ಹೊಸದಿಲ್ಲಿ: ಪ್ರಸಕ್ತ ವರ್ಷದ ಕೊನೆಯಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಆರಂಭಿಕ ಬ್ಯಾಟ್ಸ್ಮನ್ ಲಭ್ಯತೆ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಮಹತ್ವದ ಸುಳಿವು ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ ತಂಡ ಹಮ್ಮಿಕೊಳ್ಳಲಿದೆ. ಮೂರು ಪಂದ್ಯಗಳ ಟಿ20, ಮೂರು ಪಂದ್ಯಗಳ ಓಡಿಐ ಹಾಗೂ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೆಣಸಲಿದೆ. ನ.27 ರಿಂದ ಸೀಮಿತ ಓವರ್ಗಳ ಸರಣಿ ಆರಂಭವಾಗಲಿದೆ. ಕಳೆದ ವಾರ ಮೂರೂ ಸ್ವರೂಪದ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಸೀಮಿತ ಓವರ್ಗಳ ಉಪ ನಾಯಕ ರೋಹಿತ್ ಶರ್ಮಾ ಅವರನ್ನು ಎಲ್ಲಾ ಮಾದರಿಯ ತಂಡದಿಂದ ಕೈ ಬಿಡಲಾಗಿತ್ತು. ರೋಹಿತ್ ಶರ್ಮಾ ಅವರ ಗಾಯ ಹಾಗೂ ಫಿಟ್ನೆಸ್ ಕುರಿತಂತೆ ವೈದ್ಯಕೀಯ ತಂಡ ನಿರ್ವಹಿಸಿದ್ದು, ಅವರು ಸದ್ಯ ಫಿಟ್ ಇಲ್ಲ. ಹಾಗಾಗಿ ಅವರನ್ನು ಎಲ್ಲಾ ಮಾದರಿಯ ತಂಡದಿಂದ ಕೈ ಬಿಡಲಾಗಿದೆ ಎಂದು ಬಿಸಿಸಿಐ ತಿಳಿಸಿತ್ತು. ಆದರೆ, ತಂಡ ಪ್ರಕಟಿಸುವ ಒಂದು ಗಂಟೆಗೂ ಮುನ್ನ ರೋಹಿತ್ ಶರ್ಮಾ ಫ್ರಾಂಚೈಸಿ ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಈ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯನ್ನು ಪೋಸ್ಟ್ ಮಾಡಿತ್ತು. ಇದರಿಂದ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಠಿಯಾಗಿತ್ತು. ರೋಹಿತ್ ಶರ್ಮಾ ಹಾಗೂ ಇಶಾಂತ್ ಅವರ ಆಯ್ಕೆ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಮುಖ ಸುಳಿವು ನೀಡಿದ್ದಾರೆ. "ಇಶಾಂತ್ ಶರ್ಮಾ ಹಾಗೂ ರೋಹಿತ್ ಶರ್ಮಾ ಅವರ ಗಾಯವನ್ನು ನಿರ್ವಹಿಸುತ್ತಿದ್ದೇವೆ. ಇಶಾಂತ್ ಶರ್ಮಾ ಸಂಪೂರ್ಣವಾಗಿ ಹೊರಗುಳಿಯುವುದಿಲ್ಲ. ಅವರು ಟೆಸ್ಟ್ ಸರಣಿಗೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾ ಸರಣಿಗೆ ಫಿಟ್ ಆಗಬೇಕು. ಯಾವುದೇ ಹಂತದಲ್ಲಿ ಅವರು ಫಿಟ್ ಆದರೆ, ಆಯ್ಕೆದಾರರು ಬಲಗೈ ಬ್ಯಾಟ್ಸ್ಮನ್ ಸೇರ್ಪಡೆ ಬಗ್ಗೆ ಯೋಚನೆ ಮಾಡಲಿದ್ದಾರೆ," ಎಂದು ಹೇಳಿದರು. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಾಯಿಂಟ್ಸ್ ಟೇಬಲ್ ಅಗ್ರ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಜತೆ ಸದ್ಯ ರೋಹಿತ್ ಶರ್ಮಾ ಯುಎಇಯಲ್ಲಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾಗೆ ತೆರಳಿದ ನಂತರ ಈ ಇಬ್ಬರೂ ತಡವಾಗಿ ಪ್ರಯಾಣ ಬೆಳೆಸಲಿದ್ದಾರೆ. ಆಸ್ಟ್ರೇಲಿಯಾಗೆ ವಿಮಾನಗಳು ಲಭ್ಯವಿದೆ ಎಂದು ತಿಳಿಸಿದ್ದಾರೆ. "ಆಸ್ಟ್ರೇಲಿಯಾದಲ್ಲಿ ಅವರದೇ ತಂಡದ ವಿರುದ್ಧ ಆಡುವುದು ತುಂಬಾ ಕಠಿಣ. ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮರಳಿರುವುದರಿಂದ ತಂಡ ತುಂಬಾ ಬಲಿಷ್ಠವಾಗಿದೆ. ಅಲ್ಲದೆ, ಮಾರ್ನಸ್ ಲಾಬುಶೇನ್ ಲಭ್ಯತೆಯಿಂದ ತಂಡ ಇನ್ನಷ್ಟು ಸಮತೋಲನದಿಂದ ಕಾಣುತ್ತಿದೆ. ಇದು ಭಾರತಕ್ಕೆ ಉತ್ತಮ ಪರೀಕ್ಷೆಯಾಗಿದೆ. ಆದರೆ ಗೆಲ್ಲಲು ಇವರು ಅರ್ಹರಾಗಿದ್ದಾರೆ. ಇದು ಅತ್ಯುತ್ತಮ ಸರಣಿ," ಎಂದು ಗಂಗೂಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. "ಎರಡೂ ತಂಡಗಳಿಗೂ ಗೆಲ್ಲಲು 50-50 ಅವಕಾಶವಿದೆ. ಎಷ್ಟು ರನ್ಗಳನ್ನು ಕಲೆ ಹಾಕುತ್ತಾರೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಯಾರೂ ಬ್ಯಾಟಿಂಗ್ ಚೆನ್ನಾಗಿ ಮಾಡುತ್ತಾರೆ ಅವರು ಗೆಲುವು ಪಡೆಯಲಿದ್ದಾರೆ," ಎಂದು ಭಾರತದ ಮಾಜಿ ನಾಯಕ ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jSGItx