ಸೂಲಿಬೆಲೆ: ಗಿಡ್ಡಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ವನಮನಹಳ್ಳಿ ಬಳಿರುವ ಖಾಸಾಗಿ ಜಮೀನುಗಳಲ್ಲಿ ದೊಡ್ಡ ಪ್ರಮಾಣದ ನಗರ ತ್ಯಾಜ್ಯವನ್ನು ಸಂಗ್ರಹಿಸಿ ಬೇರ್ಪಡಿಸುವ ಕೆಲಸ ಮಾಡುತ್ತಿದ್ದು ಇದರಿಂದ ಸುತ್ತಮುತ್ತಲ್ಲಿನ ಪರಿಸರಕ್ಕೆ ಹಾನಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಎಲ್ಲ ಹಂತದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸಾದಪ್ಪನಹಳ್ಳಿಯಲ್ಲಿ ಕೃಷಿ ಜಮೀನಿನಲ್ಲಿ ತ್ಯಾಜ್ಯ ಕಂಟಕ ಶೀರ್ಷಿಕೆಯಡಿ ವಿಕ ಅ. 24 ರಂದು ಪ್ರಕಟಿಸಿದ್ದ ವರದಿಯಿಂದ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ, ಸೂಲಿಬೆಲೆ ಹೋಬಳಿಯಲ್ಲಿ ಅಕ್ರಮವಾಗಿ ಈ ರೀತಿ ತ್ಯಾಜ್ಯವನ್ನು ಸಂಗ್ರಹಿಸಿ ಬೇರ್ಪಡಿಸುವ ಎಲ್ಲ ಘಟಕಗಳನ್ನು ಮುಚ್ಚುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಉಪತಹಶೀಲ್ದಾರ್ ಪ್ರಭಾಕರ್, ರಾಜಸ್ವ ನಿರೀಕ್ಷಕ ವಲ್ಲಿಜಾನ್, ಗ್ರಾಮಲೆಕ್ಕಾಧಿಕಾರಿಗಳಾದ ಜ್ಞಾನಮೂರ್ತಿ, ಲಕ್ಷ್ಮಣ್, ಅನುಪ್ ಸೇರಿದಂತೆ ಗ್ರಾಮ ಸಹಾಯಕರ ತಂಡ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ತ್ಯಾಜ್ಯ, ಅಲ್ಲಿ ವಾಸಿಸಲು ನಿರ್ಮಿಸಿಕೊಂಡಿದ್ದ ಶೆಡ್ಗಳನ್ನು ಜೆಸಿಬಿಯಿಂದ ತೆರವುಗೊಳಿಸಿದರು. ತ್ಯಾಜ್ಯ ಘಟಕಗಳಲ್ಲಿ ಅಸ್ಸಾಂ, ಒಡಿಶಾ ಮುಂತಾದ ಕಡೆಯಿಂದ ಜನರನ್ನು ಕರೆದುಕೊಂಡು ಬಂದು ತ್ಯಾಜ್ಯ ವಿಲೇವಾರಿ ಕೆಲಸ ಮಾಡಿಸಲಾಗುತ್ತಿದ್ದು, ಕೆಟ್ಟ ಪರಿಸ್ಥಿತಿಯಲ್ಲಿ ಅಲ್ಲಿನ ಜನರು ವಾಸ ಮಾಡುತ್ತಿದ್ದಾರೆ. ನಗರ ವಸತಿ ಗೃಹಗಳಿಂದ ಬರುವ ತ್ಯಾಜ್ಯವನ್ನು ಇಲ್ಲಿ ವಿಂಗಡಿಸಿ ಬೇರೆಡೆ ಸಾಗಿಸುವ ಕೆಲಸ ಮಾಡಲಾಗುತ್ತಿದ್ದು, ಎಲ್ಲ ಘಟಕಗಳನ್ನು ಮುಚ್ಚುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಸಾದಪ್ಪನಹಳ್ಳಿಯಲ್ಲಿ ಕೃಷಿ ಜಮೀನಿನಲ್ಲಿ ತ್ಯಾಜ್ಯ ವಿಲೇವಾರಿ ಕೆಲಸ ನಡೆಯುತ್ತಿದ್ದ ಬಗ್ಗೆ ಅ.24 ರಂದು ಸಮಗ್ರ ವರದಿಯನ್ನು ಪ್ರಕಟಿಸಿ ಅಧಿಕಾರಿಗಳ ಗಮನಸೆಳೆಯಲಾಗಿತ್ತು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಕೃಷಿಗೆಂದು ನೀಡಿರುವ ಜಮೀನಿನಲ್ಲಿ ಅಕ್ರಮ ಚಟುವಟಿಕೆ ಮಾಡುತ್ತಿರುವುದು ಅಪರಾಧ ಎಂದು ದೂರು ದಾಖಲಿಸಲು ತಹಸೀಲ್ದಾರ್ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ರಾಜಸ್ವ ನಿರೀಕ್ಷಕ ವಲ್ಲಿಜಾನ್ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐ ಆರ್ ದಾಖಲಾಗಿದೆ. ಸಾದಪ್ಪನಹಳ್ಳಿಯಲ್ಲಿ ವಿಕ ವರದಿಯಿಂದ ಎಫ್ಐಆರ್ ದಾಖಲಾಗುತ್ತಿದ್ದಂತೆ ವನಮನಹಳ್ಳಿಯಲ್ಲಿ ಎಲ್ಲವೂ ತೆರವು ಮಾಡಲು ಅಧಿಕಾರಿಗಳು ಮುಂದಾಗಿ, ಅಲ್ಲಿರುವ ಎಲ್ಲ ಸಾಮಗ್ರಿಗಳನ್ನು ಮೂರು ದಿನದೊಳಗೆ ತೆರವು ಮಾಡುವಂತೆ ಸೂಚನೆ ನೀಡಿ ಗಡುವು ನೀಡಿದ್ದಾರೆ. ಬೆಸ್ಕಾಂ ಕತ್ತರಿಅಕ್ರಮವಾಗಿ ತ್ಯಾಜ್ಯ ವಿಲೇ ಘಟಕಗಳಲ್ಲಿ ಶೆಡ್ಗಳನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ವಾಸಿಸುವ ಕುಟುಂಬಗಳಿಗೆ ಅಕ್ರಮವಾಗಿ ಪಡೆದಿದ್ದ ವಿದ್ಯುತ್ ಸಂಪರ್ಕವನ್ನು ಮಂಗಳವಾರ ಬೆಸ್ಕಾಂ ಅಧಿಕಾರಿಗಳು ದಾಳಿ ನಡೆಸಿ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿದರು. ಖಾಲಿ ಮಾಡುವಂತೆ ಮೂರು ದಿನ ಗಡುವು ನೀಡಿದ್ದೇವೆ. ಖಾಲಿ ಮಾಡಲಿಲ್ಲ ಅಂದರೇ ನಾವೇ ಜೆಸಿಬಿಯಿಂದ ಎಲ್ಲವನ್ನು ತೆರವು ಮಾಡುತ್ತೇವೆ. ಯಾವುದೇ ಕಾರಣಕ್ಕೂ ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡಿ ಪರಿಸರಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ. ವಲ್ಲಿಜಾನ್, ಆರ್ಐ ಸೂಲಿಬೆಲೆ
from India & World News in Kannada | VK Polls https://ift.tt/3eoB1lF