ಐಪಿಎಲ್‌ನಲ್ಲಿ ಕನಿಷ್ಠ 4-5 ವರ್ಷ ಆಡಲಿದ್ದೇನೆ ಎಂದ ಸುರೇಶ್‌ ರೈನಾ!

ಹೊಸದಿಲ್ಲಿ: ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರಬರಲು ಮುಖ್ಯ ಕಾರಣ ಏನೆಂಬುದನ್ನು ಇದೀಗ ಬಾಯ್ಬಿಟ್ಟಿದ್ದಾರೆ. ತಮ್ಮ ಕುಟುಂಬದ ಮೇಲಿನ ಕಾಳಜಿ ಸಲುವಾಗಿಯೇ ತಾವು ಐಪಿಎಲ್‌ 2020 ಟೂರ್ನಿ ತೊರೆದು ಕೂಡಲೇ ಮನೆಗೆ ಹಿಂದಿರುಗಿದ್ದಾಗಿ ಹೇಳಿದ್ದಾರೆ. "ಇದು ಸಂಪೂರ್ಣ ನನ್ನ ವೈಯಕ್ತಿಕ ನಿರ್ಧಾರ. ನನ್ನ ಕುಟುಂಬದ ಜೊತೆಗಿರುವ ಅವಶ್ಯಕತೆಯಿತ್ತು. ತಂಡವೂ ನನ್ನ ಕುಟುಂಬದಂತೆ. ಮಾಹಿ ಭಾಯ್‌ ನನಗೆ ಬಹಳ ಮುಖ್ಯ. ಹೀಗಾಗಿ ಐಪಿಎಲ್‌ನಿಂದ ಹೊರಬರುವ ನಿರ್ಧಾರ ಬಹಳ ಕಠಿಣವಾಗಿತ್ತು. ನನ್ನ ಮತ್ತು ಸಿಎಸ್‌ಕೆ ನಡುವೆ ಯಾವುದೇ ತಕರಾರಿಲ್ಲ," ಎಂದು ಸಿಎಸ್‌ಕೆ ಪರ ಗರಿಷ್ಠ ರನ್‌ ಸ್ಕೋರರ್‌ ಆಗಿರುವ ರೈನಾ ಕ್ರಿಕ್‌ಬಝ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಸೂಪರ್ ಕಿಂಗ್ಸ್‌ ತಂಡದ ಟೀಮ್‌ ಮ್ಯಾನೇಜ್ಮೆಂಟ್ ಮತ್ತು 33 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ನಡುವೆ ಹೋಟೆಲ್‌ ರೂಮ್‌ ವಿಚಾರವಾಗಿ ಗಲಾಟೆ ನಡೆದಿದೆ. ಕ್ಯಾಪ್ಟನ್ ಎಂಎಸ್‌ ಧೋನಿ ಮತ್ತು ರೈನಾ ನಡುವೆ ವೈಮನಸ್ಸು ಮೂಡಿದೆ. ಹೀಗೆ ಹಲವಾರು ಊಹಾ ಪೋಹಗಳು ತಲೆಯೆತ್ತಿದ್ದವು. ಆದರೀಗ ಎಲ್ಲಾ ಊಹೆಗಳಿಗೆ ರೈನಾ ಖುದ್ದಾಗಿ ತೆರೆ ಎಳೆದಿದ್ದಾರೆ. ಮುಂದಿನ 4-5 ವರ್ಷ ಆಡುವ ಬಯಕೆಐಪಿಎಲ್‌ನಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ರೈನಾ ಬರೋಬ್ಬರಿ 10 ಆವೃತ್ತಿಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ 4-5 ವರ್ಷಗಳ ವರೆಗಾದರೂ ತಂಡದಲ್ಲಿ ತಮ್ಮ ಆಟ ಮುಂದುವರಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. "ಯಾರೊಬ್ಬರು ಕೂಡ 12.5 ಕೋಟಿ ರೂ.ಗಳ ಭಾರಿ ಮೊತ್ತಕ್ಕೆ ಬೆನ್ನು ತೋರಿಸುವುದಿಲ್ಲ. ಅಂತಹ ಕಠಿಣ ನಿರ್ಧಾರಕ್ಕೆ ಬರಬೇಕಾದರೆ ಬಲವಾದ ಕಾರಣ ಇರಲೇ ಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಾನು ನಿವೃತ್ತಿ ಆಗಿರಬಹುದು. ಆದರೆ, ನನ್ನಲ್ಲಿನ್ನೂ ವಯಸ್ಸಿದೆ. ಹೀಗಾಗಿ ಸಿಎಸ್‌ಕೆ ತಂಡದ ಪರ ಮುಂದಿನ 4-5 ವರ್ಷಗಳ ಕಾಲ ಆಡುವುದನ್ನು ಎದುರು ನೋಡುತ್ತಿದ್ದೇನೆ," ಎಂದು ವಿಶ್ವಾಸ ಹೊರಹಾಕಿದ್ದಾರೆ. "ನನ್ನ ಯುವ ಕುಟುಂಬ ಮನೆಯಲ್ಲಿದೆ. ನನಗೇನಾದರೂ ಆದರೆ ಎಂಬ ಅವರ ಗತಿಯೇನು ಎಂಬ ಭಯ ನನ್ನನ್ನು ಆವರಿಸಿತ್ತು. ನನಗೆ ನನ್ನ ಕುಟುಂಬವೇ ಮುಖ್ಯ. ಈ ಎರಡು ವಾರಗಳಲ್ಲಿ ಅವರ ಬಗ್ಗೆ ಬಹಳ ಚಿಂತೆಯಾಗಿತ್ತು. ಭಾರತಕ್ಕೆ ಬಂದ ಬಳಿಕವೂ ನನ್ನ ಮಕ್ಕಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಏಕೆಂದರೆ ಕ್ವಾರಂಟೈನ್‌ನಲ್ಲಿ ಇದ್ದೇನೆ," ಎಂದು ರೈನಾ ವಿವರಿಸಿದ್ದಾರೆ. ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ ಸುರೇಶ್‌ ರೈನಾ ಅವರ ಸೋದರತ್ತೆ ಮತ್ತು ಮಾವನ ಮನೆ ಮೇಲೆ ದರೋಡೆಕೋರರು ಆಗಸ್ಟ್‌ 19ರಂದು ದಾಳಿ ನಡೆಸಿದ್ದರು. ಘಟನೆಯಲ್ಲಿ ನಡೆದ ಹಲ್ಲೆಯಲ್ಲಿ ರೈನಾ ಅವರ ಮಾವ ಸ್ಥಳದಲ್ಲೇ ಮೃತಪಟ್ಟರೆ, ಅವರ ಕಸಿನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅತ್ತೆಯ ಸ್ಥಿತಿಯೂ ಚಿಂತಾಜನಕವಾಗಿದೆ. ‌ "ನನ್ನ ಕುಟುಂಬಕ್ಕೆ ಆಗಿರುವುದು ಅತ್ಯಂತ ಭಯಾನಕ್ಕಿಂತಲೂ ದೊಡ್ಡ ಸಂಗತಿ. ನನ್ನ ಮಾವನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ನನ್ನಿಬ್ಬರು ಕಸಿನ್‌ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದುರದೃಷ್ಟವಶಾತ್‌ ಕಳೆದ ರಾತ್ರಿ ನನ್ನ ಒಬ್ಬ ಕಸಿನ್‌ ಕೂಡ ಹಲವು ದಿನಗಳಿಂದ ಸಾವಿನ ವಿರುದ್ಧ ಹೋರಾಡಿ ತೀರಿಕೊಂಡಿದ್ದಾರೆ. ನನ್ನ ಅತ್ತೆಯ ಸ್ಥಿತಿ ಈಗಲೂ ಗಂಭೀರವಾಗಿದ್ದು, ಲೈಫ್‌ ಸಪೋರ್ಟ್‌ನಲ್ಲಿ ಇರಿಸಲಾಗಿದೆ," ಎಂದು ರೈನಾ ಮಂಗಳವಾರ ಬ್ಯಾಕ್‌ ಟು ಬ್ಯಾಕ್ ಟ್ವೀಟ್‌ ಮಾಡಿದ್ದರು. "ಈವರೆಗೆ ಆ ರಾತ್ರಿ ನಡೆದ ನೈಜ ಘಟನೆ ಏನೆಂಬುದು ಯಾರಿಗೂ ಗೊತ್ತಾಗಿಲ್ಲ. ಇಂತಹ ಅಮಾನವೀಯ ಕೆಲಸವನ್ನು ಯಾರು ಮಾಡಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಪಂಜಾಬ್‌ ಪೊಲೀಸ್‌ ಈ ಬಗ್ಗೆ ತನಿಖೆ ತೀವ್ರಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಈ ಕೃತ್ಯ ಮಾಡಿದವರು ಯಾರು ಎಂಬುದು ನಮಗೆ ಗೊತ್ತಾಗಬೇಕು. ಆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಮುಂದೆಂದೂ ಈ ರೀತಿಯ ಘಟನೆಗಳು ನಡೆಯಬಾರದು ಎಂಬ ರೀತಿಯಲ್ಲಿ ಶಿಕ್ಷೆ ಆಗಬೇಕು," ಎಂದು ರೈನಾ ತಮ್ಮ ಎರಡನೇ ಟ್ವೀಟ್‌ ಮೂಲಕ ಕೇಳಿಕೊಂಡಿದ್ದರು. ಆಗಸ್ಟ್‌ 15ರಂದು 74ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಟೀಮ್‌ ಇಂಡಿಯಾ ವೃತ್ತಿಬದುಕಿಗೆ ರೈನಾ ಗುಡ್‌-ಬೈ ಹೇಳಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bkjGc9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...