ಕಾನ್ಪುರ: ಕೊಲೆ ಪ್ರಕರಣವೊಂದರ ಆರೋಪಿಯೊಬ್ಬ ಬರೋಬ್ಬರಿ 36 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ತಲೆಮರೆಸಿಕೊಂಡಿದ್ದ ಪ್ರಕರಣ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಅದೂ ಕೂಡಾ ವೇಷದಲ್ಲಿದ್ದ ಕೊಲೆ ಆರೋಪಿ ಕೊನೆಗೂ ಉನ್ನಾವ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. 55 ವರ್ಷ ವಯಸ್ಸಿನ ಶೇಷ್ ನರೇನ್ ಶಾಸ್ತ್ರಿ, ಬಂಧಿತ ಆರೋಪಿ. 1982ರಲ್ಲಿ ಶಾಸ್ತ್ರಿಯ ನೆರೆಮನೆಯಲ್ಲಿದ್ದ ಬಾಬು ಸಿಂಗ್ ಎಂಬಾತನ ಹತ್ಯೆಯಾಗಿತ್ತು. ಈ ವೇಳೆ ಶಾಸ್ತ್ರಿ ಸೇರಿದಂತೆ 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದ್ರೆ 1983ರಲ್ಲಿ ಹೈಕೋರ್ಟ್ ನಲ್ಲಿ ಜಾಮೀನು ಪಡೆದಿದ್ದ ಶಾಸ್ತ್ರಿ, ಆ ನಂತರ ನಾಪತ್ತೆಯಾಗಿಬಿಟ್ಟಿದ್ದ. 1984ರಲ್ಲಿ ಶಾಸ್ತ್ರಿಯನ್ನು ಹೊರತುಪಡಿಸಿ ಮಿಕ್ಕ 8 ಆರೋಪಿಗಳನ್ನ ಕೊಲೆ ಪ್ರಕರಣದ ದೋಷಿಗಳು ಎಂದು ತೀರ್ಮಾನಿಸಿ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದ್ರೆ, ಶಾಸ್ತ್ರಿ ಮಾತ್ರ ಪೊಲೀಸರ ಬಲೆಗೆ ಬಿದ್ದೇ ಇರಲಿಲ್ಲ ಸ್ವಾಮೀಜಿಯ ವೇಷ ಧರಿಸಿದ್ದ ಶಾಸ್ತ್ರಿ ದೇವಾಲಯಗಳಲ್ಲಿ, ಆಶ್ರಮಗಳಲ್ಲಿ ಆಶ್ರಯ ಪಡೆಯುತ್ತಿದ್ದ. ಪೊಲೀಸರಿಗೆ ಸುಳಿವು ಸಿಗದಂತಾಗಲು ಒಂದೇ ಊರಿನಲ್ಲಿ ಹೆಚ್ಚು ಕಾಲ ವಾಸ ಮಾಡ್ತಿರಲಿಲ್ಲ. ಮೊಬೈಲ್ ನಂಬರ್ ಕೂಡಾ ಪದೇ ಪದೇ ಬದಲಾವಣೆ ಮಾಡುತ್ತಿದ್ದ. ಒಂದು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಈ ಕಳ್ಳ ಸ್ವಾಮೀಜಿ, 2013ರಲ್ಲಿ ಕಾನ್ಪುರ ಜಿಲ್ಲೆಯಲ್ಲಿ ಮತ್ತೊಂದು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ. ಬಾಲಕಿಯೊಬ್ಬಳ ಅಪಹರಣ ಹಾಗೂ ಅತ್ಯಾಚಾರದ ಆರೋಪವೂ ಸ್ವಾಮೀಜಿ ತಲೆಗೆ ಸುತ್ತಿಕೊಂಡಿತ್ತು. ಆಗ ಪೊಲೀಸರ ಬಲೆಗೆ ಬಿದ್ದಿದ್ದ ಕಳ್ಳ ಸ್ವಾಮೀಜಿ, ಯಥಾಪ್ರಕಾರ ಜಾಮೀನು ಪಡೆದು ನಾಪತ್ತೆಯಾಗಿಬಿಟ್ಟಿದ್ದ. ಆದ್ರೆ, ಆ ಸಂದರ್ಭದಲ್ಲಿ ಈ ಕಳ್ಳ ಸ್ವಾಮೀಜಿಯೇ ಕೊಲೆ ಪ್ರಕರಣದಲ್ಲಿ ಬೇಕಾಗಿರುವ ಶಾಸ್ತ್ರಿ ಎಂದು ಗೊತ್ತಿರಲಿಲ್ಲ. ಕೊನೆಗೂ ತನ್ನ ಬಳಿಯಿದ್ದ ಮೊಬೈಲ್ ನಿಂದಲೇ ಕಳ್ಳ ಸ್ವಾಮೀಜಿ ಶಾಸ್ತ್ರಿ ಸಿಕ್ಕಿಬಿದ್ದಿದ್ದಾನೆ. ಇದೀಗ ಆತನನ್ನು ಜೈಲಿಗೆ ಅಟ್ಟಲಾಗಿದೆ.
from India & World News in Kannada | VK Polls https://ift.tt/30GwUtQ