ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಮಾಜಿ ಆಟಗಾರ ರವಿಶಾಸ್ತ್ರಿ ಪುನರಾಯ್ಕೆಯಾಗಿದ್ದಾರೆ. ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ರವಿಶಾಸ್ತ್ರಿ ಜತೆಗಿನ ಒಪ್ಪಂದವನ್ನು 2021ನೇ ಟ್ವೆಂಟಿ-20 ವಿಶ್ವಕಪ್ ವರೆಗೂ ಮುಂದುವರಿಸಿತ್ತು. ಏತನ್ಮಧ್ಯೆ 2017ರಲ್ಲಿ ಕೋಚ್ ಹುದ್ದೆಯ ರೇಸ್ನಲ್ಲಿ ರವಿಶಾಸ್ತ್ರಿ ಅವರಿಗೆ ಮಾಜಿ ಡ್ಯಾಶಿಂಗ್ ಓಪನರ್ ನಿಕಟ ಸ್ಪರ್ಧೆ ಒಡ್ಡಿದ್ದರು. ಆದರೆ ಈ ಬಾರಿ ಅರ್ಜಿ ಸಲ್ಲಿಸದಿರುವ ಮೂಲಕ ಸ್ಪರ್ಧಾ ಕಣದಿಂದಲೇ ದೂರವುಳಿದಿದ್ದರು. ಈ ಬಗ್ಗೆ ಕೇಳಿದಾಗ ಸ್ಪಷ್ಟನೆ ನೀಡಿರುವ ಸೆಹ್ವಾಗ್, 2017ರಲ್ಲಿ ಬಿಸಿಸಿಐ ಕಾರ್ಯದರ್ಶಿ ಆಗಿರುವ ದಿವಂಗತ ಡಾ ಎಂವಿ ಶ್ರೀಧರ್ ನನ್ನ ಬಳಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ ಈ ಬಾರಿ ಯಾರೂ ಕೂಡಾ ಸಲಹೆ ಮಾಡಿಲ್ಲ. ಅದಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಚುಟುಕಾಗಿ ಉತ್ತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ಅನಿಲ್ ಕುಂಬ್ಳೆ ಪೈಕಿ ಯಾರು ಉತ್ತಮ ರಾಷ್ಟ್ರೀಯ ಆಯ್ಕೆಗಾರರಾಗಬಲ್ಲರು ಎಂಬುದನ್ನು ಕೇಳಿದಾಗ, ಜಂಬೋ ಅವರನ್ನು ಆಯ್ಕೆ ಮಾಡುವುದಾಗಿ ತಿಳಿಸಿದರು. ಕುಂಬ್ಳೆ ನಾಯಕರಾಗಿದ್ದಾಗ, ನನ್ನ ಬಳಿ ಬಂದು ನಿಮ್ಮಿಷ್ಟದಂತೆ ಬ್ಯಾಟ್ ಮಾಡು ಹೋಗು, ಮುಂದಿನ ಎರಡು ಸರಣಿಗಳ ವರೆಗೆ ಕೈಬಿಡಲಾರೆ ಎಂಬ ಭರವಸೆ ನೀಡಿದ್ದರು ಎಂದು ನೆನಪಿಸಿಕೊಂಡರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33R9PGQ