸಿಕೊಂಡಿದ್ದರು ಅರುಣ್ ಜೇಟ್ಲಿ. ವೃತ್ತಿಯಲ್ಲಿ ವಕೀಲರಾದ ಅರುಣ್ ಜೇಟ್ಲಿ 1980ರ ದಶಕಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೊರ್ಟ್ಗಳಲ್ಲಿ ವಕೀಲರಾಗಿದ್ದರು. ಬಿಜೆಪಿಯ ಅತ್ಯಂತ ಪ್ರಭಾವಿ ಹಾಗೂ ಚಾಣಾಕ್ಷ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದರು ಅರುಣ್ ಜೇಟ್ಲಿ. ಅರುಣ್ ಜೇಟ್ಲಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಹಿರಿಯ ರಾಜಕಾರಣಿಗಳು, ಉದ್ಯಮಿಗಳು, ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/2Zr0BS4