ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು ಬೆಂಗಳೂರು: ಮಹಾನಗರವನ್ನು ತೀವ್ರವಾಗಿ ಕಾಡುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿರುವ ಬಿಬಿಎಂಪಿಗೆ ಹಸಿ, ಒಣ ಮತ್ತು ನೈರ್ಮಲ್ಯ ತಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಹೊಸ ಟೆಂಡರ್ ಪದ್ಧತಿಯು ಯಶಸ್ಸು ತಂದುಕೊಡುವ ನಿರೀಕ್ಷೆ ಮೂಡಿಸಿದೆ. ಬಿಬಿಎಂಪಿಯು 2019ರ ಮೇ ನಲ್ಲಿ 168 ವಾರ್ಡ್ಗಳಿಗೆ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ 558 ಗುತ್ತಿಗೆದಾರರು ಭಾಗವಹಿಸಿದ್ದರು. ಇದರಲ್ಲಿ 15ಕ್ಕಿಂತ ಹೆಚ್ಚು ವಾರ್ಡ್ಗಳಲ್ಲಿ ವಿಲೇವಾರಿಗೆ ಮರು ಟೆಂಡರ್ ಕರೆಯಲಾಗುತ್ತಿದೆ. ಉಳಿದ ಗುತ್ತಿಗೆ ಸಂಸ್ಥೆಗಳಿಗೆ ಒಪ್ಪಿಗೆ ಪತ್ರ ನೀಡಲಾಗಿದೆ. ಈವರೆಗೆ 64 ಗುತ್ತಿಗೆ ಸಂಸ್ಥೆಗಳು ಕಾರ್ಯಾದೇಶ ಪಡೆದಿದ್ದು, 30 ವಾರ್ಡ್ಗಳಲ್ಲಿ ಕಸ ಸಂಗ್ರಹ ಕಾರ್ಯ ಆರಂಭವಾಗಿದೆ. ಇನ್ನುಳಿದ 34 ವಾರ್ಡ್ಗಳಲ್ಲಿ ಶೀಘ್ರದಲ್ಲೇ ಗುತ್ತಿಗೆ ಸಂಸ್ಥೆಗಳು ಹಸಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲಿವೆ. ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಳಂಬವಾಗಿದೆ. ಎಂಎಸ್ಜಿಪಿಯು 30 ವಾರ್ಡ್ಗಳಲ್ಲಿ ಕಸ ವಿಲೇವಾರಿಯ ಜವಾಬ್ದಾರಿ ಹೊತ್ತಿದೆ. ಈ ವಾರ್ಡ್ಗಳಲ್ಲಿ ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಹೊಸ ಟೆಂಡರ್ ಪದ್ಧತಿ ಜಾರಿಯಾಗಿದೆ. ಇಲ್ಲಿ ಮಿಶ್ರ ಕಸವನ್ನು ಸ್ವೀಕರಿಸುತ್ತಿಲ್ಲ. ಕಸ ನೀಡದವರು, ವಿಂಗಡಿಸಿ ಕೊಡದವರ ಮೇಲೆ ನಿಗಾ ಇಟ್ಟಿದ್ದು, ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಬಿಸಾಡುವವರಿಗೆ ಮೊದಲ ಸಲ 500 ರೂ. ಮತ್ತು ಎರಡನೇ ಬಾರಿ 1000 ರೂ. ದಂಡ ಹಾಕಲಾಗುತ್ತಿದೆ. ಪರಿಣಾಮ, ಜನರು ಎಚ್ಚೆತ್ತುಕೊಂಡು ಕಸವನ್ನು ಪ್ರತ್ಯೇಕಿಸಿ ಕೊಡುತ್ತಿದ್ದರಿಂದ ಇದರಿಂದ ಪ್ರಮಾಣವು ಜಾಸ್ತಿಯಾಗಿದೆ. ಈ ಮೊದಲು ನಿತ್ಯ 400-500 ಟನ್ನಷ್ಟು ಹಸಿ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಇದೀಗ ಆ ಪ್ರಮಾಣವು 1000 ಟನ್ಗೆ ಏರಿಕೆಯಾಗಿದೆ. ಸಂಸ್ಕರಣಾ ಘಟಕಗಳಿಗೆ ಸಾಗಣೆಯಾಗುತ್ತಿರುವ ಹಸಿ ಕಸದ ಪ್ರಮಾಣವೂ ಹೆಚ್ಚಾಗಿದೆ. ಆಟೊ ಟಿಪ್ಪರ್, ಕಾಂಪ್ಯಾಕ್ಟರ್ಗಳಲ್ಲಿ ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ವಾರ್ಡ್ನಲ್ಲಿ 700 ಮನೆಗಳಿಗೆ ಒಂದು ಬ್ಲಾಕ್ ಗುರುತಿಸಿ, ಅದಕ್ಕನುಗುಣವಾಗಿ ಆಟೊ ಟಿಪ್ಪರ್, ಕಾಂಪ್ಯಾಕ್ಟರ್ಗಳು, ಪೌರ ಕಾರ್ಮಿಕರು, ಚಾಲಕರು ಮತ್ತು ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಂಗಡಣೆ ಬಗ್ಗೆ ಜನ ಜಾಗೃತಿ ಮೂಡಿಸಲು ಆಟೊ ಟಿಪ್ಪರ್ಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಸಂಪರ್ಕ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿಕಸ ವಿಂಗಡಣೆ ಕುರಿತು ಅರಿವು ಮೂಡಿಸುತ್ತಿದ್ದಾರೆ. ವಾರದಲ್ಲಿ ಎರಡು ದಿನ ಒಣ ಕಸ ಸಂಗ್ರಹಿಸಲಾಗುತ್ತಿದೆ. ಕಾಂಪೋಸ್ಟ್ಗೆ ಡಿಮ್ಯಾಂಡ್ಪಾಲಿಕೆಯು ನಿರ್ಮಿಸಿರುವ 7 ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳ ಪೈಕಿ ನಾಲ್ಕು ಕಾರ್ಯ ನಿರ್ವಹಿಸುತ್ತಿವೆ. ಈ ಮೊದಲು ಸಂಸ್ಕರಣಾ ಘಟಕಗಳ ಸಾಮರ್ಥ್ಯಕ್ಕೆ ತಕ್ಕಷ್ಟು ಹಸಿ ಕಸ ಸಾಗಣೆ ಆಗುತ್ತಿರಲಿಲ್ಲ. ಹೊಸ ಟೆಂಡರ್ ಪದ್ಧತಿಯಿಂದಾಗಿ ವಿಂಗಡಣೆ ಪ್ರಮಾಣವು ಹೆಚ್ಚಿದ್ದು, ಅಧಿಕ ಹಸಿ ಕಸವನ್ನು ಘಟಕಗಳು ಸ್ವೀಕರಿಸುತ್ತಿವೆ. ಈ ತ್ಯಾಜ್ಯದಿಂದ ತಯಾರಿಸುತ್ತಿರುವ ಕಾಂಪೋಸ್ಟ್ ಗೊಬ್ಬರಕ್ಕೆ ರೈತರಿಂದ ಸಾಕಷ್ಟು ಬೇಡಿಕೆ ಬರುತ್ತಿದೆ. ಘಟಕಗಳಲ್ಲಿ 35 ಎಂಎಂ ಅಳತೆಯ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. 'ಎ' ಗ್ರೇಡ್ ಗೊಬ್ಬರವನ್ನು ಟನ್ಗೆ 200 ರೂ. ಪಾವತಿಸಿ ಕೆಸಿಡಿಸಿಯಿಂದ ಖರೀದಿ ಮಾಡಲು ಅವಕಾಶವಿದೆ. ಈ ಗೊಬ್ಬರದ ಬೆಲೆಯು ಟನ್ಗೆ 1200 ರೂ. ಇದ್ದು, ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಉಳಿದ 1000 ರೂ.ಗಳನ್ನು ಸರಕಾರವೇ ಭರಿಸುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಪಾಲಿಕೆಯು 2017ರ ಫೆ. 1ರಿಂದಲೇ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸಿದೆ. ಆರಂಭದಲ್ಲಿ ಶೇ 50ರಷ್ಟಿದ್ದ ವಿಂಗಡಣೆ ಪ್ರಮಾಣವು ಕ್ರಮೇಣ ಶೇ 25ಕ್ಕೆ ಕುಸಿಯಿತು. ಇದರಿಂದಾಗಿ ಮಿಶ್ರ ಕಸವನ್ನು ವಿಲೇವಾರಿ ಮಾಡಲು ಜಾಗವಿಲ್ಲದೆ ಪರದಾಡಿತು. ಸದ್ಯ ಮಿಶ್ರ ಕಸದ ಭೂಭರ್ತಿಗೆ ಮಿಟಗಾನಹಳ್ಳಿ ಘಟಕವನ್ನೇ ನೆಚ್ಚಿಕೊಳ್ಳಲಾಗಿದೆ. ಇಲ್ಲಿಗೆ ಸದ್ಯ 2450 ಟನ್ ಮಿಶ್ರ ಕಸ ಹೋಗುತ್ತಿದೆ. ಈ ಹಿಂದೆ ನಿವಾಸಿಗಳು ಕಸವನ್ನು ವಿಂಗಡಿಸಿ ಕೊಟ್ಟರೂ, ಗುತ್ತಿಗೆದಾರರು ಮಿಶ್ರ ಮಾಡಿಕೊಂಡು ಕೊಂಡೊಯ್ಯುತ್ತಿದ್ದರು. ಇದಕ್ಕೆ ಕಡಿವಾಣ ಹಾಕುವ ಸಲುವಾಗಿಯೇ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲು ಟೆಂಡರ್ ಪದ್ಧತಿಯನ್ನು ಅನುಷ್ಠಾನಗೊಳಿಸಲಾಗಿದೆ. ಯಾವ್ಯಾವ ವಾರ್ಡ್ಗಳಲ್ಲಿ ಟೆಂಡರ್ ಜಾರಿ? 1, 2, 3, 9, 15, 39, 51, 53, 54, 82, 92, 104, 127, 128, 131, 137, 138, 141, 146, 147, 150, 157, 158, 161, 165, 167, 169, 175, 190, 191. ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳ ವಿವರ ಘಟಕ ಸಾಮರ್ಥ್ಯ (ಟನ್ಗಳಲ್ಲಿ) -ಸ್ವೀಕರಿಸುತ್ತಿರುವ ಪ್ರಮಾಣ ಚಿಕ್ಕನಾಗಮಂಗಲ 300 -269 ದೊಡ್ಡಬಿದರಕಲ್ಲು 150 -128 ಕನ್ನಹಳ್ಳಿ 350- 318 ಕೆಸಿಡಿಸಿ 300 -49 ಲಿಂಗಧೀರನಹಳ್ಳಿ 150- 00 ಸೀಗೇಹಳ್ಳಿ 120- 00 ಸುಬ್ಬರಾಯನಪಾಳ್ಯ 150 -00 ಎಂಎಸ್ಜಿಪಿ 500- 229 ಒಟ್ಟು 2020- 993
from India & World News in Kannada | VK Polls https://ift.tt/2JloJ23