ಬೆಳಗಾವಿ: ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಅಡ್ಡಿಪಡಿಸುವ ಪರಿಪಾಠವನ್ನು ನಾಡದ್ರೋಹಿ ಮತ್ತೆ ಮುಂದುವರೆಸಿದೆ. ನಿರೀಕ್ಷೆಯಂತೆಯೇ ಕುಂದಾ ನಗರಿ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಮೆರೆದಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರೆ ನೀಡಿದ್ದ ಕರಾಳ ದಿನಕ್ಕೆ ಬೆಳಗಾವಿಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಹೀಗಿದ್ದರೂ, ಭಾನುವಾರ ಎಂಇಎಸ್ ಸದಸ್ಯರು ಸಭೆ ನಡೆಸುತ್ತಿದ್ದರು. ಈ ವಿಷಯ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಭೆಯನ್ನು ತಡೆಯಲು ಮುಂದಾದರು. ನಗರದ ಮರಾಠ ಮಂಗಲ ಕಾರ್ಯಾಲಯದಲ್ಲಿ ಎಂಇಎಸ್ ಮುಖಂಡರ ಸಭೆ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕಾರ್ಯಕರ್ತರು, ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರ ನೇತೃತ್ವದಲ್ಲಿ ಸಭೆ ತಡೆಯಲು ಮುಂದಾದರು. ನಗರದ ರೈಲ್ವೆ ಮೇಲ್ಸೇತುವೆ ಪ್ರವೇಶ ಮಾಡುತ್ತಿದ್ದ ಕರವೇ ಕಾರ್ಯಕರ್ತರನ್ನು ಅಡ್ಡಗಟ್ಟಿದ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ, ಸಮೀಪದ ಮರಾಠ ಮಂಗಲ ಕಾರ್ಯಾಲಯದಲ್ಲಿ ಸಭೆ ನಡೆಸುತ್ತಿದ್ದ ಎಂಇಎಸ್ ಮುಖಂಡರು ಸಭೆಯಿಂದ ಹೊರಬಂದರು. ಕನ್ನಡ ವಿರೋಧಿ ಘೋಷಣೆ ಕೂಗಿ ತಮ್ಮ ನಾಡದ್ರೋಹಿ ನಿಲುವನ್ನು ಎಂಇಎಸ್ ಮುಖಂಡರು ಹೊರ ಹಾಕಿದರು. ಮರಾಠ ಮಂಗಲ ಕಾರ್ಯಾಲಯದಲ್ಲಿ ನಡೆದ ಸಭೆ ವೇಳೆ ಮಾತನಾಡಿದ ಎಂಇಎಸ್ ಮುಖಂಡ ದೀಪಕ ದಳವಿ, ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಎಂಇಎಸ್ ಮೆರವಣಿಗೆಗೆ ಜಿಲ್ಲಾಡಳಿತದ ವತಿಯಿಂದ ಅನುಮತಿ ಸಿಕ್ಕಿಲ್ಲ. ಆದರೆ, ಮಹಾರಾಷ್ಟ್ರ ಸರಕಾರ ಮತ್ತು ಮರಾಠಿ ಜನರು ನಮಗೆ ಬೆಂಬಲ ಸೂಚಿಸಿದ್ದಾರೆ. ಇದನ್ನು ಎಂಇಎಸ್ ಸ್ವಾಗತಿಸುತ್ತದೆ. ಇದರಿಂದಾಗಿ ಕರ್ನಾಟಕ ಸರಕಾರಕ್ಕೆ ಭಯ ಹುಟ್ಟಿದೆ. ಮರಾಠಿ ಭಾಷಿಕರ ಮೇಲಾಗುತ್ತಿರುವ ಅನ್ಯಾಯ ತಡೆಯಬೇಕಿದೆ ಎಂದರು.
from India & World News in Kannada | VK Polls https://ift.tt/323ZCr5