ಮಂಜುನಾಥ ನಾಗಲೀಕರ್, ಬೆಂಗಳೂರು ಬೆಂಗಳೂರು: ಸೋಮವಾರ ಹೊಸ ಸೋಂಕಿನ ಸಂಖ್ಯೆ 3130ಕ್ಕೆ ಇಳಿದಿದ್ದು, ಬೆಂಗಳೂರಿನಲ್ಲಂತೂ ಅದು 1603 ಮಾತ್ರ. ಹಬ್ಬದ ನಡುವೆ ಇದೊಂದು ಖುಷಿಯ ಸುದ್ದಿಯಾಗಿದ್ದರೂ ಹಬ್ಬ ಮತ್ತು ರಜೆಯ ಹಿನ್ನೆಲೆಯಲ್ಲಿ ಮೈಮರೆಯದಿರಿ ಎಂಬ ಎಚ್ಚರಿಕೆಯ ಮಾತನ್ನೂ ತಜ್ಞರು ಹೇಳಿದ್ದಾರೆ. ಅಕ್ಟೋಬರ್ ತಿಂಗಳ ಆರಂಭದ 10 ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದರೆ, ಕಳೆದೆರಡು ದಿನಗಳಿಂದ 5 ಸಾವಿರಕ್ಕಿಂತ ಕಡಿಮೆ ಇದೆ. ಅ.11ರಿಂದ ಅ.26ರ ನಡುವೆ 14,95,270 ಟೆಸ್ಟ್ಗಳನ್ನು ಮಾಡಲಾಗಿದೆ. ಈ ಅವಧಿಯಲ್ಲಿ 95,638 ಹೊಸ ಕೇಸ್ ವರದಿಯಾಗಿವೆ. 1,39,7504 ಜನ ಗುಣಮುಖರಾಗಿದ್ದಾರೆ. ಆದರೂ, ಅವಧಿಯಲ್ಲಿ ಪಾಸಿಟಿವಿಟಿ ಪ್ರಮಾಣ 6.39ರಷ್ಟು ಇದೆ. ಈ ಅವಧಿಯಲ್ಲಿ ನಿತ್ಯ ಸರಾಸರಿ 62ರಂತೆ 981 ಸಾವುಗಳು ವರದಿಯಾಗಿವೆ. ಹೆಚ್ಚೆಚ್ಚು ಟೆಸ್ಟಿಂಗ್ ಮೂಲಕ ಸೋಂಕಿತರನ್ನು ಪತ್ತೆ ಮಾಡಿ ಒಬ್ಬರಿಂದ ಒಬ್ಬರಿಗೆ ಹಬ್ಬುವಿಕೆಯ ಸರಪಳಿ ಮುರಿದದ್ದು ಸೋಂಕು ಕಡಿಮೆಯಾಗಲು ಕಾರಣ ಎನ್ನುತ್ತದೆ ಆರೋಗ್ಯ ಇಲಾಖೆ. 'ಕೋವಿಡ್ ಸೋಂಕು ಒಬ್ಬರಿಗೆ ಒಬ್ಬರಿಗೆ ವೇಗವಾಗಿ ಹರಡುತ್ತದೆ. ಪ್ರಕರಣಗಳು ಯಾವಾಗ ಮತ್ತೆ ಏರಿಕೆಯಾಗುತ್ತವೆ ಎಂದು ಗೊತ್ತಾಗುವುದಿಲ್ಲ. ಈಗ 3 ದಿನ ಹಬ್ಬದ ರಜೆ ಕಾರಣ ಸೋಂಕು ಹರಡುವಿಕೆ ಮತ್ತಷ್ಟು ಕಡಿಮೆಯಾಗಿರಬಹುದು ಅಥವಾ ಮಾರುಕಟ್ಟೆ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವ ಕಾರಣ ಹೆಚ್ಚಾಗಿರಲೂಬಹುದು. ಇದೇ ವೇಳೆ ಮುಂದಿನ ವಾರವೂ ರಾಜ್ಯೋತ್ಸವ, ಮೊಹರಂ ಸೇರಿದಂತೆ ಮೂರು ದಿನ ರಜೆ ಇರುವ ಕಾರಣ ಯಾವ ರೀತಿ ಬೇಕಾದರೂ ಬದಲಾವಣೆ ಆಗಬಹುದು. ಇನ್ನು ಎರಡು ವಾರಗಳ ಕಾಲ ಬಹಳಷ್ಟು ಜಾಗೃತೆಯಿಂದ ಇರಬೇಕು'' ಎನ್ನುತ್ತಾರೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್. ಬೆಂಗಳೂರಿನಲ್ಲೇ 64% ಸಕ್ರಿಯ ಕೇಸ್! ರಾಜ್ಯದಲ್ಲಿರುವ 75,423 ಸಕ್ರಿಯ ಪ್ರಕರಣಗಳ ಪೈಕಿ ಶೇ.65ರಷ್ಟು (49,224) ಬೆಂಗಳೂರಿನಲ್ಲೇ ಇವೆ. ಜತೆಗೆ ಗುಣಮುಖರ ಪ್ರಮಾಣವೂ ಹೆಚ್ಚುತ್ತಿದೆ. ರಾಜ್ಯದ ಬೇರಾವುದೇ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಸೋಂಕು ಹರಡುವಿಕೆ ಸಾಧ್ಯತೆಗಳು ಹೆಚ್ಚಾಗಿವೆ. ರಾಜ್ಯದ 20 ಜಿಲ್ಲೆಗಳಲ್ಲಿ 1 ಸಾವಿರಕ್ಕಿಂತ ಕಡಿಮೆ ಸಕ್ರಿಯ ಕೇಸ್ಗಳಿವೆ.
from India & World News in Kannada | VK Polls https://ift.tt/2J9Pab3