ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ರದರ್ಶಿಸಲಾಗಿರುವ ಗೋಡೆ ಬರಹ ಜಾಹೀರಾತುಗಳನ್ನು ತೆರವುಗೊಳಿಸಿ, ಸಂಬಂಧಪಟ್ಟವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲು ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್ಗಳಿಗೆ ಸೂಚಿಸಲಾಗಿದೆ. ನಗರದ ಹಲವೆಡೆ 'ಬಿಬಿಎಂಪಿ ಹೊರಾಂಗಣ ಮತ್ತು ಸಾರ್ವಜನಿಕ ಸಂದೇಶ ಬೈಲಾ' ಉಲ್ಲಂಘಿಸಿ ಅಕ್ರಮವಾಗಿ ಗೋಡೆ ಬರಹದ ಜಾಹೀರಾತು ಪ್ರದರ್ಶಿಸುತ್ತಿರುವ ಕುರಿತು 'ವಿಜಯ ಕರ್ನಾಟಕ' ನ. 15ರಂದು 'ಹೋರ್ಡಿಂಗ್ಸ್ ಹೋಯ್ತು, ಗೋಡೆ ಬರಹ ಬಂತು' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ, ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಗೋಡೆ ಬರಹ ಮತ್ತು ಇನ್ನಿತರೆ ಜಾಹೀರಾತುಗಳನ್ನು ಅಳವಡಿಸಿರುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ಜಾಹೀರಾತು ಬೈಲಾ ಉಪವಿಧಿಗಳಲ್ಲಿ ಹೊರಾಂಗಣ ಜಾಹೀರಾತುಗಳನ್ನು ಯಾವುದೇ ಖಾಸಗಿ ಸ್ವತ್ತುಗಳು, ಸಾರ್ವಜನಿಕ ಸ್ಥಳಗಳಲ್ಲಿ ಪ್ರಚುರಪಡಿಸಲು ಅವಕಾಶ ನೀಡಿಲ್ಲ. ಹಾಗಾಗಿ, ಪಾಲಿಕೆಯ ಎಲ್ಲ ವಲಯ ಮಟ್ಟದ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ವಾರ್ಡ್ಗಳಲ್ಲಿ ಸಮೀಕ್ಷೆ ಕೈಗೊಂಡು ಗೋಡೆಬರಹ ಅಥವಾ ಇನ್ನಿತರೆ ಯಾವುದೇ ಅನಧಿಕೃತ ಜಾಹೀರಾತುಗಳನ್ನು ಅಳವಡಿಸಿದ್ದಲ್ಲಿ ನಿಯಮಾನುಸಾರ ದಂಡ ವಿಧಿಸಿ, ತಕ್ಷಣವೇ ತೆರವುಗೊಳಿಸಬೇಕು. ಹಾಗೆಯೇ, ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯಿದೆ- 1981ರ ನಿಯಮದಡಿ ಸಂಬಂಧಪಟ್ಟ ಸ್ವತ್ತಿನ ಮಾಲೀಕರು ಹಾಗೂ ಗೋಡೆಬರಹ ಪ್ರದರ್ಶಿಸಿದವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ಪಾಲಿಕೆಯ ಜಾಹೀರಾತು ವಿಭಾಗದ ಜಂಟಿ ಆಯುಕ್ತರು ಆದೇಶಿಸಿದ್ದಾರೆ. ನಗರದಲ್ಲಿ ಯಾವುದೇ ಅನಧಿಕೃತ ಜಾಹೀರಾತುಗಳು ಪ್ರದರ್ಶನವಾಗದಂತೆ ಕ್ರಮ ವಹಿಸಬೇಕು. ಒಂದೊಮ್ಮೆ ಇಂಥ ಪ್ರಕರಣಗಳು ಮರುಕಳಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಗೋಡೆ ಬರಹ ಜಾಹೀರಾತುಗಳನ್ನು ತೆರವುಗೊಳಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಹೈಕೋರ್ಟ್ ಚಾಟಿ ಬಳಿಕ ಹೋರ್ಡಿಂಗ್ಗೆ ಬಿದ್ದಿತ್ತು ಕಡಿವಾಣ 2018ರ ಆ.1ರಂದು ಹೈಕೋರ್ಟ್ ಬೀಸಿದ ಚಾಟಿ ಬಳಿಕ ನಗರದಲ್ಲಿ ಶೇ. 50ರಷ್ಟು ಜಾಹೀರಾತು ಎತ್ತಂಗಡಿಯಾಗಿದ್ದವು. ಸಾರ್ವಜನಿಕ ಸ್ಥಳದಲ್ಲಿದ್ದ ಅನಧಿಕೃತ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್, ಹೋರ್ಡಿಂಗ್ಗಳನ್ನು ಕಿತ್ತೆಸೆಯಲಾಗಿತ್ತು. ಬಳಿಕ ಪಾಲಿಕೆಯು ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ನೀತಿ ಬೈಲಾ ರೂಪಿಸಿ ಜಾರಿಗೊಳಿಸಿತ್ತು. ಇದರಿಂದಾಗಿ ನಗರದಲ್ಲಿ ಹೋರ್ಡಿಂಗ್, ಫ್ಲೆಕ್ಸ್ಗೆ ಕಡಿವಾಣ ಬೀಳುವಂತಾಗಿತ್ತು. ಆದರೆ, ಜಾಹೀರಾತು ಏಜೆನ್ಸಿಗಳ ಕುಮ್ಮಕ್ಕಿನೊಂದಿಗೆ ಇತ್ತೀಚಿನ ದಿನಗಳಲ್ಲಿ ಗೋಡೆ ಬರಹ ರಾರಾಜಿಸುವಂತಾಗಿತ್ತು. ರಸ್ತೆಯ ಆಜುಬಾಜಿನ ಕಾಂಪೌಂಡ್, ಕಟ್ಟಡಗಳ ಗೋಡೆ ಮೇಲೆ ಸಿಮೆಂಟ್, ಸ್ಟೀಲ್ ಸೇರಿದಂತೆ ನಾನಾ ಉತ್ಪನ್ನಗಳ ಜಾಹೀರಾತು ಅಳವಡಿಸಲಾಗಿತ್ತು. ಇದರಿಂದ ನಗರದ ಅಂದಕ್ಕೆ ಧಕ್ಕೆ ಬರುವಂತಾಗಿತ್ತು.
from India & World News in Kannada | VK Polls https://ift.tt/2IPqkxu