ಬಾಗಲಕೋಟೆ: ಜಿಲ್ಲೆಯಲ್ಲಿ ಭಾನುವಾರ ನಡೆದಿದ್ದ ರಾಜ್ಯ ಪೋಲಿಸ್ ಇಲಾಖೆಯ ಸಶಸ್ತ್ರ & ಮೀಸಲು ಪಡೆ ಪರೀಕ್ಷೆ ವೇಳೆ ಮೊಬೈಲ್ ಡಿವೈಸ್ ಬಳಸಿ ಉತ್ತರ ಪತ್ರಿಕೆ ಬರೆಯುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಬಂಧಿತ ಅಭ್ಯರ್ಥಿಯನ್ನು ಶ್ರೀಮಂತ ಸದಲಗಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಾಗಲಕೋಟೆ ಎಸ್.ಪಿ.ಲೋಕೇಶ್ ಜಗಲಾಸರ್ ಮೊಬೈಲ್ ಡಿವೈಸ್ ಬಳಸಿ ಉತ್ತರ ಪತ್ರಿಕೆ ಬರೆಯುತ್ತಿದ್ದ ಅಭ್ಯರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಶ್ರೀಮಂತ ಸದಲಗಿ ಬಂಧಿತ ಆರೋಪಿಯಾಗಿದ್ದು, ಈತ ನಗರದ ವಿದ್ಯಾಗಿರಿಯ ಪಬ್ಲಿಕ್ ಶಾಲೆಯ 464ನೇ ಬ್ಲಾಕ್ ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ, ಮಾಸ್ಕ್ ಒಳಗೊಂದು ಮತ್ತು ಕಿವಿಯಲ್ಲೊಂದು ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಕಿಕೊಂಡು ಮೋಸದಿಂದ ಉತ್ತರ ಪತ್ರಿಕೆ ಬರೆಯುತ್ತಿದ್ದ ಎಂದು ಹೇಳಿದ್ದಾರೆ. ಯುವಕನ ಕೃತ್ಯಕ್ಕೆ ಸಹಕಾರ ನೀಡಿದವರನ್ನು ಕೂಡ ಬಂಧಿಸುವುದಾಗಿ ಎಸ್.ಪಿ.ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸ್ ಕಾನ್ಸಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಭಾನುವಾರ ಅಂದಾಜು 10 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
from India & World News in Kannada | VK Polls https://ift.tt/2J1mJMi