ಹೊಸದಿಲ್ಲಿ: ಅರುಣ್ ಜೇಟ್ಲಿ ಈಗ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ಆದರೆ ಅವರು ಮಾಡಿರುವ ಕೆಲವು ಕಾರ್ಯಗಳು ಇತಿಹಾಸವನ್ನೇ ಸೃಷ್ಟಿಸಿವೆ. ಅರುಣ್ ಜೇಟ್ಲಿ ಎಂದರೆ ಎಲ್ಲರಿಗೂ ವೈಟ್ ಕಾಲರ್ ರಾಜಕಾರಣಿ ಎಂದೇ ನೆನಪಿಗೆ ಬರುತ್ತದೆ. ಆದರೆ ಯಾರಿಗೂ ಗೊತ್ತಿಲ್ಲದ ವಿಷಯ ಎಂದರೆ ಅರುಣ್ ಜೇಟ್ಲಿ ಹಿಂದೂವಾದಿ. ಸಂಘದ ಕಾರ್ಯಕರ್ತರಂತೆ ಚಡ್ಡಿ ಧರಿಸಿ, ಕೋಲು ಹಿಡಿದು ಶಾಖೆಗೆ ಹೋಗದಿದ್ದರೂ ಅರುಣ್ ಜೇಟ್ಲಿಯಲ್ಲಿ ದೇಶಭಕ್ತಿ ಮೈಗೂಡಿತ್ತು. ಈ ಕಾರಣದಿಂದಾಗಿಯೇ ಮತ್ತು ಮೋದಿ ನಡುವಿನ ಜುಗಲ್ ಬುಂದಿ ಜೋರಾಗಿಯೇ ಸಾಗಿತ್ತು. ಬಿಜೆಪಿ ಪಾಲಿನ ಟ್ರಬಲ್ ಶೂಟರ್ ಆಗಿದ್ದರೂ ಅರುಣ್ ಜೇಟ್ಲಿ ನರೇಂದ್ರ ಮೋದಿಯ ಮೆಂಟರ್ ಕೂಡ ಎನ್ನಬಹುದು. ಏಕೆಂದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಮೋದಿ ಮೇಲೆ ಅರುಣ್ ಜೇಟ್ಲಿ ಕಣ್ಣಿತ್ತು. ರಾಷ್ಟ್ರ ರಾಜಕಾರಣಕ್ಕೆ ಮೋದಿಯನ್ನು ತರಬೇಕೆಂದು ಅಂದಿನಿಂದಲೇ ಸ್ಕೆಚ್ ಹಾಕಿದ್ದರು ಅರುಣ್ ಜೇಟ್ಲಿ. ಮೋದಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಘೋಷಣೆ ಮಾಡುವ ಹಿಂದಿನ ಪ್ರೇರಕ ಶಕ್ತಿಯಾಗಿದ್ದೇ ಅರುಣ್ ಜೇಟ್ಲಿ. ಇದು ಬಿಜೆಪಿ ಹಿರಿಯರಿಗೆ ರುಚಿಸದಿದ್ದರೂ ಅರುಣ್ ಲೆಕ್ಕಾಚಾರವೇ ಬೇರೆಯದ್ದಾಗಿತ್ತು. ನರೇಂದ್ರ ಮೋದಿ ಸರಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಅರುಣ್ ಜೇಟ್ಲಿ ಹಣಕಾಸು ಸಚಿವರಾದರು. ಸಾಮಾನ್ಯವಾಗಿ ಸರಕಾರದಲ್ಲಿ ಗೃಹ ಸಚಿವರು ನಂಬರ್ 2 ಆಗಿರುತ್ತಾರೆ. ಮೋದಿ ಸಂಪುಟದಲ್ಲಿ ಜೇಟ್ಲಿಗೆ ಜೈ ಎನ್ನಲಾಗಿತ್ತು. ಮೋದಿ ಕೈಗೊಂಡ ಹಲವಾರು ಆರ್ಥಿಕ ಸುಧಾರಣೆ ಕ್ರಮಗಳ ಹಿಂದೆ ಅರುಣ್ ಜೇಟ್ಲಿ ಬ್ರೇನ್ ವರ್ಕ್ ಮಾಡಿದೆ. ನೋಟು ಬ್ಯಾನ್, ಜನ್ಧನ್ ಯೋಜನೆ, ಜಿಎಸ್ಟಿ, ಬೇನಾಮಿ ಆಸ್ತಿ ಕಾಯಿದೆ ಹೀಗೆ ಹಲವಾರು ಕ್ರಮಗಳು ಮೋದಿಯಿಂದ ಘೋಷಣೆಯಾದರೂ ಇದರ ಹಿಂದಿನ ದನಿಯಾಗಿದ್ದ ಅರುಣ್ ಜೇಟ್ಲಿ. ಇನ್ನು ಕಾನೂನು ಪಟ್ಟುಗಳನ್ನು ಅರಿದು ಕುಡಿದಿದ್ದ ಜೇಟ್ಲಿ, ಸರಕಾರವನ್ನು ಕಾನೂನಿನ ಇಕ್ಕಟ್ಟಿನಿಂದ ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ರಾಫೇಲ್ ಹಗರಣ ಸಂಬಂಧ ಸರಕಾರಕ್ಕೆ ಗುರಾಣಿಯಾಗಿದ್ದವರ ಪೈಕಿ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್ ಇದ್ದರು. ಈ ಮೊದಲು ಬಿಜೆಪಿಯ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದವರು ಪ್ರಮೋದ್ ಮಹಾಜನ್. ಎಲ್ಲ ಪಕ್ಷಗಳೊಂದಿಗೆ ಪ್ರಮೋದ್ ಮಹಾಜನ್ ಉತ್ತಮ ಸಂಬಂಧ ಹೊಂದಿದ್ದರು. ಅವರ ನಿಧನದ ನಂತರ ಆ ಜಾಗವನ್ನು ಸಮರ್ಥವಾಗಿ ತುಂಬಿದ್ದು ಅರುಣ್ ಜೇಟ್ಲಿ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿಯೇ ಅರುಣ್ ಜೇಟ್ಲಿ ಬಿಜೆಪಿಯ ಪಾಲಿಗೆ ಟ್ರಬಲ್ ಶೂಟರ್, ಮೋದಿಯ ಪಾಲಿಗೆ ಮೆಂಟರ್!
from India & World News in Kannada | VK Polls https://ift.tt/2ziGSFx