ನವದೆಹಲಿ : ಭಾರತ ಕಂಡ ಅತ್ಯಂತ ಪ್ರತಿಭಾವಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಮತ್ತು ದೇಶದ ಆರ್ಥಿಕತೆಗೆ ಹೊಸದಿಕ್ಕು ತೋರಿಸಲು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದ ಕೇಂದ್ರದ ಮಾಜಿ ವಿತ್ತ ಸಚಿವ ಅವರ ಸಾವಿಗೆ ಹಲವಾರು ನಾಯಕರು ಕಂಬನಿ ಮಿಡಿದಿದ್ದಾರೆ. ಇತ್ತೀಚೆಗೆ ತಾನೆ ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಹಲೋಕ ತ್ಯಜಿಸಿದ್ದರು. ಇದೀಗ, 66 ವರ್ಷದ ಅರುಣ್ ಜೇಟ್ಲಿ ಅವರ ಸಾವು ಭಾರತೀಯ ಜನತಾ ಪಕ್ಷಕ್ಕೆ ಮತ್ತು ನಾಯಕರಿಗೆ ಬರಸಿಡಿಲಿನಂತೆ ಬಂದೆರಗಿದೆ. ಸುದೀರ್ಘ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅರುಣ್ ಜೇಟ್ಲಿ ಅವರು ಅಮೆರಿಕದಲ್ಲಿಯೂ ಚಿಕಿತ್ಸೆ ಪಡೆದಿದ್ದರು. ಎರಡು ವಾರಗಳ ಹಿಂದೆ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಮಧ್ಯಾಹ್ನ 12.07ಕ್ಕೆ ಕೊನೆಯುಸಿರೆಳೆದರು. ಕಂಬನಿ : ದೇಶ ಕಂಡ ಅತ್ಯುನ್ನತ ನಾಯಕರಲ್ಲಿ ಒಬ್ಬರಾಗಿದ್ದ ಅರುಣ್ ಜೇಟ್ಲಿ ಅವರ ಸಾವು ನಿಜಕ್ಕೂ ಆಘಾತಕಾರಿಯಾಗಿದ್ದು. ಹಣಕಾಸು, ರಕ್ಷಣೆ, ಕಾರ್ಪೊರೇಟ್ ಅಫೇರ್ಸ್, ವಾಣಿಜ್ಯ, ಕಾನೂನು ಮತ್ತು ನ್ಯಾಯಾಂಗ ಇಲಾಖೆ ಮಂತಾದ ಹುದ್ದೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದರು. ಅವರ ಸಾವು ಇಡೀ ದೇಶಕ್ಕೆ ಆದ ನಷ್ಟ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕಂಬನಿ ಮಿಡಿದಿದ್ದಾರೆ. ಅಶೋಕ್ ಗೆಹ್ಲೋಟ್ : ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕೊನೆಯುಸಿರೆಳೆದಿದ್ದು ಕೇಳಿ ತುಂಬಾ ನೋವಾಗಿದೆ. ಅವರ ಕುಟುಂಬದ ಸದಸ್ಯರಿಗೆ ನನ್ನ ಹೃದಯಪೂರ್ವಕ ಸಾಂತ್ವನಗಳು. ಅವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಜೇಟ್ಲಿ ಅವರು ದೇವರು ಸದ್ಗತಿ ನೀಡಲಿ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನುಡಿದಿದ್ದಾರೆ. ಅಮಿತ್ ಶಾ : ಅರುಣ್ ಜೇಟ್ಲಿ ಅವರು ಸಾವು ನನಗೆ ವೈಯಕ್ತಿಕವಾಗಿ ತುಂಬಾ ನೋವು ತಂದಿದೆ. ನಾನು ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾನು ಪಕ್ಷದ ಹಿರಿಯ ನಾಯಕನನ್ನು ಮಾತ್ರ ಕಳೆದುಕೊಂಡಿಲ್ಲ, ನನ್ನ ಕುಟುಂಬದ ಸದಸ್ಯನನ್ನೇ ಕಳೆದುಕೊಂಡಂತಾಗಿದೆ. ಜೇಟ್ಲಿ ಅವರು ನನಗೆ ಎಂದೆಂದಿಗೂ ದಾರಿತೋರುವ ದೀಪವಾಗಿರುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಣ್ಣೀರು ಸುರಿಸಿದ್ದಾರೆ. ರಜತ್ ಶರ್ಮಾ : ನನ್ನ ಮತ್ತು ಅರುಣ್ ಜೇಟ್ಲಿ ಅವರ ಸ್ನೇಹ 5 ದಶಕಗಳಷ್ಟು ಹಳೆಯದು. ಅವರಿಂದು ನಮ್ಮನ್ನು ಅಗಲಿದ್ದಾರೆ. ಭಾರತ ಅತ್ಯುನ್ನತ ಆಡಳಿತಗಾರ, ಅದ್ಭುತ ನ್ಯಾಯವಾದಿ ಮತ್ತು ಭ್ರಷ್ಟತೆಯ ಸೋಂಕಿಲ್ಲದ ರಾಜಕಾರಣಿಯನ್ನು ಭಾರತ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ ಎಂದು ರಜತ್ ಶರ್ಮಾ ಅವರು ನುಡಿದಿದ್ದಾರೆ.
from India & World News in Kannada | VK Polls https://ift.tt/30rEtnU