ಹೆಂಡ್ತಿಯನ್ನು ಕೊಂದು 5 ವರ್ಷ ನೆಮ್ಮದಿಯಾಗಿದ್ದ ಗಂಡ: ವೋಟರ್ ಐಡಿ ಕಾರ್ಡ್ ಕೊಡ್ತು ಸುಳಿವು..!

ಮಂಡ್ಯ: ಪತ್ನಿಯನ್ನು ಮಾಡಿ ಆರಾಮವಾಗಿ ಓಡಾಡಿಕೊಂಡಿದ್ದ ಆರೋಪಿ, 5 ವರ್ಷಗಳ ಬಳಿಕ ಪೊಲೀಸರ ಅತಿಥಿಯಾಗಿದ್ದಾನೆ. ಪಾಂಡವಪುರ ತಾಲೂಕು ತಿರುಮಲಾಪುರ ಗ್ರಾಮದ ಕುಮಾರ್‌ ಎಂಬುವರ ಪುತ್ರ ಟಿ.ಕೆ.ಸ್ವಾಮಿ ಬಂಧಿತ ಆರೋಪಿ. ಅನುಮಾನಾಸ್ಪದ ಕೊಲೆ ಪ್ರಕರಣವೊಂದು ದಾಖಲಾದ ಒಂದೇ ತಿಂಗಳಲ್ಲಿ ಆರೋಪಿಯು ಪೊಲೀಸರ ಅತಿಥಿಯಾಗಿದ್ದಾನೆ. ಆರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಆರೋಪಿಯು, ಮದುವೆಯಾದ ವರ್ಷದಲ್ಲೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದನು. ಆದರೆ, ಮನೆ ಬಿಟ್ಟು ಪ್ರೇಮಿಯೊಂದಿಗೆ ತೆರಳಿದ್ದ ಯುವತಿಯ ಬಗ್ಗೆ ಹೆತ್ತವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ನಾಲೆಯಲ್ಲಿ ಬಿಸಾಡಿದ್ದ ಆರೋಪಿ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದ..! ಐದು ವರ್ಷಗಳ ಬಳಿಕ ಆತನ ಕೃತ್ಯವನ್ನು ಒಂದು ವೋಟರ್‌ ಕಾರ್ಡ್‌ ಬಯಲು ಮಾಡಿದೆ..! ಬೀರುವಿನಲ್ಲಿ ಯಾರಿಗೂ ಬೇಡವಾಗಿ ಬಿದ್ದಿದ್ದ ಆರೋಪಿಯ ಮತದಾರರ ಚೀಟಿಯು ಮೃತ ಯುವತಿಯ ತಾಯಿ ಮಹದೇವಮ್ಮಗೆ ಸಿಕ್ಕಿದೆ. ಅವರು ತಿರುಮಲಾಪುರ ಗ್ರಾಮಕ್ಕೆ ತೆರಳಿ ವಿಚಾರಿಸಿದಾಗ ಮೇಘಶ್ರೀ ಸಾವಿಗೀಡಾಗಿರುವುದನ್ನು ಗ್ರಾಮಸ್ಥರು ತಿಳಿಸಿದ್ದರು. ಆಘಾತಕ್ಕೊಳಗಾದ ಮಹದೇವಮ್ಮ ಅಕ್ಟೋಬರ್ 20ರಂದು ಪಾಂಡವಪುರ ಪೊಲೀಸ್‌ ಠಾಣೆಗೆ ತೆರಳಿ, ತಮ್ಮ ಮಗಳ ಕೊಲೆ ಬಗ್ಗೆ ದೂರು ನೀಡಿದ್ದರು. ಈ ಜಿಲ್ಲಾದ್ಯಂತ ಸದ್ದು ಮಾಡಿತ್ತು. ಮಹಿಳಾ ಹಾಗೂ ದಲಿತಪರ ಸಂಘಟನೆಗಳ ಕಾರ‍್ಯಕರ್ತರು ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪಾಂಡವಪುರ ಪೊಲೀಸರು, ಒಂದು ತಿಂಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇರೆ ಬೇರೆ ಜಾತಿಯವರಾದ ಮೇಘಶ್ರೀ-ಸ್ವಾಮಿ ಪರಸ್ಪರ ಪ್ರೀತಿಸಿ 2014ರಲ್ಲಿ ಬೆಂಗಳೂರಿನ ದೇವಾಲಯವೊಂದರಲ್ಲಿ ವಿವಾಹವಾಗಿದ್ದರು. ಬಳಿಕ ಆರು ತಿಂಗಳು ಆರ್‌.ಆರ್‌.ನಗರ, ಬ್ಯಾಡರಹಳ್ಳಿ ಹಾಗೂ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರ ನಡುವೆ ವೈಮನಸ್ಯ ಸೃಷ್ಟಿಯಾಗಿ ಪರಸ್ಪರ ಜಗಳವಾಡುತ್ತಿದ್ದರು. ಪತ್ನಿಯನ್ನು ತೊರೆದ ಸ್ವಾಮಿ, ಸ್ವಗ್ರಾಮ ಪಾಂಡವಪುರ ತಾಲೂಕು ತಿರುಮಲಾಪುರಕ್ಕೆ ಬಂದಿದ್ದನು. ಕೆಲವು ದಿನಗಳ ನಂತರ ತಿರುಮಲಾಪುರಕ್ಕೆ ಬಂದ ಮೇಘಶ್ರೀ, ತನ್ನನ್ನು ರಿಜಿಸ್ಟರ್‌ ಮದುವೆ ಮಾಡಿಕೊಂಡು ತನ್ನೊಂದಿಗೆ ಇರುವಂತೆ ಒತ್ತಾಯಿಸಿದ್ದರು. ಆಗ ಮತ್ತೆ ಜಗಳವಾಗಿತ್ತು. ಈ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿಯು ಮೇಘಶ್ರೀಯನ್ನು 2015ರ ಮಾರ್ಚ್‌ 22ರಂದು ಪಾಂಡವಪುರ ತಾಲೂಕಿನ ಬನಘಟ್ಟ ಗೇಟ್‌ ಬಳಿಯ ವಿಸಿ ನಾಲೆ ಬಳಿಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ನಾಲೆಯಲ್ಲಿ ಎಸೆದಿದ್ದ. ಮೇಘಶ್ರೀ ಕಾಣೆಯಾಗಿರುವ ಅಥವಾ ಸಾವಿನ ಬಗ್ಗೆ ಯಾರೂ ದೂರು ನೀಡಿರಲಿಲ್ಲ. ಹೀಗಾಗಿ ನಾಲೆಯಲ್ಲಿ ಸಿಕ್ಕ ಮೇಘಶ್ರೀ ಶವವನ್ನು 'ಅಪರಿಚಿತ ಮಹಿಳೆ ಸಾವು' ಪ್ರಕರಣ ದಾಖಲಿಸಿಕೊಂಡು ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದರು. ಮೇಘಶ್ರೀಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನವೆಂಬರ್ 9ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ಕೋರ್ಟ್‌ ಅನುಮತಿ ಪಡೆದು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಕೆ.ಪರಶುರಾಮ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/371RVmS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...