ಫಾಲಲೋಚನ ಆರಾಧ್ಯ ಚಾಮರಾಜನಗರ ಚಾಮರಾಜನಗರ: ಈವರೆಗೆ ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಪೈಕಿ ಮಧುಮೇಹ, ರಕ್ತದೊತ್ತಡ ಹಾಗೂ ಬೊಜ್ಜು ಸೇರಿದಂತೆ ಇತರೆ ಕಾಯಿಲೆಗಳನ್ನು ಹೊಂದಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ ಈ ಪೈಕಿ ಬಹುತೇಕ ಮಂದಿಗೆ ಸೋಂಕು ತಗುಲಿದ ನಂತರವೂ ವಿಳಂಬವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಕೋವಿಡ್ಗೆ ಬಲಿಯಾಗಿದ್ದಾರೆ ಎಂಬ ಜಿಲ್ಲಾ ಕೋವಿಡ್ ಆಸ್ಪತ್ರೆಯ ವರದಿಯಿಂದ ತಿಳಿದು ಬಂದಿದೆ. ಜಿಲ್ಲೆಯಲ್ಲಿ ಕೋವಿಡ್ ಕಾರಣಕ್ಕಾಗಿ ಈವರೆಗೆ (ಅ.5) 99 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಈವರೆಗಿನ ಒಟ್ಟು ದೃಢೀಕೃತ (5,780) ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಮೃತರ ಸಂಖ್ಯೆ (ಶೇ.1.71)ರಷ್ಟಿದೆ. ಈ ಮೃತರಲ್ಲಿ ಬಹುತೇಕ ಮಂದಿ ಈಗಾಗಲೇ ಮಧುಮೇಹ, ರಕ್ತದೊತ್ತಡ ಹಾಗೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದವರು. ಇಂಥವರ ದೇಹಕ್ಕೆ ಕೊರೊನಾ ವೈರಸ್ ಪ್ರವೇಶಿಸಿದರೆ ಮಧುಮೇಹ ಹಾಗೂ ರಕ್ತದೊತ್ತಡ ಪ್ರಮಾಣದಲ್ಲಿ ಸಾಕಷ್ಟು ಏರುಪೇರಾಗುತ್ತದೆ. ಶ್ವಾಸಕೋಶವನ್ನು ವೈರಸ್ ಸೋಂಕಿಗೀಡು ಮಾಡುವುದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೊಜ್ಜು ಇರುವ ಮಂದಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತುಂಬ ಕಷ್ಟವಾಗಲಿದೆ. ಇನ್ನು ಬಿಪಿ, ಶುಗರ್ ಏರುಪೇರಾಗುವುದರಿಂದ ಅದು ಸಾವಿಗೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು. ಹೀಗಾಗಿ ಈಗಾಗಲೇ ಆರೋಗ್ಯ ಸಮಸ್ಯೆ ಇರುವ ಮಂದಿ ಕೋವಿಡ್ ವಿಚಾರದಲ್ಲಿ ಉಪೇಕ್ಷೆ ಮಾಡಬಾರದು ಎಂಬುದು ಅವರ ಸಲಹೆ. ಸೂಕ್ತ ಸಮಯದ ಚಿಕಿತ್ಸೆ ಅಗತ್ಯ ಕೋವಿಡ್-19ಗೆ ಯಾವುದೇ ಔಷಧ ಇಲ್ಲವಾದರೂ ಸೋಂಕು ಕಾಣಿಸಿಕೊಂಡ ವ್ಯಕ್ತಿಗೆ ಎದುರಾಗಿರುವ ಸಮಸ್ಯೆಗೆ ತಕ್ಕಂತೆ ವೈದ್ಯರು ಇದೀಗ ಚಿಕಿತ್ಸೆ ಕೊಡುತ್ತಿದ್ದಾರೆ. ಹೀಗಾಗಿ ಕೋವಿಡ್ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಲೇ ತಕ್ಷಣ ತಪಾಸಣೆಗೆ ಒಳಗಾಗಿ, ಆಸ್ಪತ್ರೆಗೆ ದಾಖಲಾದರೆ ಆಗುವ ಆಪಾಯದ ಪ್ರಮಾಣ ಕಡಿಮೆ. ಈವರೆಗೆ ಮೃತಪಟ್ಟಿರುವ 99 ಮಂದಿಯಲ್ಲಿ 23 ಮಂದಿ ಆಸ್ಪತ್ರೆಗೆ ದಾಖಲಾದ 24 ಗಂಟೆಯೊಳಗೆ ಮೃತಪಟ್ಟಿದ್ದಾರೆ. ಇದರರ್ಥ ಇವರೆಲ್ಲ ಸಾಕಷ್ಟು ವಿಳಂಬವಾಗಿ ದಾಖಲಾದವರು. ತೀವ್ರ ಜ್ವರ ಇದ್ದರೂ ಮನೆಯಲ್ಲೇ ಇದ್ದೂ ಉಸಿರಾಟದ ಸಮಸ್ಯೆ ಉಲ್ಬಣಗೊಂಡ ನಂತರ ಆಸ್ಪತ್ರೆಗೆ ದಾಖಲಾದವರು. 5 ಮಂದಿ 2 ದಿನದ ಬಳಿಕ, 8 ಮಂದಿ 4 ದಿನದ ಬಳಿಕ ಮೃತಪಟ್ಟವರಿದ್ದಾರೆ. ಅದೇ ರೀತಿ 10ರಿಂದ 18 ದಿನಗಳ ಬಳಿಕ 18 ಮಂದಿ ಮೃತಪಟ್ಟಿದ್ದು, ಇವರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಇನ್ನು 6 ಮಂದಿ ಮೃತಪಟ್ಟ ನಂತರ ಕೋವಿಡ್ ಇರುವುದು ಗೊತ್ತಾಗಿದೆ. ಇದಲ್ಲದೇ ಸೋಂಕಿದ್ದೂ ಸಹ ಕೋವಿಡೇತರ ಕಾರಣದಿಂದ 28 ಮಂದಿ ಜಿಲ್ಲೆಯಲ್ಲಿ ಮೃತರಾಗಿದ್ದಾರೆ ಎಂಬುದು ಗಮನಾರ್ಹ. ಹಿರಿಯರ ಬಗ್ಗೆ ಇರಲಿ ಕಾಳಜಿ ಇನ್ನು ಹಿರಿಯರು ಮನೆಯಲ್ಲಿದ್ದರೆ ಅವರ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು. ಇನ್ನು ವಯಸ್ಸು ಆಗಿ ಬಿಪಿ, ಶುಗರ್ ಇತರೆ ಆರೋಗ್ಯ ಸಮಸ್ಯೆಗಳು ಇದ್ದವರ ಬಗ್ಗೆಯಂತೂ ಸದಾ ನಿಗಾ ವಹಿಸುವುದು, ಹೆಚ್ಚು ಹೊರ ಓಡಾಟದಂತೆ ನೋಡಿಕೊಳ್ಳುವುದು ಹಾಗೂ ಅವರಿಂದ ಮನೆಯ ಇತರರು (ಹೊರ ಹೋಗುವ ಮಂದಿ) ಅಂತರ ಕಾಯ್ದುಕೊಳ್ಳುವುದು ಸಹ ಅಗತ್ಯ. ಈವರೆಗೆ ಕೋವಿಡ್ಗೆ ಬಲಿಯಾದವರ 99 ಮಂದಿಯ ಪೈಕಿ 56 ರಿಂದ 65 ವರ್ಷ ವಯೋಮಾನದವರೇ ಹೆಚ್ಚು. ಈ ವಯಸ್ಸಿನ 45 ಮಂದಿ ಮೃತಪಟ್ಟಿದ್ದಾರೆ. ಇನ್ನು 66ರಿಂದ 75 ವಯಸ್ಸಿನವರು 25 ಮಂದಿ, 76 ರಿಂದ 85ನೇ ವಯಸ್ಸಿನವರು 13 ಮಂದಿ ಮೃತರಾಗಿದ್ದಾರೆ. ಆದರೆ, ಅದೇ 25ರಿಂದ 35 ವಯಸ್ಸಿನವರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗಿದ್ದರೂ ಮೃತರ ಸಂಖ್ಯೆ ಕೇವಲ 3 ಹಾಗೂ 36ರಿಂದ 45 ವಯಸ್ಸಿನವರಲ್ಲಿ 6 ಮಂದಿ ಮೃತರಾಗಿದ್ದಾರೆ. ಆದ್ದರಿಂದ ವೃದ್ಧರ ಬಗ್ಗೆ ಕಾಳಜಿ ಅಗತ್ಯ. ಇನ್ನು ಮೃತರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು 65 ಮಂದಿ ಪುರುಷರು ಹಾಗೂ 34 ಮಂದಿ ಮಹಿಳೆಯರು ಕೋವಿಡ್ಗೆ ತುತ್ತಾಗಿದ್ದಾರೆ. ಕೋವಿಡ್ ವಿಚಾರದಲ್ಲಿ ಯಾರೂ ಸಹ ಉಪೇಕ್ಷೆ ಮಾಡಬಾರದು. ಅದರಲ್ಲೂ ಕೋಮಾರ್ಬಿಡಿಟಿಗಳು ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ. ಕೋವಿಡ್ನಿಂದ ಮೃತಪಟ್ಟವರಲ್ಲಿ ಅಂಥವರ ಸಂಖ್ಯೆ ಹೆಚ್ಚಿರುವುದರಿಂದ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಉತ್ತಮ. ಡಾ. ಮುರುಳೀಕೃಷ್ಟ, ಜಿಲ್ಲಾಸರ್ಜನ್
from India & World News in Kannada | VK Polls https://ift.tt/31J1Go8