ಹೊಸದಿಲ್ಲಿ: ಬಿಜೆಪಿಯ ಚಾಣಾಕ್ಷ ರಾಜಕಾರಣಿಯಾಗಿದ್ದ ಅರುಣ್ ಜೇಟ್ಲಿ ಎಂದಿಗೂ ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿರಲಿಲ್ಲ. ಅಧಿಕಾರಕ್ಕಾಗಿ ಹಾತೊರೆಯುವ ರಾಜಕಾರಣಿಗಳಿಗೂ ಅರುಣ್ ಜೇಟ್ಲಿಗೂ ಭಾರಿ ವ್ಯತ್ಯಾಸ ಇತ್ತು. ಅನಾರೋಗ್ಯದ ಸ್ಥಿತಿಯಿಂದಾಗಿ ಅಧಿಕಾರ ಬೇಡ ಎಂದು ಸ್ವತಃ ಅರುಣ್ ಜೇಟ್ಲಿ ಅವರೇ ಇತ್ತೀಚೆಗೆ ಪ್ರಧಾನಿ ನರೇಂದರ್ ಮೋದಿಗೆ ಪತ್ರ ಬರೆದಿದ್ದರು. ಅನಾರೋಗ್ಯದ ಕಾರಣ ಮುಂದಿಟ್ಟು ಹಾಲಿ ವಿತ್ತ ಸಚಿವ ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಡಬೇಕೆಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಈ ಕುರಿತು, ಪ್ರಧಾನಿ ಅವರಿಗೆ, ಪತ್ರ ಬರೆದಿದ್ದ ಅವರು ಸದ್ಯಕ್ಕೆ ನನ್ನನ್ನು ಮಂತ್ರಿ ಮಂಡಲದಲ್ಲಿ ಸೇರ್ಪಡೆಗೊಳಿಸದಿರಿ. ನನಗಾಗಿ, ನನ್ನ ಆರೋಗ್ಯ ಮತ್ತು ಚಿಕಿತ್ಸೆಗಾಗಿ ಸಮಯ ಬೇಕಿದೆ, ಎಂದು ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಅರುಣ್ ಜೇಟ್ಲಿ ಮೇ 29ರಂದು ಟ್ವೀಟ್ ಕೂಡ ಮಾಡಿದ್ದರು. ಈ ಟ್ವೀಟ್ನಲ್ಲಿ ಮೋದಿಗೆ ಬರೆದ ಪತ್ರವನ್ನು ಜೇಟ್ಲಿ ಹಾಕಿದ್ದರು. ಲೋಕಸಭಾ ಚುನಾವಣೆಗೂ ಮುನ್ನವೇ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅಮೆರಿಕಾದಲ್ಲಿ ಕೂಡ ಚಿಕಿತ್ಸೆ ಪಡೆದಿದ್ದರು. ಆಗ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಸರಕಾರದ ಕೊನೆಯ ಬಜೆಟನ್ನು ಪಿಯೂಷ್ ಗೋಯಲ್ ಮಂಡಿಸಿದ್ದರು. ಹೊಸದಿಲ್ಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ವಿವಿಧ ಪರೀಕ್ಷೆಗಳಿಗೆ ಒಳಪಟ್ಟಿದ್ದರು. ಆದರೆ ಅವರ ಆರೋಗ್ಯ ಸಮಸ್ಯೆ ಏನೆಂಬುದು ಬಹಿರಂಗವಾಗಿಲ್ಲ. ಗುರುವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಆ ಸಂಜೆ ಲೋಕಸಭೆ ಚುನಾವಣೆಯಲ್ಲಿ ಅಮೋಘ ಜಯಭೇರಿ ಭಾರಿಸಿದ ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿರಲಿಲ್ಲ. ಈಗ ಅರುಣ್ ಜೇಟ್ಲಿ ತಮ್ಮ ಜೀವನದ ಯಾತ್ರೆ ಮುಗಿಸಿದ್ದಾರೆ. ಆದರೆ ಬಿಜೆಪಿ ಪಾಲಿಗೆ ಇದು ನಿಜಕ್ಕೂ ಭಾರಿ ನಷ್ಟವೇ ಸರಿ.
from India & World News in Kannada | VK Polls https://ift.tt/2NzMTpw