ನವದೆಹಲಿ : ಸತತ ಮೂರು ಗಂಟೆಗಳ ಕಾಲ ದೆಹಲಿಯ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಿದರೂ, ಅವರು ಸಹಕರಿಸುತ್ತಿಲ್ಲ ಮತ್ತು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸಲು, ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಮತ್ತಷ್ಟು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರ್ಟನ್ನು ಕೋರುವ ಸಾಧ್ಯತೆಯಿದೆ. ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು ಮಾತ್ರವಲ್ಲದೆ, ತಮ್ಮ ಮಗನನ್ನೂ ಭ್ರಷ್ಟಾಚಾರದಲ್ಲಿ ತೊಡಗುವಂತೆ ಮಾಡಿದ್ದಕ್ಕಾಗಿ ಪಿ ಚಿದಂಬರಂ ಅವರು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದು, ಸಿನಿಮೀಯ ರೀತಿಯಲ್ಲಿ ಅವರನ್ನು ಬುಧವಾರ ಬಂಧಿಸಲಾಗಿತ್ತು. ಐಎನ್ಎಕ್ಸ್ ಮೀಡಿಯಾ ಕಂಪನಿಯ ಮಾಲಕಿಯಾಗಿದ್ದ ಇಂದ್ರಾಣಿ ಮುಖರ್ಜಿಯಾ ಅವರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮುಂದೆ ನೀಡಿದ್ದ ಹೇಳಿಕೆಯ ಆಧಾರದ ಮೇಲೆ ಚಿದಂಬರಂ ಅವರನ್ನು ಬಂಧಿಸಲಾಗಿದೆ. 2007ರಲ್ಲಿ ತಾವು ಚಿದಂಬರಂ ಅವರನ್ನು ಭೇಟಿಯಾಗಿದ್ದಾಗಿ ಇಂದ್ರಾಣಿ ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ತಮ್ಮ ಮಗನ ಕಂಪನಿಗೆ ಸಹಾಯ ಮಾಡಬೇಕೆಂದು ಚಿದಂಬರಂ ಆಗ್ರಹಿಸಿದ್ದರು. ಆಗ 10 ಲಕ್ಷ ಡಾಲರ್ ಲಂಚವನ್ನು ಕಾರ್ತಿ ಚಿದಂಬರಂ ಕೇಳಿದ್ದಾಗಿ ಇಂದ್ರಾಣಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯೇ ಚಿದಂಬರಂ ಅವರಿಗೆ ಮುಳುವಾಗಿದೆ. ಆದರೆ, ತಾವಾಗಲಿ ತಮ್ಮ ಮಗನಾಗಲಿ ಇಂದ್ರಾಣಿ ಮುಖರ್ಜಿಯಾ ಮತ್ತು ಅವರ ಗಂಡ ಪೀಟರ್ ಮುಖರ್ಜಿಯಾ ಅವರನ್ನಾಗಲಿ ಭೇಟಿ ಮಾಡಿರಲಿಲ್ಲ ಎಂದು ಚಿದಂಬರಂ ಅವರು ಹೇಳಿದ್ದಾರೆ. ಇದೇ ಮಾತನ್ನು ಕಾರ್ತಿ ಅವರೂ ಆಡುತ್ತಿದ್ದಾರೆ.
from India & World News in Kannada | VK Polls https://ift.tt/2ZhFPnP